ಕಲ್ಯಾಣ ಕರ್ನಾಟಕಕ್ಕೆ ಬಂಪರ್‌, ಪ್ರತ್ಯೇಕ ಸಚಿವಾಲಯ ಘೋಷಣೆ

KannadaprabhaNewsNetwork |  
Published : Sep 18, 2024, 01:46 AM IST
ಫೋಟೋ- ಕಲ್ಯಾಣ 26ಸಿಎಂ ಸಿದ್ದರಾಮಯ್ಯ ಹಾಗೂ ಸಂಪುಟದ ಸಹೋದ್ಯೋಗಿಗಳಿಂದ ಕಲಬುರಗಿ ಸಂಪುಟ ಸಭೆ ನಂತರ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಕಲಬುರಗಿಯಲ್ಲಿ ಹತ್ತು ವರ್ಷಗಳ ಬಳಿಕ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸೇರಿ ಸ್ಥಾಪನೆ ಸೇರಿ ಈ ಭಾಗದ ಹಲವು ಮಹತ್ವದ ಯೋಜನೆಗಳಿಗೆ ಭರ್ಜರಿ ಅನುದಾನದ ಮೂಲಕ ಬಂಪರ್ ಕೊಡುಗೆ ಘೋಷಿಸಲಾಗಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯಲ್ಲಿ ಹತ್ತು ವರ್ಷಗಳ ಬಳಿಕ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸೇರಿ ಸ್ಥಾಪನೆ ಸೇರಿ ಈ ಭಾಗದ ಹಲವು ಮಹತ್ವದ ಯೋಜನೆಗಳಿಗೆ ಭರ್ಜರಿ ಅನುದಾನದ ಮೂಲಕ ಬಂಪರ್ ಕೊಡುಗೆ ಘೋಷಿಸಲಾಗಿದೆ.

ಕಲ್ಯಾಣ ಕರ್ನಾಟಕ ವಿಮೋಚನೆಯ ದಿನವಾದ ಸೆ.17ರಂದೇ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆಯು ಕಲ್ಯಾಣ ಕರ್ನಾಟಕ ಏಳು ಜಿಲ್ಲೆಗಳ ವ್ಯಾಪ್ತಿಯ ಒಟ್ಟು 11,770 ಕೋಟಿ ರು. ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಿದೆ.

ಕಲಬುರಗಿಯಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕದ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಳಗ್ಗೆ ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ ಅವರು ನಂತರ ಇಲ್ಲಿನ ವಿಕಾಸಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ದಶಕದ ಬಳಿಕ ಸಚಿವ ಸಂಪುಟ ಸಭೆ ನಡೆಸಿದರು.

ಅಪರಾಹ್ನ ಸಂಜೆ 3.30ಯಿಂದ ಸುದೀರ್ಘ ಮೂರೂವರೆ ಗಂಟೆಗಳ ಕಾಲ ನಡೆದ ಈ ಸಂಪುಟ ಸಭೆಯಲ್ಲಿ ಒಟ್ಟು 56 ವಿಷಯಗಳನ್ನು ಚರ್ಚಿಸಲಾಯಿತು. ಇವುಗಳಲ್ಲಿ 46 ವಿಷಯಗಳು ಕಲ್ಯಾಣ ಕರ್ನಾಟಕದ ಭಾಗದ 7 ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಪಟ್ಟ ವಿಷಯಗಳು ಎಂಬುದು ವಿಶೇಷ. ಕಲ್ಯಾಣದ ಅಭಿವೃದ್ಧಿಗೆ ವೇಗ ನೀಡಲು ಪ್ರತ್ಯೇಕ ಸಚಿವಾಲಯ ರಚನೆಯಾಗಬೇಕು ಎಂಬ ಬೇಡಿಕೆಗೆ ಈ ಬಾರಿ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಶೀಘ್ರ ಹೈದ್ರಾಬಾದ್‌ ಕರ್ನಾಟಕ ಭಾಗದಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಸಂಬಂಧಿಸಿದ ರೂಪರೇಷೆ ಸಿದ್ಧಪಡಿಸುವ ಬಗ್ಗೆ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

ಸಂವಿಧಾನದ ಕಲಂ 371ಜೆ ಜಾರಿಯಾಗಿರುವ ಕಲ್ಯಾಣ ನಾಡಿನ 7 ಜಿಲ್ಲೆಗಳ ಪ್ರಗತಿಗೆ ಕೆಕೆಆರ್‌ಡಿಬಿಗೆ ರಾಜ್ಯ ಸರ್ಕಾರ ನೀಡುತ್ತಿರುವ 5 ಸಾವಿರ ಕೋಟ ರು. ಮೊತ್ತದಷ್ಟೇ ಹಣವನ್ನು ಕೇಂದ್ರ ಸರ್ಕಾರವೂ ನೀಡಬೇಕೆಂಬ ನಿರ್ಣಯವನ್ನೂ ಇದೇ ವೇಳೆ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಯಿತು.

ಸಂವಿಧಾನದ ವಿಶೇಷ ರಕ್ಷಣೆ ಈ ಭಾಗಕ್ಕೆ ದೊರಕಿದ ಬಳಿಕ ಇಲ್ಲಿಯವರೆಗೂ ಕೇಂದ್ರ ಸರ್ಕಾರ ಒಂದೇ ಒಂದು ರುಪಾಯಿಯನ್ನೂ ಕೊಟ್ಟಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಕೂಡ ರಾಜ್ಯ ಸರ್ಕಾರ ಕೊಟ್ಟಷ್ಟೆ ಪ್ರಮಾಣ (5,000 ಕೋಟಿ ರು.)ದ ಅನುದಾನ ಕೊಡಬೇಕು ಎನ್ನುವ ಆಗ್ರಹಕ್ಕೆ ಒಮ್ಮತ ವ್ಯಕ್ತವಾಯಿತು.

ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೆ.17 ಕಲ್ಯಾಣದ ನಾಡಿನ ಜನರಿಗೆ ಐತಿಹಾಸಿಕ ದಿನ. ಈ ದಿನವೇ ಐತಿಹಾಸಿಕ ಸಂಪುಟ ಸಭೆ ನಡೆಸುವ ಮೂಲಕ ನಮ್ಮ ಸರ್ಕಾರ ಕಲ್ಯಾಣದ ಪ್ರಗತಿಗೆ ಬದ್ಧವಾಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದರು.

ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಾರಾಯಣಪುರ ಬಸವ ಸಾಗರ ಜಲಾಶಯದಿಂದ ನೀರು ತರುವ 7,200 ಕೋಟಿ ರು. ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆ ಯೋಜನೆ. ಇದರಲ್ಲಿ ಕೇಂದ್ರ ತನ್ನ ಪಾಲಿನ ಮೊತ್ತವಾದ 3,600 ಕೋಟಿ ರು. ನೀಡಬೇಕಿದೆ ಎಂದರು.

ಸಚಿವ ಸಂಪುಟ ಸಭೆಯಲ್ಲಿ ಬೀದರ್ ಮತ್ತು ರಾಯಚೂರು ಪಟ್ಟಣಗಳನ್ನು ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಹಾಗೂ ಬೀದರ್ ಮತ್ತು ಕಲಬುರಗಿಯ ಹಳ್ಳಿಗಳಿಗೆ ಕುಡಿಯುವ ನೀರೊದಗಿಸುವ 7200 ಕೋಟಿ ರು. ಯೋಜನೆಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಖಾಲಿ ಹುದ್ದೆ ಭರ್ತಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿಯಿರುವ 17,439 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ತೀರ್ಮಾನಿಸಿರುವುದಾಗಿ ಇದೇ ವೇಳೆ ಮುಖ್ಯಮಂತ್ರಿ ತಿಳಿಸಿದರು. ಬೀದರ್‌ನ ಬಸವ ಕಲ್ಯಾಣದ ಅನುಭ‍ವ ಮಂಟಪದಿಂದ ಕೊಪ್ಪಳದ ಅಂಜನಾದ್ರಿ ಬೆಟ್ಟದವರೆಗೂ ಸಿಗುವ ಪ್ರವಾಸಿ ತಾಣಗಳ ಪೋಷಣೆ, ಸಂರಕ್ಷಣೆ, ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ ಎಂದೂ ಅವರು ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕ ಭಾಗದ ಕುರಿತು

ಕ್ಯಾಬಿನೆಟ್‌ನ ಪ್ರಮುಖ ನಿರ್ಧಾರಗಳು

ಬೀದರ್ ಹಾಗೂ ರಾಯಚೂರು ನಗರ ಸಭೆಗಳನ್ನು ಮಹಾನಗರ ಪಾಲಿಕೆಗಳನ್ನಾಗಿ ಮೇಲ್ದರ್ಗೇರಿಸಲು ನಿರ್ಧಾರ

ಕಲ್ಯಾಣ ಕರ್ನಾಟಕ ಭಾಗದಲ್ಲಿ 45 ಪ್ರಾಥಮಿಕ ಆರೋಗ್ಯ ಕೇಂದ್ರ, 31 ಸಮುದಾಯ ಆರೋಗ್ಯ ಕೇಂದ್ರ ಆರಂಭ

9 ತಾಲೂಕು ಆಸ್ಪತ್ರೆಗಳ ಮೇಲ್ದರ್ಜೆ, 2 ತಾಲೂಕು ಆಸ್ಪತ್ರೆ ಜಿಲ್ಲಾಸ್ಪತ್ರೆಗಳಾಗಿ ಮೇಲ್ದರ್ಜೆ, ಇದಕ್ಕಾಗಿ 890 ಕೋಟಿ ರು. ವೆಚ್ಚ

ಕಲಬುರಗಿ ವಿವಿ ಆವರಣದಲ್ಲಿ ಜಿಟಿಟಿಸಿ ಬಹುಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಕೆಕೆಆರ್‌ಡಿಐ ಅನುದಾನದಿಂದ ಮೊದಲನೇ ಹಂತದಲ್ಲಿ 53.25 ಕೋಟಿ ರು. ವೆಚ್ಚದಲ್ಲಿ ಸ್ಥಾಪನೆ

ಮಳಖೇಡ ಕೋಟೆ ಅಭಿವೃದ್ಧಿಗೆ 34 ಕೋಟಿ ರು, ಶಹಾಪೂರದ ಶಿರವಾಳ ದೇಗುಲಗಳ ಅಭಿವೃದ್ಧಿಗೆ 75 ಕೋಟಿ ರು. ಯಾದಗಿರಿ ಕೋಟೆ ಅಭಿವೃದ್ಧಿಗೆ 95 ಕೋಟಿ ರು. ಯೋಜನೆ

ಬೀದರ್- ಕಲಬುರಗಿಯ ಜನ ವಸತಿ ಪ್ರದೇಶಕ್ಕೆ 7200 ಕೋಟಿ ರು. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ

ಹಟ್ಟಿ ಚಿನ್ನದ ದಣಿ ಸಿಬ್ಬಂದಿಗೆ ವಸತಿ ಯೋಜನೆಗೆ ಅನುಮೋದನೆ

ಸಂಪುಟ ಸಭೆಯ ಮುಖ್ಯಾಂಶಗಳು ಸಂಪುಟ ಸಭೆಯಲ್ಲಿ ಒಟ್ಟು 56 ವಿಷಯಗಳ ಚರ್ಚೆ, ಒಪ್ಪಿಗೆ

56ರಲ್ಲಿ 46 ವಿಷಯಗಳು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ್ದು

ಚರ್ಚೆಗೆ ಬಂದ 56 ವಿಷಯಗಳಿಗೆ 12,692 ಕೋಟಿ ರು. ವೆಚ್ಚ, ಇದರಲ್ಲಿ ಕಲ್ಯಾಣ ನಾಡಿಗೆ ಸೇರಿದ ಯೋಜನೆಗಳ ಒಟ್ಟು ಮೊತ್ತ 11,770 ಕೋಟಿ ರು.

ಇದು ಐತಿಹಾಸಿಕ ದಿನಸೆ.17 ಕಲ್ಯಾಣದ ನಾಡಿನ ಜನರಿಗೆ ಐತಿಹಾಸಿಕ ದಿನ. ಈ ದಿನವೇ ಐತಿಹಾಸಿಕ ಸಚಿವ ಸಂಪುಟ ಸಭೆ ನಡೆಸುವ ಮೂಲಕ ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕದ ಪ್ರಗತಿಗೆ ಬದ್ಧವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಬೀದರ್‌ನ ಬಸವ ಕಲ್ಯಾಣದ ಅನುಭ‍ವ ಮಂಟಪದಿಂದ ಕೊಪ್ಪಳದ ಅಂಜನಾದ್ರಿ ಬೆಟ್ಟದವರೆಗೂ ಸಿಗುವ ಪ್ರವಾಸಿ ತಾಣಗಳ ಅಭಿವೃದ್ಧಿಗೆ ನಿರ್ಧರಿಸಲಾಗಿದೆ.ಸಿದ್ದರಾಮಯ್ಯ, ಮುಖ್ಯಮಂತ್ರಿ

PREV

Recommended Stories

''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''
ಸಾರಿಗೆ ಮುಷ್ಕರಿಂದ ನಾಲ್ಕು ನಿಗಮಗಳಿಗೆ 12 ಕೋಟಿ ನಷ್ಟ