ಆಯುಧಪೂಜೆಗೆ ಕಳೆಗಟ್ಟಿದ ಮಾರುಕಟ್ಟೆ

KannadaprabhaNewsNetwork |  
Published : Oct 11, 2024, 11:52 PM IST
2.ಅಯುಧಪೂಜೆ ಹಾಗೂ ವಿಜಯ ದಶಮಿ ಪ್ರಯುಕ್ತ ಗುರುವಾರ ಬೆಳಗ್ಗೆ ರಾಮನಗರ ಎಪಿಎಂಸಿ ಮಾರುಕಟ್ಟೆಯಲ್ಲಿ ಕಂಡುಬಂದ ದೃಶ್ಯ. | Kannada Prabha

ಸಾರಾಂಶ

ರಾಮನಗರ: ಜಿಲ್ಲೆಯಲ್ಲಿ ಆಯುಧ ಪೂಜೆ ಹಬ್ಬಕ್ಕೆ ಸಡಗರದ ಸಿದ್ಧತೆ ನಡೆದಿದ್ದು, ಸಾರ್ವಜನಿಕರು ಅಂಗಡಿ, ವಾಹನಗಳನ್ನು ಸ್ವಚ್ಛಗೊಳಿಸಿ ಪೂಜೆಗೆ ಅಣಿಗೊಳಿಸಿಕೊಂಡಿದ್ದಾರೆ. ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಹಬ್ಬದ ಭರಾಟೆ ರಂಗೇರಿದೆ.

ರಾಮನಗರ: ಜಿಲ್ಲೆಯಲ್ಲಿ ಆಯುಧ ಪೂಜೆ ಹಬ್ಬಕ್ಕೆ ಸಡಗರದ ಸಿದ್ಧತೆ ನಡೆದಿದ್ದು, ಸಾರ್ವಜನಿಕರು ಅಂಗಡಿ, ವಾಹನಗಳನ್ನು ಸ್ವಚ್ಛಗೊಳಿಸಿ ಪೂಜೆಗೆ ಅಣಿಗೊಳಿಸಿಕೊಂಡಿದ್ದಾರೆ. ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಹಬ್ಬದ ಭರಾಟೆ ರಂಗೇರಿದೆ.

ಅ,11ರಂದು ಶುಕ್ರವಾರ ಆಯುಧ ಪೂಜೆ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಅಂಗಡಿ, ವಾಹನಗಳು ಸ್ವಚ್ಛತಾ ಕಾರ್ಯ ಆರಂಭಗೊಂಡಿತ್ತು. ಆಯುಧಪೂಜೆಗೆ ಅಗತ್ಯ ವಸ್ತುಗಳ ಖರೀದಿಗೆ ಗ್ರಾಮಾಂತರ ಪ್ರದೇಶಗಳಿಂದ ಜನ ನಗರಕ್ಕೆ ಆಗಮಿಸಿದ್ದರು. ನಗರದ ಎಪಿಎಂಸಿ ಮಾರುಕಟ್ಟೆ, ಎಂ.ಜಿ.ರಸ್ತೆ, ಹಳೇ ಬಸ್ ನಿಲ್ದಾಣ ವೃತ್ತ ಸೇರಿದಂತೆ ಪ್ರಮುಖ

ರಸ್ತೆಗಳಲ್ಲಿ ಬೂದುಗುಂಬಳ, ಹೂವು, ಬಾಳೆಕಂದು, ಮಾವಿನ ಸೊಪ್ಪು, ನಿಂಬೆಹಣ್ಣುಗಳನ್ನು ರಾಶಿ ಹಾಕಿಕೊಂಡು ವರ್ತಕರು ವ್ಯಾಪಾರದಲ್ಲಿ ನಿರತರಾಗಿದ್ದರು.

ಆಯುಧ ಪೂಜೆ ಆಚರಣೆಗೆ ಅಗತ್ಯ ಬೇಕಾದ ಬೂದುಕುಂಬಳಕಾಯಿ ಬೆಲೆ ಜಿಲ್ಲಾ ಕೇಂದ್ರದಲ್ಲಿ ಕಡಿಮೆ ಇದ್ದು, ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 20 ರು.ಗೆ ಮಾರಾಟವಾಗುತ್ತಿದೆ. ಜಿಲ್ಲೆಯ ಇತರೆಡೆಯಲ್ಲಿ ಕೆಜಿಗೆ 10 ರಿಂದ 20ರವರೆಗೂ ಮಾರಾಟವಾಗುತ್ತಿದೆ.

ರಾಮನಗರ ಮಾರುಕಟ್ಟೆ:

ಜಿಲ್ಲೆಯ ಬಹುತೇಕ ಎಲ್ಲಾ ಎಪಿಎಂಸಿ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಯು ಜೋರಾಗಿಯೇ ಸಾಗಿದೆ. ಅದರಲ್ಲೂ ಜಿಲ್ಲಾ ಕೇಂದ್ರದಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಬುಧವಾರದಿಂದಲೆ ಆರಂಭವಾಗಿತ್ತು. ಮಾರುಕಟ್ಟೆಗೆ ತೆರಳಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.

50 ರಿಂದ 120 ರು.ಗೆ ಮಾರಾಟ:

ಸಣ್ಣ ಬೂದಗುಂಬಳದಿಂದ ದೊಡ್ಡ ಬೂದುಗುಂಬಳದವರೆಗೆ ಪ್ರತಿ ಕೆಜಿಗೆ 20 ರು.ನಂತೆ ಮಾರಾಟ ಮಾಡಲಾಗುತ್ತಿತ್ತು. ಕನಿಷ್ಠ 50 ರು.ನಿಂದ ಗರಿಷ್ಠ 120 ರು.ವರೆಗೆ ಬೂದಗುಂಬಳ ಮಾರಾಟವಾಗುತ್ತಿತ್ತು. ದೊಡ್ಡ ಅಂಗಡಿ ಹಾಗೂ ದೊಡ್ಡ ವಾಹನಗಳ ಮಾಲೀಕರು ಅಗತ್ಯಕ್ಕೆ ತಕ್ಕಂತೆ ಬೂದಗುಂಬಳಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು.

ಬಾಳೆ ಕಂದು 30ರಿಂದ 100 ರು. ಬೆಲೆ ಇತ್ತು. ದೊಡ್ಡ ಗಾತ್ರದ ನಿಂಬೆ ಹಣ್ಣು 10 ರು.ಗಳಿಗೆ 1 ರಂತೆ ಮಾರಾಟವಾಗುತ್ತಿದ್ದರೆ, ಸಣ್ಣ ಗಾತ್ರದ ನಿಂಬೆಹಣ್ಣು 10 ರು.ಗಳಿಗೆ 2ರಂತೆ ಮಾರಾಟವಾಗುತ್ತಿತ್ತು.

ಸಾಮಾನ್ಯ ದಿನಗಳಲ್ಲಿ 30ರಿಂದ 40 ರು.ವರೆಗೆ ಇದ್ದ ಸೇವಂತಿಗೆ ಹೂವಿನ ಬೆಲೆ ಹಬ್ಬದ ಪ್ರಯುಕ್ತ ಕನಿಷ್ಠ 80-100 ರು.ವರೆಗೆ ತಲುಪಿತ್ತು. ಪ್ರತಿ ಮಾರು ಮಲ್ಲಿಗೆ ಹೂವು-100 ರು., ಮರಳೆ ಹೂ-100 ರು., ಕನಕಾಂಬರ-100 ರು., ಕಾಕಡ ಹೂ -100 ರು.ಗುಲಾಬಿ ಒಂದಕ್ಕೆ 15 ರಿಂದ 20 ರು., ಬಿಡಿ ಗುಲಾಬಿ 250 ಗ್ರಾಂಗೆ 100 ರು. ಸೇರಿದಂತೆ ಹೂವುಗಳ ಬೆಲೆ ಗಗನಮುಖಿಯಾಗಿತ್ತು.

ಹಾರಗಳ ಬೆಲೆಯಲ್ಲಿ ಹೆಚ್ಚಳ:

ವಾಹನಗಳಿಗೆ ಹಾಕುವ ಹೂವಿನ ಹಾರಗಳ ಬೆಲೆ ದುಪ್ಪಟ್ಟಾಗಿತ್ತು. ಸಾಮಾನ್ಯ ದಿನಗಳಲ್ಲಿ 100 ರು. ಇದ್ದ ಹೂವಿನ ಹಾರಗಳು ಹಬ್ಬದ ಪ್ರಯುಕ್ತ 200ರಿಂದ 250 ರು., ದೊಡ್ಡ ಗುಲಾಬಿ ಹೂವಿನ ಹಾರಗಳು 300-500 ರು.ವರೆಗೆ ಮಾರಾಟವಾಗುತ್ತಿದ್ದವು. ಆಯುಧ ಪೂಜೆಗೆ ಅಂಗಡಿ, ವಾಹನಗಳಿಗೆಲ್ಲಾ ಹೂವು ಹಾಗೂ ನಿಂಬೆ ಹಣ್ಣಿಗೆ ಅವಶ್ಯಕತೆ ಇರುವುದರಿಂದ ಇವರೆಡಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿತ್ತು. ಅದಕ್ಕೆ ತಕ್ಕಂತೆ ವ್ಯಾಪಾರಸ್ಥರೂ ಬೆಲೆಯಲ್ಲಿ ಹೆಚ್ಚಳ ಮಾಡಿ ಮಾರಾಟ ಮಾಡುತ್ತಿದ್ದು ಕಂಡುಬಂದಿತು. ಜನತೆ ಒಂದಷ್ಟು ಚೌಕಾಸಿ ಮಾಡಿ ಸಾಮಗ್ರಿ ಕೊಳ್ಳುವುದರಲ್ಲಿ ಮಗ್ನರಾಗಿದ್ದರು.

ಹಣ್ಣುಗಳ ಬೆಲೆಯಲ್ಲಿ ಏರಿಕೆ:

ಹಣ್ಣುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಕೊಂಚ ಏರಿಕೆಯಾಗಿತ್ತು. ಏಲಕ್ಕಿ ಬಾಳೆಹಣ್ಣು ಪ್ರತಿ ಕೆಜಿಗೆ 70 ರಿಂದ 100 ರು., ದಾಳಿಂಬೆ - 160 -200 ರು., ಸೇಬು 150 ರಿಂದ 200 ರು., ಮಿಕ್ಸ್ 150 ರು., ದ್ರಾಕ್ಷಿ 100 - 180 ರು., ಮೂಸಂಬಿ 80 ರು., ಕಿತ್ತಳೆ 80 ರು., ಕಪ್ಪು ದ್ರಾಕ್ಷಿ 120 ರು., ಸೀಬೆಹಣ್ಣು 100 ರು., ಮೂಸಂಬಿ 100 ರು., ಕರ್ಬೂಜ - 40 ರು., ಅನಾನಸ್ 60 ರು., ಪಚ್ಚಬಾಳೆ 50 ರು. ವರೆಗೆ ಮಾರಾಟವಾಗುತ್ತಿದ್ದವು.

ತರಕಾರಿ ಬೆಲೆ ಸಾಮಾನ್ಯ:

ತರಕಾರಿ ಬೆಲೆಯೂ ಸಾಮಾನ್ಯವಾಗಿತ್ತು. ಮಿಕ್ಸ್ ತರಕಾರಿ ಕೆ.ಜಿ.ಗೆ 60 ರು., ಪ್ರತಿ ಕೆಜಿ ಕ್ಯಾರೆಟ್ 50 ರು., ನಾಟಿ ಬಿನೀಸ್ 60 ರು., ಗೆಡ್ಡೆಕೋಸು 50 ರು., ಟೊಮೆಟೋ ಕೆಜಿ 60 ರು., ಬೀಟ್‌ರೂಟ್ 40 ರು., ಬದನೆಕಾಯಿ 40 ರು., ಹೂ ಕೋಸು 40 ರು., ಹಾಗಲಕಾಯಿ 40 ರು., ಬೆಂಡೇಕಾಯಿ 40 ರು., ಆಲೂಗಡ್ಡೆ 40 ರು., ಅವರೆಕಾಯಿ 60 ರು., ಕೊತ್ತಂಬರಿ ಸೊಪ್ಪು ಪ್ರತಿ ಕಂತೆಗೆ 20 ರಿಂದ 25 ರು. ನಿಗದಿಪಡಿಸಲಾಗಿತ್ತು.

ಸಿಹಿ ತಿನಿಸುಗಳ ಬೆಲೆಯಲ್ಲೂ ಏರಿಕೆ:

ಆಯುಧ ಪೂಜೆ ಹಬ್ಬದಲ್ಲಿ ಸಿಹಿ ತಿನಿಸುಗಳನ್ನು ಪೂಜೆಗೆ ಇಡುವುದರಿಂದ ಹಾಗೂ ಸಿಹಿ ತಿನಿಸುಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಅದಕ್ಕೂ ಹೆಚ್ಚಿನ ಬೇಡಿಕೆ ಕಂಡುಬಂದಿರುವುದರಿಂದ ಬೆಲೆಯಲ್ಲೂ ಹೆಚ್ಚಳವಾಗಿದೆ. ಪ್ರತಿ ಕೆಜಿ ಬೂಂದಿ 250 ರು., ಮಿಲ್ಕ್ ಬರ್ಫಿ 520 ರು., ಹಾರ್ಲಿಕ್ಸ್ ಬರ್ಫಿ 620 ರು., ಲಾಡು 340 ರು., ಮೈಸೂರು ಪಾಕ್ 660 ರು., ಜಹಂಗೀರ್ 280 ರು., ಸೋಂಪಾಪುಡಿ 580 ರು., ಹಲ್ವಾ 400 ರು. ಸೇರಿದಂತೆ ಅನೇಕ ಸಿಹಿ ಪದಾರ್ಥಗಳ ಬೆಲೆ ಕನಿಷ್ಠ 30 ರು.ನಿಂದ 50 ರು.ವರೆಗೆ ಹೆಚ್ಚಾಗಿತ್ತು. ಮತ್ತು ಪ್ರತಿ ಕೆಜಿ ಸ್ಪೆಷಲ್ ಖಾರ- 380 ರು., ಸಾಮಾನ್ಯ ಖಾರ 300 ರು.ವರೆಗೆ ಮಾರಾಟವಾಗುತ್ತಿದ್ದವು.

ಸರ್ಕಾರಿ ಕಚೇರಿಗಳು :

ಇನ್ನು ಹಬ್ಬದ ಪ್ರಯುಕ್ತ ಸಾಲು ಸಾಲು ರಜೆ ಇರುವ ಕಾರಣ ಗುರುವಾರೆ ಜಿಲ್ಲೆಯ ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಆಯುಧ ಪೂಜೆ ಆಚರಣೆ ಮಾಡಲಾಯಿತು.

10ಕೆಆರ್ ಎಂಎನ್ 2,3.ಜೆಪಿಜಿ

2.ಅಯುಧಪೂಜೆ ಹಾಗೂ ವಿಜಯ ದಶಮಿ ಪ್ರಯುಕ್ತ ಗುರುವಾರ ಬೆಳಗ್ಗೆ ರಾಮನಗರ ಎಪಿಎಂಸಿ ಮಾರುಕಟ್ಟೆಯಲ್ಲಿ ಕಂಡುಬಂದ ದೃಶ್ಯ.

3.ರಾಮನಗರದಲ್ಲಿ ಬೂದಕುಂಬಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ವ್ಯಾಪಾರಿಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!