ಹೋಬಳಿ ಮಟ್ಟದ ಪ್ರಜಾಸೇವಾ ಸಮಾವೇಶಕ್ಕೆ ಉಪಸಭಾಧ್ಯಕ್ಷ ಹೇಳಿಕೆ
21 ದಿನದಲ್ಲಿ ಆಗುವ ಕೆಲಸವನ್ನು 21 ನಿಮಿಷದಲ್ಲಿ ಮಾಡಲು ಪ್ರಜಾಸೇವಾ ಕಾರ್ಯಕ್ರಮದಿಂದ ಸಾಧ್ಯ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ವೈದ್ಯ ತಿಳಿಸಿದರು.
ತಾಲೂಕಿನ ಮಾವಿನಕುರ್ವಾ ನವದುರ್ಗಾ ಸಭಾಭಾವನದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಲ್ಲಿಕೆಯಾದ ಎಲ್ಲ ಇಲಾಖೆಯ ಅರ್ಜಿಯನ್ನು 21 ದಿನದಲ್ಲಿ ಅರ್ಜಿ ವಿಲೇವಾರಿ ಮಾಡಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಆಗದೆ ಇರುವ ಕೆಲಸ ಯಾವುದು ಇಲ್ಲ. ಸಚಿವರು, ಶಾಸಕರು, ಅಧಿಕಾರಿಗಳ ಕಚೇರಿ ಅಲೆಯುವುದನ್ನು ತಪ್ಪಿಸುವುದು ಇಂತಹ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ತಾವು ವಾಸಿಸುವ ಮನೆಗೆ ಹಕ್ಕುಪತ್ರ ಇರಲಿಲ್ಲ. ಬಗರ್ ಹುಕ್ಂ ಯೋಜನೆಯಡಿ ಈ ದಿನ 7 ಮನೆಗಳಿಗೆ ಹಕ್ಕುಪತ್ರ ವಿತರಣೆಯ ಕಾರ್ಯವಾಗಲಿದೆ ಎಂದರು.ಕ್ಷೇತ್ರದ ಎಲ್ಲ ಶಾಲೆ, ಅಂಗನವಾಡಿಗೆ ಅರಣ್ಯ ಇಲಾಖೆಯ ಸುಪರ್ದಿಯಿಂದ ಆಯಾ ಶಾಲೆಯ ಹೆಸರಿಗೆ ಆರ್ಟಿಸಿ ಮಾಡಲಾಗಿದೆ ಎಂದ ಅವರು, ಒಳ್ಳೆಯ ಕೆಲಸ ಮಾಡಿದ ಅಧಿಕಾರಿಯನ್ನು ಅಭಿನಂದಿಸುವ ಜೊತೆ ಕೆಲಸ ಮಾಡದ ಅಧಿಕಾರಿಯನ್ನು ವರ್ಗಾಯಿಸುದಾಗಿ ತಿಳಿಸಿದರು.
7 ಜನರಿಗೆ ಬಗರಹುಕುಂ ಹಕ್ಕುಪತ್ರ, ಪಿಂಚಣೆ, ಸುಕನ್ಯಾ ಸಮೃದ್ಧಿ ಆದೇಶ ಪ್ರತಿ, ಅರಣ್ಯ ಇಲಾಖೆಯ ಪರಿಹಾರ ಧನದ ಚೆಕ್ ವಿತರಿಸಲಾಯಿತು. ವಿವಿಧ ಇಲಾಖೆಯ ಅರ್ಜಿ ಸ್ವೀಕರಿಸಿ ಚರ್ಚಿಸಿ ಸಂಬಂಧಿಸಿದ ಇಲಾಖೆಗೆ ಸ್ಥಳ ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಉಪಸಭಾಪತಿ ಸೂಚಿಸಿದರು.