ಕನ್ನಡಪ್ರಭ ವಾರ್ತೆ ಬಾಗಲಕೋಟೆಮಹಿಳೆ ಈಗ ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿದ್ದಾಳೆ. ಮಾತ್ರವಲ್ಲ ಎಲ್ಲರಿಗೂ ಪ್ರೇರಕ ಶಕ್ತಿಯಾಗಿ ಇದ್ದಾಳೆ. ಹೀಗಾಗಿ ಮಹಿಳೆಯರು ಇಂದಿನ ದಿನಮಾನಗಳಲ್ಲಿ ಕುಟುಂಬ ನಿರ್ವಹಣೆ ಜತೆಗೆ ಇತರೆ ಕ್ಷೇತ್ರಗಳತ್ತಲೂ ಗಮನ ಹರಿಸಬೇಕು ಎಂದು ವಿವಿಕೆ ಫೌಂಡೇಶನ್ ಅಧ್ಯಕ್ಷೆ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.ನಗರದಲ್ಲಿ ಕಾಶವ್ವತಾಯಿ ವಿದ್ಯಾಸಿರಿ ಸೇವಾ ಸಂಸ್ಥೆ ಆಯೋಜಿಸಿದ್ದ 2026ನೇ ಅಂತಾರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜನಪದ ಕಾರ್ಯಕ್ರಮದಲ್ಲಿ ಅವರು ಸಸಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದರು. ಮಹಿಳೆ ಆದಿಶಕ್ತಿ ಸ್ವರೂಪಿಣಿಯಾಗಿದ್ದಾಳೆ. ಮನೆ ಕೆಲಸ ಮಾಡುತ್ತ ಸ್ವಯಂ ಆರೋಗ್ಯದ ಕಡೆಗೆ ಲಕ್ಷ್ಯ ಕೊಡಬೇಕು. ಮನೆಯ ಕುಟುಂಬದವರ ಆರೋಗ್ಯವನ್ನು ಪ್ರಮುಖವಾಗಿ ನೋಡಿಕೊಳ್ಳುವ ಮಹಿಳೆಗೆ ತನ್ನ ಆರೋಗ್ಯದ ಕಡೆಗೂ ಗಮನಹರಿಸಬೇಕಾಗಿದೆ. ಸದೃಢ ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ಮಹಿಳೆ ತನ್ನ ಆರೋಗ್ಯದತ್ತ ಗಮನಹರಿಸಬೇಕು ಎಂದರು.ಸಮಾಜ ಸೇವಕಿ ಗೌರಮ್ಮ ಸಂಕೀನಮಠ ಮಾತನಾಡಿ, ಭಾಗ್ಯದ ನಾಡಾಗಿ ಭಾರತದಲ್ಲಿ ಹೆಸರುವಾಸಿಯಾಗಿ ಜನಪದ ಉಳಿದು ಬೆಳೆಯುವಲ್ಲಿ ಜನಪದ ಕಲಾವಿದರು ಶ್ರಮಿಸಬೇಕು. ಜತೆಗೆ ಮಹಿಳೆಯರು ಕೂಡ ಹೆಚ್ಚು ಜನಪದದಲ್ಲಿ ಗುರುತಿಸಿಕೊಂಡಿದ್ದು ಹಲವರು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ ಎಂದರು.ಡಾ.ಕೋವಳ್ಳಿ ಡಿ.ಪಿ, ಅಮಲಝರಿ ಎ.ಆರ್.ಹಿರೇಮಠ ಹಾಜರಿದ್ದರು. ಉಪನ್ಯಾಸಕಿ ಪವಿತ್ರಾ ಜಕ್ಕಪ್ಪನವರ ಪ್ರಾರ್ಥಿಸಿದರು. ಬೀಸುಕಲ್ಲಪದ, ಕೋಲಾಟ, ಸಂಪ್ರದಾಯದ ಹಾಡುಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.ಜನಪದ ಕಲಾ ತಂಡಗಳಾದ ರಡ್ಡೇರ ತಿಮ್ಮಾಪೂರ ಗ್ರಾಮದ ಸಾವಿತ್ರಿ ಹೂಗಾರ ಹಾಗೂ ಸಂಗಡಿಗರು, ಭಗವತಿ ಗ್ರಾಮದ ಬಸವ್ವ ಕಂಕಣಮೇಲಿ ಹಾಗೂ ಸಂಗಡಿಗರು, ಕೆರೂರು ಗ್ರಾಮದ ಕಸ್ತೂರೆವ್ವ ಗದ್ದನಕೇರಿ, ಶೋಭಾ ಸಣ್ಣಕ್ಕಿ ಹಾಗೂ ಸಂಗಡಿಗರಿಗೆ ಕಾಶವ್ವತಾಯಿ ವಿದ್ಯಾಸಿರಿ ಸೇವಾ ಸಂಸ್ಥೆ ವತಿಯಿಂದ ಗೌರವಧನದೊಂದಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.ಸಂಸ್ಥೆಯ ನಿರ್ದೇಶಕರಾದ ಡಾ.ವೆಂಕಟೇಶ ಮಂಟೂರ, ವಿ.ಟಿ.ಶೇಷಪ್ಪನವರ ಎಸ್.ಎಚ್.ಗಾಣಿಗೇರ, ಲಕ್ಷ್ಮೀ ಹದ್ಲಿ ಇತರರು ಉಪಸ್ಥಿತರಿದ್ದರು. ಟಿ.ಬಿ.ಕೆಂಚಣ್ಣವರ ನಿರೂಪಿಸಿ, ವಂದಿಸಿದರು.