ಹಾಲು ಮಾರಿ ಎಂಬಿಬಿಎಸ್ ಮಾಡಿದ ವಿದ್ಯಾರ್ಥಿನಿ ರುಬಿಯ ರೆಹಮಾನ್
ಕನ್ನಡಪ್ರಭ ವಾರ್ತೆ ಬೇಲೂರುಅರೇಹಳ್ಳಿ ಪಟ್ಟಣದ ಹಳೆ ಮಸೀದಿ ರಸ್ತೆಯಲ್ಲಿ ಹಾಲು ಮಾರಿ ಜೀವನ ಸಾಗಿಸುವ ಕಡು ಬಡತನ ಕುಟುಂಬದ ನಾಜೀದ್ ಊರ್ ರೆಹಮಾನ್ ಮಗಳಾದ ರುಬಿಯ ರೆಹಮಾನ್ ವಿದ್ಯಾರ್ಥಿನಿ ಪ್ರೌಢ ಶಿಕ್ಷಣವನ್ನು ಪಟ್ಟಣದ ಮಲ್ನಾಡ್ ಶಾಲೆಯಲ್ಲಿ, ದ್ವಿತೀಯ ಪಿಯುಸಿ ಯನ್ನು ಹಾಸನದಲ್ಲಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆಯುವುದರ ಮೂಲಕ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಮಲ್ನಾಡ್ ಶಾಲೆಯ ಶಿಕ್ಷಕ ವೃಂದದವರು ಹಾಗೂ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಯ ಸಾಧನೆಗೆ ಅಭಿನಂದಿಸಿದ್ದಾರೆ.
ಈ ವೇಳೆ ವಿದ್ಯಾರ್ಥಿನಿಯ ತಾಯೀ ಹಜಿಯ ಖುರಾತ್ ಹೇಳಿದ್ದು ಹೀಗೆ ನಮಗೆ ಚಿಕ್ಕದಾದ ಮನೆ, ಹಲವು ವರ್ಷಗಳಿಂದ ಪಾಲು ಬಿದ್ದ ಸ್ವಲ್ಪ ಜಮೀನು ಹಾಗೂ ನಮ್ಮ ಜೀವನ ಸಾಗಿಸಲು ಸುಮಾರು 15 ದನ ಕರುಗಳು ಇರುವುದು ಅಷ್ಟೇ.. ಅದರಿಂದ ಬರುವ ಆದಾಯದಿಂದ ನಮ್ಮ ಜೀವನ ಸಾಗುತ್ತದೆ ಆದರೆ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಯಾವುದೇ ಕೊರತೆ ಮಾಡಿಲ್ಲ, ನಮ್ಮ ಮಕ್ಕಳೇ ನಮಗೆ ಆಸ್ತಿ, ನನ್ನ ಮಗಳು ಪ್ರಾಥಮಿಕ ಶಿಕ್ಷಣದಿಂದಲೂ ಶಿಕ್ಷಣಕ್ಕೆ ಒತ್ತು ನೀಡಿದ್ದಾಳೆ, ಅದೇ ರೀತಿ ಶಾಲೆಯಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು..ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮುಗಿಯುವವರೆಗೂ ಸಹಾ ಸುತ್ತ ಮುತ್ತಲಿನ ಮನೆ ಮನೆಗೆ ವ್ಯಾಸಂಗದ ನಡುವೆಯೂ ಹಾಲು ಮಾರಲು ಹೋಗುತ್ತಿದ್ದಳು,ಅವಳಿಗೆ ಉನ್ನತ ಶಿಕ್ಷಣ ಪಡೆಯುವ ಆಸಕ್ತಿ ಇದೆ ನಾವು ಅದಕ್ಕಾಗಿ ಶ್ರಮಿಸುತ್ತೇವೆ, ಈ ಮೊದಲು ನಮ್ಮನ್ನು ಯಾರು ಗುರುತಿಸುತ್ತಿರಲಿಲ್ಲ ಆದರೆ ಮಗಳ ಈ ಸಾಧನೆಗೆ ಎಲ್ಲರೂ ಅಭಿನಂದಿಸಿದ್ದಾರೆ. ಇದರಿಂದ ತುಂಬಾ ಹೆಮ್ಮೆಯಾಗುತ್ತಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.