ಮಲ್ಲಾಘಟ್ಟ ಕೆರೆ ಪ್ರವಾಸಿ ತಾಣವಾಗಿಸಲು ಪ್ರಾಮಾಣಿಕ ಪ್ರಯತ್ನ

KannadaprabhaNewsNetwork | Published : Nov 27, 2024 1:04 AM

ಸಾರಾಂಶ

ತುರುವೇಕೆರೆ ತಾಲೂಕಿನ ಜೀವನದಿಯಾಗಿರುವ ಮಲ್ಲಾಘಟ್ಟ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸಲು ತಾವು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕಿನ ಜೀವನದಿಯಾಗಿರುವ ಮಲ್ಲಾಘಟ್ಟ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸಲು ತಾವು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ತಾಲೂಕಿನ ಕಸಬಾ ಹೋಬಳಿ ಆನೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಾಘಟ್ಟ ಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಗಂಗಾ ಪೂಜೆ ಹಾಗೂ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡುತ್ತಿದ್ದರು.ತಾವು ಈ ಹಿಂದೆ ಶಾಸಕರಾಗಿದ್ದ ಸಂಧರ್ಭದಲ್ಲಿ ಕೆರೆಯನ್ನು ಹಾಗೂ ಕೆರೆ ಏರಿಯನ್ನು ಸಧೃಢಗೊಳಿಸುವ ಕಾರ್ಯ ಮಾಡಲಾಗಿದೆ. ನೂರಾರು ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆ ಕೋಡಿ ತುಂಬಿದ ಸಂಧರ್ಭದಲ್ಲಿ ಅದರ ವೈಭೋಗವನ್ನು ವಿವರಿಸಲು ಅಸಾಧ್ಯ. ಭೋರ್ಗರೆಯುವ ನೀರನ್ನು ನೋಡಲು ಜಿಲ್ಲೆಯ ವಿವಿಧ ಪ್ರದೇಶಗಳಿಂದ ಜನರು ಆಗಮಿಸುತ್ತಾರೆ. ಸೂರ್ಯ ಮುಳುಗುವ ಸನ್ನಿವೇಶವನ್ನು ನೋಡಲು ಜನರು ಕಾತರರಾಗಿರುತ್ತಾರೆ. ಈ ಕೆರೆಯನ್ನು ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ಪ್ರವಾಸಿ ತಾಣ ಮಾಡಿಸಲು ತಾವು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ತಾಲೂಕಿನ ಜನರ ಜೀವ ನಾಡಿಯಾಗಿರುವ ಮಲ್ಲಾಘಟ್ಟ ಕೆರೆ ಅಭಿವೃದ್ದಿ ಜೊತೆಗೆ ಈ ಭಾಗದಲ್ಲಿ ಹೆಚ್ಚಿನ ಅಭಿವೃದ್ದಿಗೆ ಒತ್ತು ನೀಡಬೇಕಿದೆ. ಮಲ್ಲಾಘಟ್ಟಕೆರೆ ಪಟ್ಟಣದ ಜನರ ಕುಡಿಯುವ ನೀರಿಗೆ ಆಧಾರವಾಗಿದೆ. ಅದಲ್ಲದೇ ರೈತರ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಗೂ ಜೀವ ಜಲವಾಗಿದೆ. ದಕ್ಷಿಣ ಕಾಶಿ ಎಂದು ಪ್ರಖ್ಯಾತಿ ಪಡೆದಿದೆ. ಪ್ರತಿ ನಿತ್ಯ ಹಲವು ತಾಲೂಕಿನಿಂದ ಗ್ರಾಮದ ದೇವರುಗಳನ್ನು ಇಲ್ಲಿಗೆ ತಂದು ಗಂಗಾ ಸ್ನಾನ ನೆರವೇರಿಸಲಾಗುತ್ತಿದೆ. ಮಹಿಳೆಯರು ಆಗಮಿಸಿ ಗಂಗಾಪೂಜೆ ಮಾಡುವ ಪ್ರತೀತಿ ರೂಡಿಯಲ್ಲಿದೆ ಎಂದರು. ಈ ಸಂಧರ್ಭದಲ್ಲಿ ಗಂಗಾಧರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ನಡೆಯಿತು. ನಂತರ ಕೆರೆಗೆ ಪೂಜೆ ಸಲ್ಲಿಸಲಾಯಿತು.

ಬಾಗಿನ ಕಾರ್ಯಕ್ರಮದಲ್ಲಿ ಯುವ ಜೆಡಿಎಸ್ ರಾಜ್ಯ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಶಾರಾಜಶೇಖರ್ ಸದಸ್ಯ ಎನ್.ಆರ್.ಸುರೇಶ್, ಮುಖ್ಯಾಧಿಕಾರಿ ಶ್ರೀನಾಥ್‌ಬಾಬು, ಆನೇಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಶ್ರೀ, ಸದಸ್ಯರಾದ ಪುನೀತ್, ಶಾರದಮ್ಮಬಸವರಾಜು, ಎಂ.ಬಿ.ರೇಣಕಪ್ಪ, ಗಂಗಾಧರೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿಯ ಪ್ರಕಾಶ್, ಕಾರ್ಯದರ್ಶಿ ಕಾಂತರಾಜು, ಕನ್ವೀನರ್ ರಾಜಶೇಖರ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನೇತ್ರಾಸಿದ್ದಲಿಂಗಸ್ವಾಮಿ, ತಿಪಟೂರು ತಾಲೂಕು ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಮುಖಂಡರಾದ ಮಲ್ಲಾಘಟ್ಟ ಶಂಕರಪ್ಪ, ಮಾ.ಪುಟ್ಟೇಗೌಡರು, ಶಿವಾನಂದ್, ಚಿದಾನಂದ್, ಸುದಾನಂದ್, ಈಶ್ವರಯ್ಯ, ಲಿಂಗರಾಜು, ಮಲ್ಲಿಕಯ್ಯ, ಶಿವಕುಮಾರ್, ಹೇಮಾವತಿ ಇಂಜಿನಿಯರ್ ಲಕ್ಷ್ಮಯ್ಯ, ಸಂಚಾರಿ ಪೋಲೀಸ್ ಗಂಗಾಧರ್ ಸೇರಿದಂತೆ ರೈತರು ಇದ್ದರು.

Share this article