ಕನ್ನಡಪ್ರಭ ವಾರ್ತೆ ಮಧುಗಿರಿ
ಶ್ರೀಸಾಮಾನ್ಯರಿಗೂ ತನ್ನ ತ್ರಿಪದಿಗಳು ಅರ್ಥವಾಗುವುವಂತೆ ಸರಳ ಭಾಷೆಯಲ್ಲಿ ಕಟ್ಟಿಕೊಟ್ಟ ಕವಿ ಸರ್ವಜ್ಞ ಎಲ್ಲರ ಅನುಭವವನ್ನು ತನ್ನ ತ್ರಿಪದಿಗೆ ಅಣಿ ಮಾಡಿ ಸಾಹಿತ್ಯದ ಮೇಲು ಪರ್ವತವಾದ ಕವಿ ಇಂದಿಗೂ ಜನಮನವನ್ನು ನಿಯಂತ್ರಿಸುವ ಮಾರ್ಗದರ್ಶನ ಮಾಡುವ ಸಾಮಾಜಿಕ ಬದುಕನ್ನು ಹಸನುಗೊಳಿಸುವ ವಿಚಾರ ಧಾರೆಗಳನ್ನು ನೀಡಿರುವ ಕವಿ ಸರ್ವಜ್ಞರ ತ್ರಿಪದಿಗಳು ಎಂದೆಂದಿಗೂ ಸಾರ್ವಕಾಲಿಕ ಎಂದು ಉಪವಿಭಾಗಾಧಿಕಾರಿ ಗೋಟೋರು ಶಿವಪ್ಪ ಅಭಿಪ್ರಾಯಪಟ್ಟರು.ಮಂಗಳವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಸರ್ವಜ್ಞ ವೇದಿಕೆ ಮತ್ತು ಕುಂಭಾರ ಸಂಘದ ವತಿಯಿಂದ ಆಯೋಜಿಸಿದ್ದ ಕವಿ ಸರ್ವಜ್ಞ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರ್ವಜ್ಞ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟರಮಣಪ್ಪ ಮಾತನಾಡಿ, ಸಮಾಜದಲ್ಲಿನ ಸಣ್ಣ ಸಣ್ಣ ಸಮುದಾಯಗಳು ಒಗ್ಗಟ್ಟಾದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಮೇಲು ,ಕೀಳು ಎಂಬ ಭಾವನೆ ಸಲ್ಲ, ನಾವು ಅತಿ ಕಡಿಮೆ ಜಮೀನು ಹೊಂದಿದ್ದು, ಪಹಣಿ, ಪೌತಿಖಾತೆ, ಬಿಪಿಎಲ್ ಕಾರ್ಡ್, ನಿವೇಶನ, ಮನೆ ಇಂತಹ ಮೂಲಭೂತ ಸೌಲಭ್ಯಗಳನ್ನು ಮಾತ್ರ ಕೇಳುತ್ತೇವೆ. ಅಧಿಕಾರಿಗಳು ಇದಕ್ಕೆ ಸ್ಪಂದಿಸಿ ಕೆಲಸ ಮಾಡಿಕೊಟ್ಟರೆ ಧ್ವನಿ ಇಲ್ಲದವರಿಗೆ ಧ್ವನಿ ನೀಡಿದಂತಾಗುತ್ತದೆ. ಅಲ್ಲದೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಾಲೂಕಿನ ತಳ ಸಮುದಾಯಗಳು ಮತ್ತು ಎಲ್ಲ ಜಾತಿಯ ಬಡವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವುದನ್ನು ಕೃತಜ್ಞತೆಯಿಂದ ಸ್ಮರಿಸಿದರು.ಸರ್ಕಾರಗಳು ಜಾತಿ ಸಮೀಕ್ಷೆ ವರದಿ ಸ್ವೀಕರಿಸಿ ಅದನ್ನು ಜಾರಿಗೊಳಿಸಬೇಕು. ಅಧಿಕಾರಿಗಳು ಸ್ಮಶಾನವಿಲ್ಲದ ಗ್ರಾಮಗಳನ್ನು ಗುರಿತಿಸಿ ಸ್ಮಶಾನ್ಕಕೆ ಸ್ಥಳಾವಕಾಶ ಮಾಡಿಕೊಡುವಂತೆ ಅಧಿಕರಿಗಳಿಗೆ ಮನವಿ ಮಾಡಿದರು.
ತಹಸೀಲ್ದಾರ್ ಸಿಗ್ಬತವುಲ್ಲಾ, ಇಒ ಲಕ್ಷ್ಮಣ್, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಉಪನ್ಯಾಸಕ ಎನ್. ಮಹಾಲಿಂಗೇಶ್ ಮಾತನಾಡದರು. ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ್, ನೌಕರರ ಸಂಘದ ಅಧ್ಯಕ್ಷ ಜಿ. ಜಯರಾಮಯ್ಯ, ಕವಯತ್ರಿ ವೀಣಾ ಶ್ರೀನಿವಾಸ್, ರೇಷ್ಮೆ ಸಹಾಯಕ ನಿರ್ದೇಶಕ ಟಿ. ಲಕ್ಷ್ಮೀನರಸಯ್ಯ, ಬಿಸಿಎಂ ಅಧಿಕಾರಿ ಜಯರಾಂ, ಅರಣ್ಯಾಧಿಕಾರಿ ಸುರೇಶ್, ಪುರಸಭೆ ಮಾಜಿ ಸದಸ್ಯ ಎಂ.ಜಿ. ರಾಮು, ಸರ್ವಜ್ಞ ವೇದಿಕೆ ಖಜಾಂಚಿ ಬಸವರಾಜು, ಮುಖಂಡರಾದ ಮೂಡ್ಲಗಿರೀಶ್, ಸಿದ್ದಪ್ಪ, ಶ್ರೀನಿವಾಸ್ ಇತರರಿದ್ದರು.