ಹಾವೇರಿ: ಇಲ್ಲಿಯ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ನಿರ್ದೇಶಕರಾಗಿರುವ ತಿಮ್ಮೇಶಕುಮಾರ ಸಂಪಲ್ಲಿ ಕೇವಲ ೭೫ ಗಂಟೆಯಲ್ಲಿ ಹುಬ್ಬಳ್ಳಿಯಿಂದ ಮೈಸೂರು ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ವಾಪಸ್ ಹುಬ್ಬಳ್ಳಿಗೆ ತಲುಪಿ ೧,೦೦೦ ಕಿಮೀ ಸೈಕಲ್ ಸವಾರಿ ಮುಗಿಸಿ ವಿಶೇಷ ದಾಖಲೆಮಾಡಿದ್ದಾರೆ ಎಂದು ಹಾವೇರಿ ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ಡಾ.ಎಂ.ಆರ್.ಎಂ. ರಾವ್ ಹೇಳಿದರು.
ನ.೧೦ರಂದು ಹಾವೇರಿ ಸೈಕ್ಲಿಂಗ್ ಕ್ಲಬ್ ವತಿಯಿಂದ ಸೈಕ್ಲೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ನಲ್ಲಿ ಹಾವೇರಿಯಿಂದ ಆಗುಂಬೆ ವರೆಗೆ ಸುಮಾರು ೨೦೦ ಕಿಮೀ ಸೈಕಲ್ ರೈಡ್ನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸೈಕ್ಲಿಂಗ್ ಪಟು ತಿಮ್ಮೇಶಕುಮಾರ ಮಾತನಾಡಿ, ಪ್ರತಿಯೊಂದು ಸಾಧನೆಯಲ್ಲಿ ನಾವು ಪಡೆಯುವ ಸಂತೋಷ ಬೆಲೆಕಟ್ಟಲಾಗದು. ಸೈಕ್ಲಿಂಗ್ನಿಂದ ಉತ್ತಮ ಆರೋಗ್ಯ ಕಂಡುಕೊಳ್ಳಬಹುದು. ವಿವಿಧ ಸ್ಥಳಗಳನ್ನು ಹಾಗೂ ಸಂಸ್ಕೃತಿಯ ಹಲವಾರು ಜನರನ್ನು ಹಾಗೂ ಸ್ನೇಹಿತರನ್ನು ಭೇಟಿಯಾಗಬಹುದು ಎಂದರು.ಇನ್ನೋರ್ವ ಸೈಕ್ಲಿಂಗ್ ಪಟು ಡಾ. ಶ್ರವಣ ಪಂಡಿತ್ ಮಾತನಾಡಿ, ಸೈಕ್ಲಿಂಗ್ ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗುತ್ತೇವೆ. ರಕ್ತದೊತ್ತಡ ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಬಿಪಿ, ಶುಗರ್ ನಿಯಂತ್ರಣದಲ್ಲಿ ಇರುತ್ತದೆ. ಸಾರ್ವಜನಿಕರು ಹೆಚ್ಚು ಸೈಕ್ಲಿಂಗ್ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
ದಯಾನಂದ ಸೂರಗುಂಡ ಮಾತನಾಡಿದರು. ಅರವಿಂದ ಮೂಲಿಮನಿ, ಸಚಿನ್ ದಾನಪ್ಪನವರ, ಡಾ. ಗುಹೇಶ್ವರ ಪಾಟೀಲ, ರಜತ್ ಹಳ್ಳಪ್ಪನವರ ಇದ್ದರು.