ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಬಿಬಿ ರಸ್ತೆಯ ಶನಿ ಮಹಾತ್ಮ ದೇಗುಲದಿಂದ ಆರಂಭವಾದ ಬೃಹತ್ ಪಾದಯಾತ್ರೆಯು ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನಾಕಾರರನ್ನುದ್ದೇಶಿಸಿ ಜೀವಜಲ ಜಾಗೃತಿ ವೇದಿಕೆ ಸಂಚಾಲಕ ಹರೀಶ್ ರೆಡ್ಡಿ ಮಾತನಾಡಿ, ಚಿಕ್ಕಬಳ್ಳಾಪುರಕ್ಕೆ ಸರಬರಾಜು ಆಗುತ್ತಿರುವ ಬೆಂಗಳೂರಿನ ಹೆಬ್ಬಾಳ- ನಾಗವಾರ ಕೆರೆಗಳಬೆಹೆಚ್ ಏನ್ ವ್ಯಾಲಿ) ಯಿಂದ ಬರುವ ನೀರು ಎರಡು ಬಾರಿ ಮಾತ್ರ ಸಂಸ್ಕರಣೆಯಾಗುತ್ತಿದೆ. ಈ ನೀರನ್ನು ಹೆಚ್ಚು ಶುದ್ಧ ಮಾಡಲು 3ನೇ ಹಂತದ ಸಂಸ್ಕರಣೆ ಯೋಜನೆ ಜಾರಿಯಾಗಬೇಕು. ಮೂರನೇ ಹಂತದ ಶುದ್ದೀಕರಣದ ಜೊತೆಗೆ ಕೃಷ್ಣಾ ಮತ್ತು ಕಾವೇರಿ ನೀರನ್ನು ಸಹಾ ನೀಡಬೇಕು. ರಾಜ್ಯ ಸರ್ಕಾರ ನಮ್ಮ ಜಿಲ್ಲೆಯ ಜನತೆಯ ಬೇಡಿಕೆಗೆ ಮುಂದಾಗದಿದ್ದಲ್ಲಿ ಬೃಹತ್ ಸಾರ್ವಜನಿಕ ಆಂದೋಲನ ಹಮ್ಮಿಕೊಂಡು ವಿಧಾನಸೌಧಕ್ಕೂ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಈ ನೀರಿನಿಂದ ಬೆಳೆದ ತರಕಾರಿಗಳಲ್ಲಿ ವಿಷಕಾರಿ ಅಂಶಗಳು ಕಂಡು ಬಂದಿದೆ. ಆ ತರಕಾರಿಗಳು ತಿನ್ನಲು ಯೋಗ್ಯವಲ್ಲ ಎನ್ನಲಾಗುತ್ತಿದೆ. ಅದರ ಜತೆಗೆ ನಾವು ಕುಡಿಯುವತ್ತಿರುವ ನೀರು ಸಹ ಕುಡಿಯಲು ಯೋಗ್ಯವಲ್ಲ ಎಂದು ದೃಢ ಪಟ್ಟಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಮೂರನೇ ಹಂತದ ಪರಿಷ್ಕರಣೆ ಇಲ್ಲದೆ ಸರಬರಾಜು ಆಗುತ್ತಿರುವ ನೀರಿನಿಂದ ಜಿಲ್ಲೆಯಲ್ಲಿ ಹಲವಾರು ರೋಗಗಳು ಕಾಣಿಸಿಕೊಂಡಿದ್ದು, ನಮಗೆ ಕೊಳಚೆ ನೀರು ಬೇಡ,ಶುದ್ಧ ನೀರು ಬೇಕು ಎಂದು ಆಗ್ರಹಿಸಿದರು.ದಲಿತ ರಾಜ್ಯ ಮುಖಂಡ ಬಾಲಕುಂಟಹಳ್ಳಿ ಗಂಗಾಧರಪ್ಪ ಮಾತನಾಡಿ,ಬರಪೀಡಿತ ಪ್ರದೇಶವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಎಚ್ಎನ್ ವ್ಯಾಲಿ ನೀರನ್ನು ಕೆರೆಗಳಿಗೆ ಹರಿಸಲಾಗುತ್ತಿದೆ. ಆದರೆ, ಎರಡು ಹಂತದ ಶುದ್ಧೀಕರಣ ಮಾತ್ರ ಸಾಕಾಗದೇ ದುಷ್ಪರಿಣಾಮ ಉಂಟಾಗುತ್ತಿದೆ ಎಂಬ ಆರೋಪಗಳಿವೆ. ಮುಂದಿನ ದಿನಗಳಲ್ಲಿ ಸರ್ಕಾರ ನಮ್ಮ ಬರಪೀಡಿತ ಜಿಲ್ಲೆಗಳಿಗೆ ಶುದ್ಧ ನೀರು ನೀಡದಿದ್ದಲ್ಲಿ, ಇಂದು ಸಾಂಕೇತಿಕವಾಗಿ ಆರಂಭ ವಾಗಿರುವ ಈ ಹೋರಾಟವನ್ನು, ಚಿಕ್ಕಬಳ್ಳಾಪುರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಕೋಲಾರ ಜಿಲ್ಲೆಯ ಜನರನ್ನು ಪ್ರತಿನಿಧಿಸುತ್ತಿರುವ ಚುನಾಯಿತ ಜನಪ್ರತಿನಿಧಿಗಳ ಮನೆಯ ಮುಂದೆಯೂ ತೀವ್ರ ಪ್ರತಿಭಟನೆಯ ಹೋರಾಟ ಹಮ್ಮಿಕೊಳ್ಳುವುದಾಗಿ, ನಂತರ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಈ ಪಾದಯಾತ್ರೆಯಲ್ಲಿ ಪರಿಸರವಾದಿ ಚೌಡಪ್ಪ, ದೊಡ್ಡಬಳ್ಳಾಪುರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜಗದೀಶಗೌಡ, ಹಳ್ಳಿ ಮಕ್ಕಳ ಸಂಘದ ರಾಜ್ಯಾಧ್ಯಕ್ಷ ವೆಂಕಟರೋಣಪ್ಪ, ದಲಿತ ಮುಖಂಡರಾದ ಡಿ.ವಿ.ನಾರಾಯಣಸ್ವಾಮಿ, ದೇವದಾಸ್, ಸುರೇಶ್, ದೇವರಾಜು, ಕರ್ನಾಟಕ ವೀರ ಕನ್ನಡಿಗರ ವೇದಿಕೆಯ ರಾಜ್ಯಾಧ್ಯಕ್ಷ ಹಾಗೂ ಪದಾಧಿಕಾರಿಗಳು, ಕನ್ನಡಪರ, ರೈತಪರ, ದಲಿತಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಇದ್ದರು.