ಕನ್ನಡಪ್ರಭ ವಾರ್ತೆ ಹಾನಗಲ್ಲ
ನಾಟಕೋತ್ಸವದ ಹೊಸ ಪ್ರಯೋಗ ಶೇಷಗಿರಿಯಲ್ಲಿ ಯಶಸ್ವಿಯಾಗಿದೆ. ಮಾತ್ರವಲ್ಲ ಹೊಸ ತಲೆಮಾರಿಗೆ ಹೊಸ ಚಿಂತನೆ ನೀಡಿದೆ ಎಂದು ಬೆಂಗಳೂರಿನ ರಂಗ ಶಂಕರದ ನಿರ್ದೇಶಕ ಸುರೇಂದ್ರನಾಥ ಹೇಳಿದರು.ಶೇಷಗಿರಿಯಲ್ಲಿ ಕಳೆದ ೬ ದಿನಗಳ ಕಾಲ ನಡೆದ ಯುವ ರಂಗ ತರಬೇತಿ ಶಿಬಿರ ಹಾಗೂ ಕರ್ನಾಟಕ ನಾಟಕೋತ್ಸವ ಸಮಾರೋಪದ ಸಂದರ್ಭದಲ್ಲಿ ಮಾತನಾಡಿದ ಅವರು, ಶೇಷಗಿರಿಯ ಆತ್ಮೀಯತೆಗೆ ಮೊದಲ ಧನ್ಯವಾದ ಹೇಳಲೇಬೇಕು. ಹೊಸ ಹುಡುಗರನ್ನು ಹುಡುಕಿ ರಂಗಭೂಮಿಗೆ ಹೊಸ ಚಿಂತನೆ ನೀಡುವಲ್ಲಿ ಇದು ಯಶಸ್ವಿಯಾಗಿದೆ. ದಶಕಗಳಾಚೆಯ ನಾಟಕಗಳಂತೆಯೇ ಈಗಲೂ ಇರಬೇಕಾಗಿಲ್ಲ. ಇಂದಿನ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ, ಹೊಸತರ ಹುಡುಕಾಟದ ಸಂದರ್ಭ ಇದು. ಆಗ ಸರಿಯಾಗಿ ಒಂದು ರಂಗ ಪುಸ್ತಕ ಹುಡುಕುವುದೂ ಕಷ್ಟ ಸಾಧ್ಯವಾಗಿತ್ತು. ಈಗ ಮುಂಗೈಯಲ್ಲಿ ಎಲ್ಲವೂ ಸಿಗುತ್ತಿದೆ. ಹಳೆ ಹೊಸ ತಲೆಮಾರು ಸೇರಿ ಇನ್ನೊಂದು ಹೊಸ ನಾಟಕ ಪರಂಪರೆಗೆ ಮುಂದಾಗಬೇಕಾಗಿದೆ. ರಂಗ ಸಂಚಾರ ನಿರಂತರ ಹೊಸತನಕ್ಕೆ ತೆರೆದುಕೊಳ್ಳುತ್ತಲೇ ಇರುತ್ತದೆ ಎಂದರು.
ಖ್ಯಾತ ನಾಟಕ ನಿರ್ದೇಶಕ ಡಾ. ಶ್ರೀಪಾದ ಭಟ್, ಹೊಸದನ್ನು ಹುಡುಕುವುದೇ ನಾಟಕ. ಅದು ಸಮಾಜದ ಪ್ರತಿಬಿಂಬ. ಇದಕ್ಕೆ ಹೊಸ ಪೀಳಿಗೆಯನ್ನು ಸಜ್ಜುಗೊಳಿಸುವುದು ಇಂದಿನ ತೀರ ಅಗತ್ಯ. ಇದು ಪ್ರತಿಭೆ ಆಸಕ್ತಿಗಳ ಸಂಗಮ. ಸಮಾಜದ ಪ್ರೋತ್ಸಾಹ ಅದಕ್ಕೆ ಶಕ್ತಿ. ಶೇಷಗಿರಿ ಅಂತಹ ಎಲ್ಲವನ್ನೂ ಒಳಗೊಂಡು ರಂಗ ತಾಣ ಎಂದರು.ಯುವ ರಂಗ ತರಬೇತಿಯಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಾದ ಹೊಸಪೇಟೆಯ ಸೋಮಶೇಖರ, ಭದ್ರಾವತಿಯ ಡಿ. ಇಂದು, ನ್ಯಾಮತಿಯ ಎ. ದೇವರಾಜ ಅನುಭವ ಹಂಚಿಕೊಂಡು, ಈ ಶಿಬಿರ ಬರೆಯಲು, ನಟಿಸಲು, ರಂಗ ಸಜ್ಜಿಕೆ ಸಿದ್ಧಗೊಳಿಸಲು, ಅದಕ್ಕೆ ಬೇಕಾದ ತಾಳ್ಮೆ, ಸಾರ್ವಜನಿಕರ ಸಹಕಾರ, ನಮ್ಮ ಗುರಿ, ನಿರ್ದೇಶಕರ ಜವಾಬ್ದಾರಿ, ನಾಳೆಗಾಗಿ ರಂಗದ ಅಗತ್ಯಗಳ ಅರಿವು ಮೂಡಿಸಿತು. ಇಲ್ಲಿ ನೀನಾಸಂ ವಿದ್ಯಾರ್ಥಿಗಳು, ನಾಟಕದ ಮೇಲೆ ಪಿಎಚ್ಡಿ ಮಾಡುವವರು, ಹೊಸ ಆಶಯ ಹೊತ್ತುವರು ಬಂದಿದ್ದಾರೆ. ಒಟ್ಟಾರೆ ನಮಗೆ ರಂಗದ ಡಿಸೈನ ಸಿಕ್ಕಿದೆ. ಅನೇಕ ಸಂಶಯಗಳು ಪರಿಹಾರವಾಗಿವೆ ಎಂದರು.
ಶೇಷಗಿರಿಯ ಕಲಾ ತಂಡದ ರೂವಾರಿ ಕಲಾವಿದ ಪ್ರಭು ಗುರಪ್ಪನವರ, ಸಂಚಾಲಕ ನಾಗರಾಜ ಧಾರೇಶ್ವರ ನಮಗೆ ಮಾತು ಮೌನವಾಗಿದೆ. ನಮ್ಮ ಗುರಿ ಯಶಸ್ಸಾಗಿದೆ. ಇಡೀ ರಾಜ್ಯ ಹೊರ ರಾಜ್ಯದ ಕಲಾವಿದರು ಇಲ್ಲಿಗೆ ಬಂದು ಸಂಭ್ರಮಿಸುತ್ತಿದ್ದಾರೆ. ಇದಕ್ಕಿಂತ ಸಂತೋಷ ಬೇರೇನೂ ಇಲ್ಲ. ಸಾಕಷ್ಟು ಶ್ರಮವಿದೆ. ಅದು ಸಂತೋಷದಲ್ಲಿ ಪರಿಹಾರವಾಗುತ್ತದೆ ಎಂದರು.