ಹುಬ್ಬಳ್ಳಿ:
ಸೋಮವಾರದಂದು ಮಹಾನಗರದ ನೂರಾರು ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ರತಿ-ಕಾಮಣ್ಣ ಮೂರ್ತಿಯನ್ನು ಗ್ರಾಮೀಣ ಭಾಗ ಸೇರಿದಂತೆ ನಗರದ ಕೆಲವು ಭಾಗಗಳಲ್ಲಿ ಮಂಗಳವಾರದಂದು ಅದ್ಧೂರಿ ಮೆರವಣಿಗೆ ನಡೆಸಿ ದಹನ ಮಾಡುವ ಮೂಲಕ ಪರಸ್ಪರ ಬಣ್ಣ ಎರಚಿ ಹೋಳಿ ಆಡಿ ಸಂಭ್ರಮಿಸಿದರು.
ಮೆರಗುತಂದ ಕರಿಬಂಡಿ ಮೆರವಣಿಗೆ:ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಹಳೇ ಹುಬ್ಬಳ್ಳಿ ಭಾಗದಲ್ಲಿ ಕರಿಬಂಡಿ ಹಾಗೂ ಚಕ್ಕಡಿಗಳಲ್ಲಿ ರತಿ-ಕಾಮಣ್ಣರ ಮೂರ್ತಿಗಳನ್ನಿರಿಸಿ ಯುವಕರೇ ಚಕ್ಕಡಿ ಹಾಗೂ ಕರಿಬಂಡಿ ಎಳೆಯುವ ಮೂಲಕ ಮೆರವಣಿಗೆಗೆ ಮೆರಗು ತಂದರು. ಈ ವೇಳೆ ಮಹಿಳೆಯರು, ಯುವಕರಾದಿಯಾಗಿ ಎಲ್ಲರೂ ಓಕುಳಿಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಹಳೇಹುಬ್ಬಳ್ಳಿಯ ಚೆನ್ನಪೇಟ, ಹಿರೇಪೇಟ, ನೇಕಾರನಗರ, ಕೃಷ್ಣಾಪುರ ಓಣಿ, ಹಿರೇಪೇಟೆ ಓಣಿ, ಇಂಡಿ ಪಂಪ್, ಅಂಬೇಡ್ಕರ್ ನಗರ, ಘೋಡಕೆ ಓಣಿ, ಕೇಶ್ವಾಪುರದ ಕೆಲವು ಭಾಗ, ಗೋಪನಕೊಪ್ಪದ ಕೆಲವು ಭಾಗಗಳಲ್ಲಿ ಮಂಗಳವಾರ ಓಕುಳಿ ಆಡಿ ಸಂಭ್ರಮಿಸಿದರು. ಹಳೇ ಹುಬ್ಬಳ್ಳಿಯಲ್ಲಿ ರೇನ್ ಡ್ಯಾನ್ಸ್ನಲ್ಲಿ ಯುವಕರು, ಯುವತಿಯರು, ಮಕ್ಕಳು, ವೃದ್ಧರಾದಿಯಾಗಿ ಕುಣಿದು ಕುಪ್ಪಳಿಸಿದರು.