ಕನ್ನಡಪ್ರಭ ವಾರ್ತೆ ಕಲಬುರಗಿ
ಇಡೀ ಕಲಬುರಗಿ ಮಹಾ ನಗರವನ್ನೇ ಕಾಡುತ್ತಿರುವ ಶ್ವಾನ ಕಾಟ ಇಲ್ಲಿನ ಟೌನ್ ಹಾಲ್ನಲ್ಲಿ ಗುರುವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯನ್ನೂ ಕಾಡಿತ್ತು.ಸಭೆಯಲ್ಲಿ ಶ್ವಾನ ಸಮಸ್ಯೆ ಬಗ್ಗೆ ನಡೆದ ವಿಸ್ತೃತ ಚರ್ಚೆಯಲ್ಲಿ ನಾಯಿ ಕಾಟ ತಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಪಾಲಿಕೆಯ ಆರೋಗ್ಯಾಧಿಕಾರಿ. ಡಾ. ವಿವೇಕಾನಂದ ಹಾಗೂ ಪರಿಸರ ಇಂಜಿನಿಯರ್ ಮುನಾಫ್ ಪಟೇಲ್ ಇವರಿಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ನಿರ್ಣಯ ಅಂಗೀಕರಿಸಿತು.
ಕಲಬುರಗಿಯ ಮಿಸ್ಬಾ ನಗರದಲ್ಲಿ ಬುಧವಾರ ರಾತ್ರಿ ಬೀದಿನಾಯಿ ಕಡಿತಕ್ಕೊಳಗಾಗಿ ಜೀವನ್ಮರಣ ಹೋರಾಟದಲ್ಲಿರುವ 6 ವರ್ಷದ ಬಾಲಕಿ ಇರ್ಫಾನ್ ಚಿಕಿತ್ಸಾ ವೆಚ್ಚ ಭರಿಸಬೇಕು, ಸೂಕ್ತ ಪರಿಹಾರ ನೀಡಬೇಕು, ನಾಯಿ ಕಡಿತದ ಘಟನೆಗಳನ್ನು ತಡೆಯಬೇಕು ಎಂದು ಒತ್ತಾಯಿಸಿ ಮಿಸ್ಬಾ ನಗರ ವಾರ್ಡ್ನ ಪಾಲಿಕೆ ಸದಸ್ಯ ಸಾಜಿದ್ ಕಲ್ಯಾಣಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಪಾಲಿಕೆ ಸಾಮಾನ್ಯ ಸಭೆಗೂ ಬಿಸಿ ಮುಟ್ಟಿಸಿತ್ತು.ಸಭೆ ನಡೆಯಲಿದ್ದ ಟೌನ್ ಹಾಲ್ ದ್ವಾರದಲ್ಲೇ ಸದಸ್ಯರು ಧರಣಿ ಕುಳಿತಾಗ ಸಭೆಗೆ ಆಗಮಿಸಿದ್ದ ಮೇಯರ್ ವಿಶಾಲ ಧರ್ಗಿ, ಉಪ ಮೇರ್ ಶಿವಾನಂದ ಪಿಸ್ತಿ, ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಂಪ್ರಭು ಪಾಟೀಲ್, ಆಯುಕ್ತ ಭುವನೇಶ ಪಾಟೀಲ್ ಇವರೆಲ್ಲರೂ 45 ನಿಮಿಷಕ್ಕೂ ಹೆಚ್ಚುಕಾಲ ಸಭಾಂಗಣದ ಹೊರಗಡೆಯೇ ನಿಲ್ಲುವಂತಾಯ್ತು.
ಹಲವು ತಿಂಗಳ ನಂತರ ಪಾಲಿಕೆಯ ಸಾಮಾನ್ಯ ಸಭೆ ನಡೆದಿತ್ತಾದರೂ ಸದಸ್ಯರು ಅನೇಕರು ಬಾಗಿಲಲ್ಲೇ ಧರಣಿ ಕುಳಿತುಕೊಂಡು ನಾಯಿ ಕಡಿತಕ್ಕೆ ಪರಿಹಾರ ನೀಡಬೇಕು, ಶ್ವಾನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಪಟ್ಟು ಹಿಡಿದರಲ್ಲದೆ ಈ ವಿಷಯವಾಗಿ ಸೂಕ್ತ ನಿರ್ಣಯ ಅಂಗೀಕರಿಸೋವರೆಗೂ ಸಭೆ ನಡೆಸಲು ಬಿಡೋದಿಲ್ಲವದಾಗೆಂ ಟೌನ್ ಹಾಲ್ ಮುಂದೆ ವಾತಾವರಣ ಕೆಲಕಾಲ ಗೊಂದಲಮಯಾಗಿ ಕಾಡಿತ್ತು.ನಗರದಲ್ಲಿ ನಾಯಿಕಾಟ ಸಾಕಷ್ಟಿದ್ದರು ಪಾಲಿಕೆ ಕಾಲಹರಣ ಮಾಡುತ್ತಿದೆ, ಸಮಸ್ಯೆ ಕಡೆಗಣಿಸಿದ್ದರಿಂದಲೇ ಮಿಸ್ಬಾ ನಗರದಲ್ಲಿ ಮತ್ತೆ ನಾಯಿ ಕಡಿತ ಸಂಭವಿಸಿದೆ ಎಂದು ಪ್ರತಿಭಟನಾ ನಿರತರು ದೂರಿದರು. ಏತನ್ಮಧ್ಯೆ ಮೇಯರ್ ವಿಶಾಲ ಧರ್ಗಿ, ಆಯುಕ್ತ ಭುವನೇಶ ಪಾಟೀಲ್, ಶಾಸಕ ಅಲ್ಲಂಪ್ರಭು ಪಾಟೀಲರು ಸಭೆಗೆ ಅವಕಾಶ ಕೊಡಿ, ಚಚ್ರಿಸೋಣವೆಂದರೂ ಕೇಳದ ಪುರಪಿತೃಗಳು ಪರಿಹಾರ ಇಲ್ಲೇ ಘೋಷಿಸಿ ಒಳಗೆ ಹೋಗುವಂತೆ ಪಟ್ಟು ಹಿಡಿದರು. ಈ ಹಂತದಲ್ಲಿ ಶಾಸಕ ಅಲ್ಲಂಪ್ರಭು ಪಾಟೀಲರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ದೂರವಾಣಿ ಕರೆ ಮಾಡಿ ಸಂಪರ್ಕಿಸಿ ವಿಷಯ ವಿವರಿಸಿದರಲ್ಲದೆ ಸದಸ್ಯರಿಗೆ ಸದರಿ ವಿಚಾರ ಹೇಳುತ್ತ ಸಮಸ್ಯೆಗೆ ಪರಿಹಾರ ಹುಡುಕುವ ವಿಚಾರದಲ್ಲಿ ಸಚಿವರೂ ಆಸಕ್ತರಿದ್ದಾರೆ. ಸಭೆ ನಡೆಸಿ ಪರಿಹಾರ ಹುಡುಕೋಣವೆಂದು ಮನವಿ ಮಾಡಿದಾಗ ಪುರಪಿತೃಗಳು ಪ್ರತಿಭಟನೆ ಕೈಬಿಟ್ಟರು.
ಸಭೆಯಲ್ಲಿ ಉಪಸ್ಥಿತರಿದ್ದ ಎಂಎಲ್ಸಿ ತಿಪ್ಪಣ್ಣ ಕಮಕನೂರ್, ಶಾಸಕ ಅಲ್ಲಂಪ್ರಭು ಪಾಟೀಲ್ ಮಾತನಾಡುತ್ತ ಶ್ವಾನಸಮಸ್ಯೆ ಇಂದಿನದ್ದಲ್ಲ, ಇದಕ್ಕೊಂದು ಪರಿಹಾರ ಹುಡುಕುವ ಪ್ರಾಮಾಣಿಕ ಕೆಲಸವಾಗಬೇಕೆಂದರಲ್ಲದೆ ಅಧಿಕಾರಿಗಳ ಅಲಕ್ಷತನ ಯಾವ ಕಾರಣಕ್ಕು ಸರಿಯಲ್ಲ, ಶ್ವಾನ ಸಮಸ್ಯೆ ಹೆಚ್ಚಲು ಕಾರಣವಾಗಿರುವ ಅಧಿಕಾರಿಗಳ ಅಲಕ್ಷತನ ಖಂಡನೀಯ. ಆರೋಗ್ಯಾಧಿಕಾರಿ ಡಾ. ವಿವೇಕಾನಂದ, ಪರಿಸರ ಇಂಜಿನಿಯರ್ ಮುನಾಫ್ ಪಟೇಲ್ ಸೇರಿದಂತೆ ಇದಕ್ಕೆ ಕಾರಣರಾದ ಎಲ್ಲರ ವಿರುದ್ಧ ಶಿಸ್ತು ಕ್ರಮವಾಗಬೇಕೆಂದರು.ಹೆಲ್ತ್ ಆಫೀಸರ್ ಅಮಾನತು ನಿರ್ಣಯ ಪ್ರಕಟಿಸಿದ ಮೇಯರ್: ಸಭೆಯಲ್ಲಿನ ಚರ್ಚೆಗಳನ್ನು ಆಲಿಸಿದ ಮೇಯರ್ ವಿಶಾಲ ಧರ್ಗಿ ಶ್ವಾನ ಸಮಸ್ಯೆಗೆ ಕಾರಣರಾಗಿರುವ ಪಾಲಿಕೆ ಆರೋಗ್ಯಾಧಿಕಾರಿ ಡಾ. ವಿವೇಕಾನಂದ ಇವರನ್ನು ಸೇವೆಯಿಂದ ಅಮಾನತು ಮಾಡುವ ಬಗ್ಗೆ ನಿರ್ಣಯ ಪ್ರಕಟಿಸಿದರು. ಜೊತೆಗೇ ಶ್ವಾನ ಕಡಿತಕ್ಕೊಳಗಾಗಿರುವ ಬಾಲಕಿಗೆ 5 ಲಕ್ಷ ರು ಪರಿಹಾರ, ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದರು. ಆದರೆ ಮೇಯರ್ ತಮ್ಮ ಮಾತಲ್ಲಿ ಪರಿಸರ ಇಂಜಿನಿಯರ್ ಮುನಾಫ್ ಪಟೇಲ್ ವಿರುದ್ಧದ ಶಿಸ್ತು ಕ್ರಮದ ಬಗ್ಗೆ ಚಕಾರ ಎತ್ತಲಿಲ್ಲ!
ಶ್ವಾನಗಳಿಗೆ ಎಬಿಸಿ, ಎಆರ್ಸಿ- ₹2.50 ಕೋಟಿ ಹಣ ಬೇಕು: ಕಲಬುರಗಿಯಲ್ಲಿ 55 ವಾರ್ಡ್ಗಳಲ್ಲಿ ಅಂದಾಜು 20 ಸಾವಿರಕ್ಕೂ ಹೆಚ್ಚು ಶ್ವಾನಗಳಿದ್ದು ಇವುಗಳಿಗೆ ಜನನ ನಿಯಂತ್ರಣ ಹಾಗೂ ರೇಬಿಸ್ ಕಂಟ್ರೋಲ್ ಚಿಕಿತ್ಸೆ ನೀಡುವುದೇ ಪರಿಹಾರವಾಗಿದೆ. ಪ್ರಾಣಿಗಳಿಗೆ ಹಿಂಸೆ ಕೊಡಲಾಗದು. ಪ್ರತಿ ಶ್ವಾನಕ್ಕ 1,400 ರು. ನಂತೆ ಹಣ ವೆಚ್ಚ ಮಾಡಿದರೆ ಕೊನೆಪಕ್ಷ 18 ಸಾವಿರ ನಾಯಿಗಳಿಗೆ ಎಬಿಸಿ, ಎಆರ್ಸಿ ಮಾಡಲು ₹2.50 ಕೋಟಿ ಬೇಕು. ಜನರಲ್ ಫಂಡ್ನಲ್ಲಿ ಅಥವಾ ಎಸ್ಎಫ್ಸಿ ಅನುದಾನದಲ್ಲಿ ಈ ಹಣ ಮೀಸಲಿಡಲು ಪುರಪಿತೃಗಳು ಒಪ್ಪಿದಲ್ಲಿ ತಾವು ಶಾರ್ಟ್ ಟೆಂಡರ್ ಕರೆದು ಶ್ವಾನ ಸಮಸ್ಯೆಗೆ ಪರಿಹಾರ ಕಲ್ಪಿಸುವ ದಿಶೆಯಲ್ಲಿ ಮುಂದಡಿ ಇಡೋದಾಗಿ ಘೋಷಿಸಿದರಾದರೂ ಸಭೆಯಲ್ಲಿ ಆಯುಕ್ತ ಮಾತಿಗೆ ಅಷ್ಟಾಗಿ ಸ್ಪಂದನೆ ಸಿಗಲಿಲ್ಲ.ಆಯುಕ್ತ- ಹೆಲ್ತ್ ಆಫೀಸರ್ ಭಿನ್ನಮತ ಬಹಿರಂಗ: ಸಭೆಯಲ್ಲಿ ಆರೋಗ್ಯಾಧಿಕಾರಿ ಡಾ. ವಿವೇಕಾನಂದ ಹಾಗೂ ಆಯುಕ್ತ ಭುವನೇಶ ಪಾಟೀಲ್ ನಡುವಿನ ಶೀತಲ ಸಮರ ಬಹಿರಂಗವಾಯ್ತು. ಶ್ವಾನ ಕಾಟ ಹೇಗೆ ಮಾಡಲಿ, ನನಗೇ ಸರಿಯಾಗಿ ಸವಲತ್ತಿಲ್ಲ, ಸಿಪಾಯಿ ಕೂಡಾ ನನ್ನ ಜೊತೆಗಿಲ್ಲ. ಎಸ್ಸೈಗಳು ನನ್ನ ಮಾತು ಕೇಳೋದಿಲ್ಲವೆಂದು ಆರೋಗ್ಯಾಧಿಕಾರಿ ವಿವೇಕಾನಂದ ಅಸಹಾಯಕತೆ ತೋಡಿಕೊಂಡಾಗ ಗರಂ ಆದ ಆಯುಕ್ತ ಈಗ ಶ್ವಾನ ಸಮಸ್ಯೆ ಪ್ರಸ್ತಾಪವಾದಾಗ ಇದನ್ನೆಲ್ಲ ಹೇಳ್ತೀರಾ? ಮೊದಲೇ ಯಾಕೆ ಹೇಳಲಿಲ್ಲ? ರೈಟಿಂಗ್ನಲ್ಲಿ ಯಾಕೆ ಕೊಡಲಿಲ್ಲ? ಎಂದು ಗರಂ ಆದರು. ಒಂದು ಹಂತದಲ್ಲಿ ಆಯುಕ್ತರು ಡಾ. ವಿವೇಕಾನಂದರ ವಿರುದ್ಧವೇ ವಾಗ್ದಾಳಿ ನಡೆಸಿದರಲ್ಲದೆ ಇವರು ಫೀಲ್ಡ್ ವಿಸಿಟ್ ಮಾಡದೆ 300 ಟ್ರೇಡ್ ಲೈಸನ್ಸ್ ನೀಡಿರೋದು ಗಮನಕ್ಕೆ ಬಂದಾಗ ಆ ಚಾರ್ಜ್ ಕಿತ್ತುಕೊಂಡಿದ್ದೆ. ಇವರನ್ನು ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದಾಗ ಇವರು ತಕ್ಷಣ ಕೆಎಟಿಗೆ ಹೋಗಿ ನನ್ನ ವಿರುದ್ಧವೇ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರೆಂದು ಸಿಡಿಮಿಡಿಗೊಂಡರು. ಡಾ. ವಿವೇಕಾನಂದ ಕೆಎಟಿ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಸಭೆಗೆ ಹೇಳಬೇಕೆನ್ನುವಷ್ಟರಲ್ಲೇ ಆಯುಕ್ತ ತಾವೇ ಮುಂದಾಗಿ ನೀವಿಲ್ಲಿ ನಿಲ್ಲಬೇಡಿ, ಹೋಗಿ ಎಂದು ಹೆಲ್ತ್ ಆಫೀಸರ್ಗೆ ಜಬರಿಸಿದರಲ್ಲದೆ ಕೆಲಸ ಮಾಡಿ ಎಂದರೆ ಸಬೂಬು ಹೇಳುತ್ತಾರೆ. ಇಂತಹವರಿಂದಲೇ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಗೊಣಗಿದ ಪ್ರಸಂಗ ನಡೆಯಿತು.