ದಯಾಮರಣಕ್ಕೆ ರಾಷ್ಟ್ರಪತಿಗಳಿಗೆ ಮೊರೆಹೋದ ಮಹಿಳೆ!

KannadaprabhaNewsNetwork |  
Published : Dec 12, 2024, 12:32 AM IST
ಪ್ರಧಾನ ಮಂತ್ರಿಗಳ ಕಾರ್ಯಾಲಯದಿಂದ ಎಸ್ಎಂಎಸ್ ಹಾಗೂ ಕರೆ ಮಾಡಿ ಧೈರ್ಯ ತುಂಬಿ ಸರ್ಕಾರಕ್ಕೆ ಸೂಚಿಸಿರುವುದು.  | Kannada Prabha

ಸಾರಾಂಶ

ತಮ್ಮ ಜಮೀನನ್ನು ಉಳುಮೆ ಮಾಡಲು ಹಲವರು ಬಿಡುತ್ತಿಲ್ಲ. ಈ ವಿಷಯವಾಗಿ ನಾನು ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೂ ನ್ಯಾಯ ಕೊಡಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನನಗೆ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ರೋಣ ತಾಲೂಕಿನ ಕೃಷ್ಣಾಪುರ ಗ್ರಾಮದ ನಿವಾಸಿ ಶಾರದಾ ಹಿರೇಮಠ ಪತ್ರ ಬರೆದಿದ್ದಾರೆ.

ಶಿವಕುಮಾರ ಕುಷ್ಟಗಿ

ಗದಗ: ತಮ್ಮ ಜಮೀನನ್ನು ಉಳುಮೆ ಮಾಡಲು ಹಲವರು ಬಿಡುತ್ತಿಲ್ಲ. ಈ ವಿಷಯವಾಗಿ ನಾನು ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೂ ನ್ಯಾಯ ಕೊಡಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನನಗೆ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಮಹಿಳೆಯೋರ್ವಳು ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು, ರಾಜ್ಯದ ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ರೋಣ ತಾಲೂಕಿನ ಕೃಷ್ಣಾಪುರ ಗ್ರಾಮದ ನಿವಾಸಿ ಶಾರದಾ ಹಿರೇಮಠ ದಯಾಮರಣ ಕೋರಿದ ಮಹಿಳೆ.

ಇವರಿಗೆ ಸೇರಿದ ಕೃಷಿ ಜಮೀನು (ಸರ್ವೇ ನಂ. 35/3 ಹಾಗೂ 90/2) ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾಮದ ವ್ಯಾಪ್ತಿಯಲ್ಲಿವೆ. ಅಲ್ಲಿನ ಕೆಲವರು ಇವರಿಗೆ ಆಮೀನಿಗೆ ಹೋಗಲು ಬಿಡುತ್ತಿಲ್ಲ ಎನ್ನುವುದು ಅವರ ಅಳಲು. ಈ ಸಮಸ್ಯೆ ಬಗೆಹರಿಸುವಂತೆ ಮತ್ತು ತಮಗೆ ರಕ್ಷಣೆ ನೀಡುವಂತೆ ಪೊಲೀಸ್, ತಹಸೀಲ್ದಾರ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆಲ್ಲ ಮನವಿ ಮಾಡಿದರೂ ಪ್ರಯೋಜನ ಆಗದಿರುವಾಗ ಈ ನಿರ್ಧಾರ ಕೈಕೊಂಡಿದ್ದಾರೆ.

ಮನವಿ ಪತ್ರದಲ್ಲೇನಿದೆ?: 2024 ಸೆ. 27ರಂದು ರಾಜ್ಯಪಾಲರಿಗೆ ಮನವಿ ಪತ್ರ ಬರೆದಿದ್ದಾರೆ. ಶಾಂತಗೇರಿ ಗ್ರಾಮದ ಕೆಲವರು ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಲಿಖಿತವಾಗಿ ಹಲವಾರು ಮನವಿ ಮಾಡಿದರೂ ನನಗೆ ಸೂಕ್ತವಾದ ರಕ್ಷಣೆ ಕೊಡುತ್ತಿಲ್ಲ. ನನ್ನ ಜಮೀನುಗಳಿಗೆ ನಾನು ಹೋಗಲು ಭಯ ಪಡುವಂತಾಗಿದೆ. ಸರ್ಕಾರದ ಗಮನಕ್ಕೆ ನನ್ನ ಸಮಸ್ಯೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನನಗೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ಕೋರಿದ್ದಾರೆ.

ಮನವಿಗಳು ಸ್ವೀಕೃತವಾಗಿರುವ ಬಗ್ಗೆ ಎಲ್ಲ ಕಾರ್ಯಾಲಯಗಳಿಂದಲೂ ಪತ್ರಗಳು ಬಂದಿವೆ. ಮಹಿಳೆಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಗದಗ ಜಿಲ್ಲಾಧಿಕಾರಿ ಕಾರ್ಯಾಲಯದಿಂದಲೂ ಸಂಬಂಧಿಸಿದ ಇಲಾಖೆಗೆ ಪತ್ರ ಬರೆದಿದ್ದರೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಮಹಿಳೆಯ ದೂರಾಗಿದೆ. ಯಾರೂ ಸ್ಪಂದಿಸುತ್ತಿಲ್ಲ: ನಮ್ಮ ಜಮೀನುಗಳ ವಿಷಯವಾಗಿ ಈಗಾಗಲೇ ಪ್ರಕರಣವು ರೋಣ ನ್ಯಾಯಾಲಯದಲ್ಲಿ, ಜಿಲ್ಲಾ ನ್ಯಾಯಾಲಯದಲ್ಲಿ, ರಾಜ್ಯ ಉಚ್ಚನ್ಯಾಯಾಲಯದಲ್ಲಿ ದಾಖಲಾಗಿ, ನನ್ನ ಪರವಾಗಿಯೇ ತೀರ್ಪು ಬಂದಿದೆ. ಜಮೀನುಗಳ ಉತಾರಗಳು ನನ್ನ ಹೆಸರಿನಲ್ಲಿಯೇ ಇವೆ. ಆದರೂ ಆ ಗ್ರಾಮದಲ್ಲಿನ ಕೆಲವರು ನಮ್ಮ ಜಮೀನಿಗೆ ಸಂಬಂಧವೇ ಇರದಿದ್ದರೂ ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ನಮ್ಮ ಜಮೀನಿಗೆ ನಾವು ಹೋಗಲು ಸಾಧ್ಯವಾಗುತ್ತಿಲ್ಲ. ರೋಣ ಪೊಲೀಸರಿಗೆ ಮನವಿ ಮಾಡಿದರೂ ಅವರು ಸ್ಪಂದಿಸುತ್ತಿಲ್ಲ. ಸಿಎಂ, ಉಪಮುಖ್ಯಮಂತ್ರಿಗೆ ಹಲವಾರು ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಗದೇ ಇರುವ ಹಿನ್ನೆಲೆಯಲ್ಲಿ ನಾನು ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗೆ ದಯಾಮರಣಕ್ಕಾಗಿ ಮನವಿ ಸಲ್ಲಿಸಿದ್ದೇನೆ. ಪ್ರಧಾನಮಂತ್ರಿ ಕಾರ್ಯಾಲಯದಿಂದ ದೂರವಾಣಿ ಮೂಲಕ ಮಾತನಾಡಿ, ಧೈರ್ಯ ತುಂಬಿದ್ದಾರೆ. ರಾಜ್ಯ ಸರ್ಕಾರಕ್ಕೆ ಸೂಕ್ತ ಕ್ರಮಕ್ಕಾಗಿ ಸೂಚಿಸುತ್ತೇವೆ ಎಂದು ಹೇಳಿದ್ದಾರೆ. ರಾಷ್ಟ್ರಪತಿ ಕಾರ್ಯಾಲಯದಿಂದಲೂ ಸೂಕ್ತ ರಕ್ಷಣೆ ನೀಡುವಂತೆ 2024 ಅ. 29ರಂದೇ ಗದಗ ಎಸ್ಪಿ ಕಚೇರಿ ಪತ್ರ ಬಂದಿದ್ದರೂ ಇನ್ನು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಶಾರದಾ ಹಿರೇಮಠ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌