ಕನ್ನಡಪ್ರಭ ವಾರ್ತೆ ಮುಧೋಳ
ಭಾರತ ಸನಾತನ ಹಾಗೂ ಆಧುನಿಕತೆಯ ಸಮ್ಮಿಲನವಾಗಿದೆ. ನಮಗೆ 10 ಸಾವಿರಕ್ಕೂ ಅಧಿಕ ವರ್ಷಗಳ ಹಳೆಯ ಶ್ರೀಮಂತ ಇತಿಹಾಸ ಮತ್ತು ಪರಂಪರೆ ಇದೆ. ಮುಂದೆಯೂ ಸಾವಿರಾರು ವರ್ಷ ಸ್ಥಿರವಾಗಿ ನಿಲ್ಲುವ ಗಟ್ಟಿತನ ಭಾರತಕ್ಕಿದೆ. ಅಳಿದು ಹೋದ ಸಂಸ್ಕೃತಿಗಳ ನಡುವೆ ಭಾರತದ ಶ್ರೀಮಂತ ಪರಂಪರೆ ಇಂದಿಗೂ ಜೀವಂತವಾಗಿದೆ. ಭಾರತೀಯರಾದ ನಾವು ಭಾಗ್ಯವಂತರು ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.ಇಲ್ಲಿನ ನಿರಾಣಿ ಶುಗರ್ಸ್ ಆವರಣದಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿದ ಅವರು ಭಾರತದ ಇಂಧನ ಕ್ಷೇತ್ರದ ಸ್ವಾವಲಂಬನೆ ಹೆಜ್ಜೆಗಳು ಆತ್ಮನಿರ್ಭರ ಭಾರತಕ್ಕೆ ಸೋಪಾನವಾಗಿವೆ. ಜೈವಿಕ ಇಂಧನ ಕ್ಷೇತ್ರ ಭಾರತದಲ್ಲಿ ರೈತರಿಗೆ ಆರ್ಥಿಕವಾಗಿ ಸಮೃದ್ಧ ಬದುಕು ಕಟ್ಟಿಕೊಡುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಹಸಿರು ಇಂಧನ ಕ್ಷೇತ್ರದ ಮಹತ್ವಾಕಾಂಕ್ಷೆಗೆ ನಿರಾಣಿ ಸಮೂಹ ಉದ್ಯಮ ಜೊತೆಯಾಗಿ ಹೆಜ್ಜೆ ಹಾಕಿದೆ ಎಂದು ಅವರು ಹೇಳಿದರು.
ನಿರಾಣಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿ, ನಮ್ಮ ರೈತರು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಸಿಹಿ ಧಾನ್ಯದಿಂದ ಉತ್ಪಾದನೆಯಾಗುವ ಎಥೆನಾಲ್ ರೈತರಿಗೆ ಬಹುದೊಡ್ಡ ಲಾಭ ತಂದು ಕೊಡಲಿದೆ. ನಿರಾಣಿ ಸಮೂಹ ಸುಸ್ಥಿರ ವಿಮಾನ ತೈಲ ತಯಾರಿಕೆ, ಜೈವಿಕ ಸಿ.ಎನ್.ಜಿ ಜೊತೆಗೆ ಕಬ್ಬಿನ ಹಾಲಿನಿಂದ ಬಯೋ ಪ್ಲಾಸ್ಟಿಕ್ ತಯಾರಿಕೆಯಂತಹ ಹೊಸ ಅವಿಷ್ಕಾರಗಳಿಗೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಇದು ರೈತರ ಆದಾಯ ದ್ವಿಗುಣಗೊಳಿಸುತ್ತದೆ ಎಂದು ಹೇಳಿದರು.ನಿರಾಣಿ ಸಮೂಹದ ತಾಂತ್ರಿಕ ಮಾರ್ಗದರ್ಶಕರಾದ ಆರ್.ವಿ. ವಟ್ನಾಳ ಧ್ವಜಾರೋಹಣ ನೆರವೇರಿಸಿದರು. ನಿರಾಣಿ ಭದ್ರತಾ ಸಿಬ್ಬಂದಿಯಿಂದ ಆಕರ್ಷಕ ಪಥ ಸಂಚಲನ ನಡೆಯಿತು. ತಾಂತ್ರಿಕ ನಿರ್ದೇಶಕ ಮುರುಗೇಶ ಹತ್ತಿಕಾಳ ಸ್ವಾಗತಿಸಿದರು. ಕಬ್ಬು ನಿರ್ದೇಶಕ ಎನ್.ವಿ. ಪಡಿಯಾರ್ ವಂದಿಸಿದರು. ಆಲಗೂರ ಧರಿದೇವರ ಮಠದ ಲಕ್ಷ್ಮಣ ಮುತ್ಯಾ, ಗುರುರಾಜ ಹೊಸಕೋಟಿ, ಪದ್ಮಶ್ರೀ ವೆಂಕಪ್ಪ ಸುಗಟಕರ್, ಬಿ.ಆರ್. ಪುರ್ಣಚಂದ್ರ, ಪಿ.ಎನ್. ಪಾಟೀಲ, ಸಿ.ಪಿ. ಜನವಾಡ, ಎಂ.ವೈ. ಕಟ್ಟಿ, ಕೆ.ಎಸ್. ಹೆಗಡೆ ಸೇರಿ ಹಲವರು ಭಾಗವಹಿಸಿದ್ದರು.
ಶೈಕ್ಷಣಿಕ ದತ್ತು ಯೋಜನೆಗೆ ಚಾಲನೆ: ಮುರುಗೇಶ ನಿರಾಣಿಯವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. 60ನೇ ಹುಟ್ಟುಹಬ್ಬದ ಸವಿನೆನಪಿಗಾಗಿ ಆರ್ಥಿಕವಾಗಿ ಹಿಂದುಳಿದ 100 ಬಡವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಯೋಜನೆಗೆ ಚಾಲನೆ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಕೃಷಿಕರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.