ಗ್ರಾಮೀಣರಿಗೆ ಇಂಗ್ಲಿಷ್ ಸವಿಯುಣಿಸಿದ ಮೇಷ್ಟ್ರು ಸಿದ್ದೇಗೌಡರ ಸಂಸ್ಮರಣೆ

KannadaprabhaNewsNetwork |  
Published : Aug 28, 2026, 01:45 AM IST
27ಕೆಎಂಎನ್ ಡಿ21 | Kannada Prabha

ಸಾರಾಂಶ

30 ವರ್ಷಗಳ ಹಿಂದೆ ಪ್ರೌಢಶಾಲೆಯಲ್ಲಿ ಓದುವಾಗ ರಸ್ತೆಯಲ್ಲಿ ಮೇಷ್ಟ್ರು ಕಂಡರೆ ಗಲ್ಲಿಗೆ ನುಗ್ಗುತ್ತಿದೆ. ಬಿಡದೆ ಇವರು ಅಲ್ಲಿಯೇ ಗ್ರಾಮರ್ ಕೇಳುತ್ತಿದ್ದರು. ಉತ್ತರ ಹೇಳೊದನ್ನು ಕಲಿ ಎಂದು ಆತ್ಮಸ್ಥೈರ್ಯ ತುಂಬುತ್ತಿದ್ದರು. ಇವರ ಮೇಲೆ ಭಯ, ಭಕ್ತಿಎಲ್ಲವೂ ಇತ್ತು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಹಳ್ಳಿ ಮಕ್ಕಳಿಗೆ ಇಂಗ್ಲಿಷ್ ಸವಿಯುಣಿಸಿದ ಮಾಸ್ಟರ್‌ ಎಸ್.ಸಿದ್ದೇಗೌಡ (ಎಸ್‌ಎಸ್‌ಜಿ)ರನ್ನು ಕಂಡರೆ ಭಯದ ಜೊತೆಗೆ ಭಕ್ತಿಯೂ ಇತ್ತು ಎಂದು ಎಸ್‌ಎಲ್‌ವಿ ಟ್ರಾವಲ್ಸ್ ಮಾಲೀಕ ಕನ್ನಡಪರ ಹೋರಾಟಗಾರ ಮಹೇಂದ್ರಗೌಡ ಹೇಳಿದರು.

ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ಶಿಕ್ಷಕ ಎಸ್.ಸಿದ್ದೇಗೌಡ ಸಂಸ್ಮರಣೆಯಲ್ಲಿ ಮಾತನಾಡಿದ ಅವರು, ನಾನು ಇವರ ಶಿಷ್ಯ ಎಂಬ ಹೆಮ್ಮೆಇದೆ. ಬಡತನದ ಬೇಗೆಯಲ್ಲಿದ್ದ ನಾನು ಬೆಂಗಳೂರಿನಲ್ಲಿ ನೆಮ್ಮದಿ ಬದುಕು ಕಾಣಲು ಇವರ ಇಂಗ್ಲಿಷ್‌ ಕಲಿಕೆಯೇ ಬುನಾದಿ ಆಗಿದೆ ಎಂದರು.

30 ವರ್ಷಗಳ ಹಿಂದೆ ಪ್ರೌಢಶಾಲೆಯಲ್ಲಿ ಓದುವಾಗ ರಸ್ತೆಯಲ್ಲಿ ಮೇಷ್ಟ್ರು ಕಂಡರೆ ಗಲ್ಲಿಗೆ ನುಗ್ಗುತ್ತಿದೆ. ಬಿಡದೆ ಇವರು ಅಲ್ಲಿಯೇ ಗ್ರಾಮರ್ ಕೇಳುತ್ತಿದ್ದರು. ಉತ್ತರ ಹೇಳೊದನ್ನು ಕಲಿ ಎಂದು ಆತ್ಮಸ್ಥೈರ್ಯ ತುಂಬುತ್ತಿದ್ದರು. ಇವರ ಮೇಲೆ ಭಯ, ಭಕ್ತಿಎಲ್ಲವೂ ಇತ್ತು ಎಂದು ಹಳೆಯ ನೆನಪು ನೆನೆದರು.

ನಾನಿಂದು ಬೆಂಗಳೂರಿನಂತಹ ನಗರದಲ್ಲಿ ಸ್ವಲ್ಪವಾದರೂ ಇಂಗ್ಲಿಷ್‌ನಲ್ಲಿ ಮಾತನಾಡಲು, ಹೋರಾಟಗಾರನಾಗಿ ಸೇವೆ ಸಲ್ಲಿಸಲು ನಮ್ಮ ಈ ಗುರುವಿನ ಆಶೀರ್ವಾದವೇ ಕಾರಣವಾಗಿದೆ. ಇವರಂತಹ ಸರಳ ಆದರ್ಶ ಗುರುಗಳು ಸಿಕ್ಕರೆ ಹಳ್ಳಿಯ ಮಕ್ಕಳು ನಗರದ ಮಕ್ಕಳನ್ನು ಮೀರಿಸಲಿದ್ದಾರೆ. ಇಂಗ್ಲಿಷ್‌ನಲ್ಲಿ ಫೇಲು ಎನ್ನುವ ಉದ್ಗಾರವೇ ಇರಲಾರದು ಎಂದರು.

ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಇಲ್ಲಿನ ಕೆಪಿಎಸ್ ಶಾಲೆ ಅಂದು ಸರ್ಕಾರಿ ಪ್ರೌಢಶಾಲೆಯಾಗಿತ್ತು. 40 ವರ್ಷಗಳ ಹಿಂದೆ ನಾನು ಇದೇ ಶಾಲೆಯಲ್ಲಿ ಓದಿದೆ. ತನ್ನ ನೆಚ್ಚಿನ ಗುರು ಎಸ್‌ಎಸ್‌ಜಿ ನಡೆದಾಡುವ ಇಂಗ್ಲಿಷ್‌ ನಿಘಂಟುವಾಗಿದ್ದರು. ಇವರನ್ನು ಕಂಡರೆ ಸಾಕು ಪ್ರಶ್ನೆ ಕೇಳುತ್ತಾರೆ ಎಂಬ ಭಯದಿಂದ ದೂರದಲ್ಲಿಯೇ ಮೇಷ್ಟ್ರು ಸಿಕ್ಕರೆ ಏನು ಮಾಡುವುದಪ್ಪ ಎಂದು ಓಡುತ್ತಿದೆ ಎಂದರು.

ದೇವಸ್ಥಾನದ ಬಳಿ ಇದ್ದನಮ್ಮ ಮನೆಗೆ ಬರುತ್ತಿದ್ದರು.ಇಂಗ್ಲಿಷ್ ಪ್ರಶ್ನೆ ಕೇಳುತ್ತಿದ್ದರು. ನಮ್ಮ ಅಕ್ಕ ಪ್ರಶ್ನೆಗೆ ಉತ್ತರಿಸಿದರೆ ನಾನು ಹಾಡು ಹೇಳುತ್ತ ನುಣುಚಿಕೊಳ್ಳುತ್ತಿದೆ. ಬಿಡದೆ ಕಿವಿ ಹಿಂಡಿ ತಿದ್ದಿಪಾಠ ಹೇಳುತ್ತಿದ್ದರು ಎಂದು ಸ್ಮರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಮಾತನಾಡಿ, ಮೂರು ದಶಕಗಳ ಹಿಂದೆ ಇಂಗ್ಲೀಷ್ ಪಾಸು ಎಂದರೆ ರ್‍ಯಾಂಕ್ ಬಂದಂತೆ ಮನೆ ಮಂದಿಗೆ ಖುಷಿ ಇತ್ತು. ಯಾವುದೇ ಸೌಲಭ್ಯ ತಮಗಿರಲಿಲ್ಲ. ನಮ್ಮ ಈ ಮೇಷ್ಟ್ರುಇಲ್ಲವಾದರೆ ನಾವು ಇಂಗ್ಲಿಷ್‌ನಲ್ಲಿ ಫೇಲೇ ಗತಿಯಾಗುತ್ತಿತ್ತು ಎಂದು ನುಡಿದರು.

ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ತಮ್ಮ ಗಾಯನದ ಮೂಲಕ ಗುರು ನಮನವನ್ನು ಭಕ್ತಿಯಿಂದ ಸಮರ್ಪಿಸಿದರು.

ಅಗಲಿದೆ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಗೀತೆಗಳ ಮೂಲಕ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಸ್ಮರಿಸಿದರು.

ಈ ವೇಳೆ ಪ್ರಾಂಶುಪಾಲ ಎಂ.ಆರ್.ಸಹದೇವ್, ಎನ್‌ಸಿಸಿ ಯೋಜನಾಧಿಕಾರಿಎಸ್.ಎಂ. ಬಸವರಾಜು, ಕುಮಾರಸ್ವಾಮಿ, ಶಿಕ್ಷಕರಾದ ಬಿ.ಎನ್. ಪರಶಿವಮೂರ್ತಿ, ದೀಪಕ್, ಗಿರೀಶ್, ವೆಂಕಟರಮಣ ಹೆಗಡೆ, ಕೃಷ್ಣಪ್ಪ, ರಿಜ್ವಿ, ನಂದಿನಿ, ಚಂದ್ರೇಗೌಡ, ಕೆ.ವಿ. ನಾಗರತ್ನ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಭಟನೆಗೆ ಸೀಮಿತವಾದ ಹನೂರು ಬಂದ್‌
ಶೂಟೌಟ್ ಖಂಡಿಸಿ ಹನೂರಿನಲ್ಲಿ ಪ್ರತಿಭಟನೆ