ಗದಗ: ವಿದ್ಯಾರ್ಥಿಗಳ, ಶ್ರಮ ಸಂಯಮ ಮತ್ತು ನಿಶ್ಚಲ ದಿಟ್ಟತೆಯೇ ಸಾಧನೆಯ ಯಶಸ್ಸು. ಅದುವೇ ತಂದೆ ತಾಯಿ, ಶಿಕ್ಷಕರಿಗೆ ಹೆಮ್ಮೆ ಸಂತೋಷ. ವಿದ್ಯಾರ್ಥಿ ಜೀವನ ತಪಸ್ಸು ಇದ್ದಂತೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2747ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಾತನಾಡಿದರು. ಬೆಳಗಿನ ಓದು, ರಾತ್ರಿ ತಯಾರಿ ನಿಮ್ಮ ಸಾಧನೆಯನ್ನು ಉತ್ತುಂಗಕ್ಕೇರಿಸುತ್ತದೆ. ಈ ಯಶಸ್ಸು ಶಿಕ್ಷಣ ಮಾರ್ಗದ ಒಂದು ಹೆಜ್ಜೆ ಅಷ್ಟೆ. ಮುಂದೆ ಹೋದಂತೆ ಹೆಚ್ಚಿನ ಅವಕಾಶಗಳು ಮತ್ತು ಗುರಿಗಳಿವೆ. ಈ ಸಾಧನೆಗಳು ಉಜ್ವಲವಾದ ಭವಿಷ್ಯಕ್ಕೆ ದಾರಿಯಾಗಿದೆ. ನಿಮ್ಮ ಭವಿಷ್ಯ ಬೆಳಕಿನಿಂದ ತುಂಬಿರಲಿ. ನೀವು ಉಜ್ವಲ ನಕ್ಷತ್ರಗಳಾಗಿರಿ ಎಂದರು.
ಗುರುನಾಥ ಸುತಾರ ಹಾಗೂ ಅನಿರುದ್ಧ ಧನೇಶ ದೇಸಾಯಿ ಮತ್ತು ಶಿವಾನಂದ ಭಾವಿಕಟ್ಟಿ ವಚನ ಸಂಗೀತ ಸೇವೆ ನಡೆಸಿಕೊಟ್ಟರು. ತೋಂಟದಾರ್ಯ ಕೈಗಾರಿಕಾ ತರಬೇತಿ ಕೇಂದ್ರ ಮಂಡಲಗಿರಿಯ ಕಿರಿಯ ತರಬೇತಿ ಅಧಿಕಾರಿ ಭೋಜರಾಜ ಸೊಪ್ಪಿಮಠ ಅವರು ರಚಿಸಿದ ಎಲ್ಲ ನನ್ನವಳದೆ ಪುಸ್ತಕ ಲೋಕಾರ್ಪಣೆಯಾಯಿತು. ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ, ದ್ವಿತೀಯ, ತೃತೀಯ ಬಂದ 21 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು. ಧಾರ್ಮಿಕ ಗ್ರಂಥ ಪಠಣವನ್ನು ವಿಶ್ವಾಸ ಎಂ. ಮಳಗಾವಿಮಠ ಹಾಗೂ ವಚನ ಚಿಂತನವನ್ನು ಸ್ಫೂರ್ತಿ ಎಂ. ಮಳಗಾವಿಮಠ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ನಿವೃತ್ತ ಶಿಕ್ಷಕ ಲಿಂಗನಗೌಡ ಶಂಕರಗೌಡ ಬೆಳವಟಿಗಿ ವಹಿಸಿದ್ದರು.
ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಿಕ, ಶಿರಹಟ್ಟಿಯ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಗಿರಿತಮ್ಮಣ್ಣವರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ, ಐ.ಬಿ. ಬೆನಕೊಪ್ಪ, ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಡಾ. ಉಮೇಶ ಪುರದ ಸ್ವಾಗತಿಸಿದರು. ಅಶೋಕ ಹಾದಿ ಕಾರ್ಯಕ್ರಮ ನಿರೂಪಿಸಿದರು.