ಚನ್ನಪಟ್ಟಣ: ಆನ್ಲೈನ್ ಮತ್ತು ಇತರೆ ಕೆಲಸಗಳಿಂದ ಮುಕ್ತಿ ನೀಡಿ ಶಿಕ್ಷಕರಿಗೆ ಪಾಠ ಮಾಡಲು ಅವಕಾಶ ನೀಡುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಸರ್ಕಾರಿ ನೌಕರರ ಸಂಘ, ಕರ್ನಾಟಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಂಟಿ ಆಶ್ರಯದಲ್ಲಿ ಜಾಥಾ ಮಾಡಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಎಸ್ಡಿಎಂಸಿ ಉಪಾಧ್ಯಕ್ಷ ಶಂಭೂಗೌಡ ಮಾತನಾಡಿ, ಶಿಕ್ಷಕರಿಗೆ ಪಾಠ ಮಾಡುವುದರ ಜೊತೆಗೆ ಹತ್ತಾರು ಕೆಲಸಗಳನ್ನು ನೀಡುತ್ತಿರುವುದು ಅವರಲ್ಲಿ ಒತ್ತಡ ಉಂಟು ಮಾಡುತ್ತಿದೆ. ಒತ್ತಡ ತಾಳಲಾರದೆ ಇತ್ತೀಚೆಗೆ ಶಿಕ್ಷಕ ಸುಚೇಂದ್ರ ಸಾವು ತಾಜಾ ಉದಾಹರಣೆ. ಇನ್ನಾದರೂ ಸರ್ಕಾರ ಕಣ್ಣು ತೆರೆಯಬೇಕೆಂದು ಒತ್ತಾಯಿಸಿದರು.
ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಮಾತನಾಡಿ, ಜಿಲ್ಲಾದ್ಯಂತ ಶಿಕ್ಷಕರ ಕೊರತೆಯಿದ್ದು, ಶಾಲೆಗಳು ನಲುಗಿ ಹೋಗುತ್ತಿವೆ, ಹಿಂದೆಲ್ಲಾ ಶಿಕ್ಷಕರು ಬರೀ ಪಾಠ ಮಾಡುವುದಕ್ಕೆ ಸಿಮೀತವಾಗಿದ್ದರೂ ಈಗ ಪಾಠ ಬಿಟ್ಟು ಬೇರೆಲ್ಲಾ ಕೆಲಸಗಳನ್ನು ನಮ್ಮಿಂದ ಮಾಡಿಸುತ್ತಿದ್ದು, ಇದರ ವಿರುದ್ಧ ನಾವೆಲ್ಲಾ ಧ್ವನಿ ಎತ್ತಬೇಕಾದ ಅನಿವಾರ್ಯತೆ ಎದುರಾಗಿದೆ. ಆನ್ಲೈನ್ ಒತ್ತಡ ಕಡಿಮೆ ಮಾಡಿ ಶಿಕ್ಷಕರು ನೆಮ್ಮದಿಯಾಗಿ ಪಾಠ ಮಾಡಲು ಬಿಡಿ ಎಂದು ಆಗ್ರಹಿಸಿದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಧೀಂದ್ರ ಮಾತನಾಡಿ, ಪ್ರತಿನಿತ್ಯ ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡುವುದು, ಒತ್ತಡ ಹಾಕುವುದು, ಮಾನಸಿಕ ಹಿಂಸೆ ನೀಡುವುದು ನಡೆಯುತ್ತಿದೆ. ಸರ್ಕಾರಿ ಕೆಲಸ ಮಾಡುವ ನಮ್ಮ ಮೇಲೆ ಈ ರೀತಿ ಮಾಡಿದರೆ ನಾವೂ ನೆಮ್ಮದಿಯಾಗಿ ಕೆಲಸ ಮಾಡಲು ಸಾಧ್ಯವೇ ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕೆಂದು ಹೇಳಿದರು.
ಪ್ಪೊಟೊ೨೨ಸಿಪಿಟಿ೨:
ಚನ್ನಪಟ್ಟಣದಲ್ಲಿ ಆನ್ಲೈನ್ ಮತ್ತು ಇತರೆ ಕೆಲಸಗಳಿಂದ ಮುಕ್ತಿ ನೀಡುವಂತೆ ಸರ್ಕಾರಿ ನೌಕರರು ಜಾಥಾ ನಡೆಸಿದರು.