ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯ ಶಿಂಡನಪುರ-ದೊಡ್ಡ ತುಪ್ಪೂರು ನಡುವಿನ ಸೇತುವೆ ಹಾಗೂ ತೆರಕಣಾಂಬಿ ಬಳಿಯ ಜೆಎಸ್ಎಸ್ ಪ್ರೌಢಶಾಲೆಯ ಮುಂದಿನ ಸೇತುವೆಗಳ ಎರಡು ಕಡೆ ರಸ್ತೆ ಅರ್ಧ ಅಡಿಯಷ್ಟು ಕುಸಿದಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ.
ಎರಡು ಸೇತುವೆಗಳ ಎರಡು ಬದಿ ಅರ್ಧದಡಿಯಷ್ಟು ರಸ್ತೆ ಕುಸಿತಗೊಂಡು ವಾಹನಗಳ ಹಳ್ಳಕ್ಕೆ ಬಿದ್ದಾಗ ಸದ್ದಿನ ಜೊತೆಗೆ ಸಣ್ಣ ಪುಟ್ಟ ವಾಹನಗಳ ಆಕ್ಸಲ್ ಕಟ್ಟಾಗಿವೆ ಜೊತೆಗೆ ವೇಗವಾಗಿ ಬಂದ ವಾಹನಗಳು ದಿಡೀರ್ ಬ್ರೇಕ್ ಹಾಕಿದಾಗ ಹಿಂದಿನಿಂದ ಬಂದ ವಾಹನಗಳು ಡಿಕ್ಕಿ ಹೊಡೆದುಕೊಂಡಿವೆ.ಈ ರಸ್ತೆಯಲ್ಲಿ ಹೊಸದಾಗಿ ವಾಹನಗಳ ಸವಾರರಿಗೆ ಎರಡು ಸೇತುವೆಗಳ ಹಳ್ಳ ಗೊತ್ತಾಗದೆ ಹಳ್ಳದಲ್ಲಿ ಬಿಟ್ಟು ವಾಹನಗಳಲ್ಲಿದ್ದವರ ತಲೆಗೆ ಪೆಟ್ಟು ಬಿದ್ದಿದೆ ಅಲ್ಲದೆ ಕೆಲವರಿಗೆ ನಡು ಸಿಕ್ಕಿಕೊಂಡಿರುವ ಉದಾಹರಣೆ ಸಾಕಷ್ಟು ಇವೆ.
ಅಪಘಾತ ತಡೆಯಲಿ: ಶಿಂಡನಪುರ-ದೊಡ್ಡ ತುಪ್ಪೂರು ಬಳಿ ಸೇತುವೆ ಹಾಗು ತೆರಕಣಾಂಬಿ ಜೆಎಸ್ಎಸ್ ಪ್ರೌಢ ಶಾಲೆಯ ಬಳಿಯ ಸೇತುವೆ ಎರಡು ಬದಿ ಹಳ್ಳ ಬಿದ್ದಿರುವುದನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಮುಚ್ಚಿ ಅಪಘಾತ ತಡೆಯಲಿ ಎಂದು ಸಾರ್ವಜನಿಕರು ಸಲಹೆ ನೀಡಿದ್ದಾರೆ.
ಕಣ್ಣಿಗೆ ಕಾಣಲ್ವ?:ಜಿಲ್ಲಾ ಕೇಂದ್ರದ ರಸ್ತೆಯ ಎರಡು ಸೇತುವೆ ಬಳಿ ಬಿದ್ದ ಹಳ್ಳಗಳು ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೇ?ಹಳ್ಳ ಬಿದ್ದು ಅಪಘಾತವಾಗುತ್ತದೆ ಎಂಬ ಸಾಮಾಜಿಕ ಕಳಕಳಿ ಇಲ್ಲವೇ ಎಂದು ಬೈಕ್ ಸವಾರ ನವೀನ್ ಹೇಳಿದ್ದಾರೆ. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕ್ಷೇತ್ರ ಪ್ರವಾಸದ ಸಮಯದಲ್ಲಿ ಜಿಲ್ಲಾ ಕೇಂದ್ರದ ರಸ್ತೆಯಲ್ಲಿ ಸಂಚರಿಸುವಾಗ ೨ ಸೇತುವೆ ಬಳಿ ಬಿದ್ದ ಹಳ್ಳ ಗಮನಿಸಿ ಹಳ್ಳ ಮುಚ್ಚಲಿ ಅಧಿಕಾರಿಗಳಿಗೆ ಸೂಚಿಸಲಿ ಎಂದು ಬಲಚವಾಡಿ ಗ್ರಾಮದ ರೈತರೊಬ್ಬರು ಒತ್ತಾಯಿಸಿದ್ದಾರೆ.ಸೆಂಟ್ರಲ್ ರೋಡ್ ಅನುದಾನದಲ್ಲಿ ಗುಂಡ್ಲುಪೇಟೆ-ಚಾಮರಾಜನಗರ ರಸ್ತೆಯ ೫ ಕಿಮಿಗೆ ಆರು ಕೋಟಿ ಅನುದಾನ ಕೂಡ ಬಿಡುಗಡೆ ಆಗಿದ್ದು ಟೆಂಡರ್ ಆದ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೆಲಸ ಆಗುವ ತನಕ ಏನು ಮಾಡಲು ಆಗುವುದಿಲ್ಲ.
-ರವಿಕುಮಾರ್,ಎಇಇ, ಪಿಡಬ್ಲ್ಯೂಡಿ ಗುಂಡ್ಲುಪೇಟೆ