ನರೇಗಲ್ಲ: ಇಂದಿನ ದಿನಗಳಲ್ಲಿ ಮಹಿಳೆ ಎಲ್ಲ ರಂಗಗಳಲ್ಲಿಯೂ ಸಮರ್ಥಳಾಗಿದ್ದಾಳೆ. ಈ ಹಿಂದಿನ ದಿನಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಅವಳ ಬದುಕು ಎಂಬುದನ್ನು ದಾಟಿ ಮುಂದೆ ಬಂದಿರುವ ಮಹಿಳೆ ಸಮಾಜದಲ್ಲಿ ಪುರುಷನಷ್ಟೆ ಸಮರ್ಪಕವಾಗಿ ಕಾರ್ಯಗಳನ್ನು ನಿರ್ವಹಿಸಬಲ್ಲಳು ಎಂಬುದನ್ನು ಅನೇಕ ಉದಾಹರಣೆಗಳ ಮೂಲಕ ಸಾಧಿಸಿ ತೋರಿಸಿದ್ದಾಳೆ ಎಂದು ಸಂಗೀತಗಾರ್ತಿ ರಾಜಶ್ರೀ ಕುಲಕರ್ಣಿ ಹೇಳಿದರು.
ಸ್ಥಳೀಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಹಿಳೆಗೂ ಒಂದು ವ್ಯಕ್ತಿತ್ವವಿದೆ. ಅವಳೂ ಪುರುಷರಂತೆ ಎಲ್ಲ ರೀತಿಯ ಶ್ರಮದಾಯಕ ಕಾರ್ಯಗಳನ್ನು ನಿರ್ವಹಿಸಬಲ್ಲಳು. ಅದಕ್ಕಾಗಿ ಅವಳಿಗಾಗಿಯೆ ಒಂದು ದಿನ ಮೀಸಲಿಡಬೇಕು ಎಂದು ಪ್ರತಿಪಾದಿಸಿದವರು ಕ್ಲಾರಾ ಜೆಟ್ಕಿನ್. ೧೯೧೧ರ ಮಾರ್ಚ್ ೮ರಂದು ಈ ಕುರಿತು ತನ್ನ ಅಭಿಪ್ರಾಯವನ್ನು ಮಂಡಿಸಿದ ಅವರು ಮಹಿಳಾ ದಿನಾಚರಣೆಯನ್ನು ಜಾರಿಗೆ ತಂದಿದ್ದಾರೆ ಎಂದರು.ಇಂದಿನ ದಿನ ಮಹಿಳೆ ಮಾಡಿರುವ ಸಾಧನೆಗಳ ಕುರಿತು ಪ್ರಾತ್ಯಕ್ಷಿಕೆ, ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ, ಮಹಿಳೆಯರಿಗೆ ರಾಜ್ಯ, ಕೇಂದ್ರ ಸರ್ಕಾರಗಳು ಅನುಷ್ಠಾನ ಮಾಡಿರುವ ಕಾರ್ಯಕ್ರಮಗಳು, ಸಂಘ ಸಂಸ್ಥೆಗಳು ಮಹಿಳೆಯರಿಗಾಗಿ ಸಂಕಲ್ಪಿಸಿರುವ ಕಾರ್ಯಕ್ರಮಗಳು ಹೀಗೆ ಎಲ್ಲದರ ಬಗ್ಗೆ ಇಂದಿನ ದಿನ ಚರ್ಚೆ ನಡೆಯಬೇಕೆಂಬುದು ಜಟ್ಕಿನ್ ಅವರ ಆಶಯವಾಗಿತ್ತು. ಈಗ ಅದರಂತೆಯೆ ಜಗತ್ತಿನಾದ್ಯಂತ ಮಾ. ೮ರಂದು ಮಹಿಳಾ ದಿನ ಆಚರಿಸಿ, ಮಹಿಳೆಯರಿಗೆ ಗೌರವ ನೀಡಲಾಗುತ್ತಿದೆ. ಇದು ಎಲ್ಲ ಮಹಿಳೆಯರೂ ಅಭಿಮಾನ ಪಡಬೇಕಾಗಿರುವ ಸಂಗತಿ ಎಂದು ಹೇಳಿದರು.
ನಮ್ಮೆಲ್ಲರ ಪ್ರತಿನಿಧಿಯಾಗಿ ಮಾ. ೮ರಂದು ರಾಜ್ಯಸಭೆಯ ಸದಸ್ಯೆಯಾಗಿ ನೇಮಕಗೊಂಡಿರುವ ಇನ್ಫೋಸಿಸ್ನ ಸುಧಾ ಮೂರ್ತಿ ಅವರು ನಮ್ಮೆಲ್ಲರ ಆಶಾ ಕಿರಣವಾಗಿದ್ದಾರೆ. ಸಮಾಜದ ಉದ್ಧಾರಕ್ಕಾಗಿ ಸುಧಾಮೂರ್ತಿ ಅವರು ಕೈಗೊಂಡಿರುವ ಕಾರ್ಯಗಳನ್ನು ಗುರುತಿಸಿ ಅವರನ್ನು ರಾಜ್ಯಸಭೆಗೆ ಮಹಿಳಾ ದಿನಾಚರಣೆಯಂದೆ ನೇಮಕಗೊಳಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮತ್ತು ಕೇಂದ್ರ ಸರ್ಕಾಕ್ಕೆ ಮಹಿಳೆಯರೆಲ್ಲರೂ ಅಭಿನಂದನೆಗಳನ್ನು ತಿಳಿಸಬೇಕೆಂದು ಎಂದರು.ಸಂಚಾಲಕಿ ಸವಿತಕ್ಕ ಮಾತನಾಡಿ, ಮಹಿಳೆಯರಿಂದ ನಡೆಯುವ ಈ ವಿಶ್ವವಿದ್ಯಾಲಯವು ಮಹಿಳೆಯರಿಗಾಗಿಯೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅವರನ್ನು ಜಾಗೃತಗೊಳಿಸಲು ಪ್ರಯತ್ನಿಸುತ್ತಿದೆ. ಅವರಿಗೆ ಒತ್ತಡರಹಿತವಾಗಿ ಹೇಗೆ ಬಾಳಬೇಕು ಎಂಬುದರ ಬಗ್ಗೆ ಪಾಠ ನೀಡುತ್ತಿದೆ. ಭಗವಂತನ ಬಗ್ಗೆ ಜ್ಞಾನವನ್ನು ಪಡೆದುಕೊಂಡ ಮಹಿಳೆಯರು ತಮ್ಮ ಬದುಕಿನಲ್ಲಿ ಸಂತಸದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಇದರಿಂದ ಅವರು ಮಾನಸಿಕವಾಗಿ, ದೈಹಿಕವಾಗಿ ಸಧೃಡಗೊಂಡು ತಮ್ಮ ಕುಟುಂಬದ ಸೇವೆಯ ಜತೆಗೆ ಸಮಾಜದ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ ಎಂದರು.
ಈ ವೇಳೆ ಶಿಕ್ಷಕಿ ಶ್ವೇತಾ ಕೊಟಗಿ ಮಾತನಾಡಿದರು. ಆರೋಗ್ಯ ಇಲಾಖೆಯ ರತ್ನಾ ಅವರೆಡ್ಡಿ, ಪಪಂ ಸದಸ್ಯೆ ಸುಮಿತ್ರಾ ಕಮಲಾಪುರ, ಶಿಕ್ಷಕಿ ಕೆ.ವಿ. ಕಟ್ಟಿ, ನೇತ್ರಾ ಅಪ್ಪಣ್ಣವರ, ರತ್ನಾ ಬಾಣದ, ರೇಖಾ ದೇವರೆಡ್ಡಿ, ಹೇಮಾ ಚನ್ನಗಿರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ಸಿಬ್ಬಂದಿ, ಪಪಂ ಸದಸ್ಯೆಯರು, ಧರ್ಮಸ್ಥಳ ಗುಂಪಿನ ಸದಸ್ಯೆಯರು ಇದ್ದರು.