ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹಿಂದೂ ಪಂಚಾಂಗದಲ್ಲಿ ಶ್ರಾವಣ ಶ್ರೇಷ್ಠ ಮಾಸಗಳಲ್ಲಿ ಒಂದಾಗಿದೆ. ಈ ಬಾರಿ ಐದು ಶ್ರಾವಣ ಶನಿವಾರಗಳು ಬಂದಿದ್ದು, ಶ್ರಾವಣ ಶನಿವಾರ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ಜನರು ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.ನಗರದ ಕಂದವಾರ ಬಾಗಿಲಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ದೇವಾಲಯ, ಬಜಾರ್ ರಸ್ತೆಯ ಕೋದಂಡ ರಾಮರ ದೇವಾಲಯ, ವಾಪಸಂದ್ರದ ರಂಗನಾಥ ಸ್ವಾಮಿ ದೇಗುಲ, ಗಂಗಮ್ಮ ಗುಡಿ ರಸ್ತೆಯ ಪೇಟೆ ಆಂಜನೇಯ ದೇಗುಲ, ಕೃಷ್ಣಾ ಟಾಕೀಸ್ ರಸ್ತೆಯ ಚನ್ನಕೇಶವ, ಜೀವಾಂಜನೇಯ, ನಂದಿ ರಸ್ತೆಯ ಮಹಾಕಾಳಿ ದೇವಾಲಯ, ಎಚ್.ಎಸ್. ಗಾರ್ಡನ್ನ ಸುಭ್ರಹ್ಮಣ್ಯ, ಶನಿ ಮಹಾತ್ಮ, ಸಾಯಿ ಬಾಬಾ, ಲಕ್ಷ್ಮೀನರಸಿಂಹ, ಬಿಬಿ ರಸ್ತೆಯ ಶನಿ ಮಹಾತ್ಮ ದೇಗುಲಗಳು, ನಗರ ಹೊರವಲಯದ ರಂಗಸ್ಥಳದ ರಂಗನಾಥ ದೇವಾಲಯ, ಸೂಲಾಲಪ್ಪ ದಿನ್ನೆಯ ಪ್ರಸನ್ನ ವೀರಾಂಜನೇಯ ದೇಗುಲ, ಆವಲಗುರ್ಕಿಯ ಈಶಾ ದೇಗುಲ, ಜಾಲಾರಿ ನರಸಿಂಹ ದೇಗುಲ, ತಾಲೂಕಿನ ಆವಲ ಬೆಟ್ಟ, ಬಾಗೇಪಲ್ಲಿ ತಾಲೂಕಿನ ಗಡದಿಂ ವೆಂಕಟರಮಣ ಸ್ವಾಮಿ ಹಾಗೂ ಗ್ರಾಮಾಂತರ ಪ್ರದೇಶಗಳ ವೈಷ್ಣವ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಹಾಗೂ ವಿವಿಧ ಪೂಜಾ ಕೈಂಕರ್ಯ ನಡೆದವು.
ನಗರ ಹೊರವಲಯದ ಸೂಲಾಲಪ್ಪ ದಿನ್ನೆಯ ಆದಿಚುಂಚನಗಿರಿ ಮಠದ ಪ್ರಸನ್ನ ವೀರಾಂಜನೇಯ ದೇಗುಲದ ಪ್ರಸನ್ನ ವೀರಾಂಜನೇಯನಿಗೆ ಬೆಣ್ಣೆ ಅಲಂಕಾರ, ನಗರದ ಕಂದವಾರ ಬಾಗಿಲ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀ ವೆಂಕಟೇಶ್ವರನಿಗೆ ಪುಷ್ಟಾಲಂಕಾರ ಮಾಡಲಾಗಿತ್ತು. ತಾಲೂಕಿನ ರಂಗಸ್ಥಳದ ರಂಗನಾಥ ದೇವಾಲಯ, ಶ್ರೀನಿವಾಸ ಸಾಗರದ ಶ್ರೀನಿವಾಸ ದೇಗುಲ, ಬಾಗೇಪಲ್ಲಿ ತಾಲೂಕಿನ ಗಡದಿಂ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಜನ ಸಾಗರವೇ ಹರಿದು ಬಂದಿತು.ಎಲ್ಲಾ ದೇವಸ್ಥಾನಗಳಲ್ಲಿ ಬೆಳಗ್ಗೆಯೇ ವಿವಿಧ ಪೂಜಾಕಾರ್ಯ ನಡೆದು ಭಕ್ತರು ದೈವ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತ ದೃಶ್ಯ ಸಾಮಾನ್ಯವಾಗಿತ್ತು. ಶ್ರೀನಿವಾಸ, ಲಕ್ಷ್ಮೀ ನರಸಿಂಹ ದೇಗುಲಗಳಲ್ಲಿ ಭಕ್ತರು ಗೋವಿಂದ ಗೋವಿಂದ ನಾಮಸ್ಮರಣೆ ಮಾಡಿ ತಮ್ಮ ಭಕ್ತಿ ಸಮರ್ಪಿಸಿದರು. ಎಲ್ಲಾ ದೇವಾಲಯಗಳಲ್ಲಿ ದಿನವಿಡೀ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.