ಸಿಂಧನೂರು: ತಾಲೂಕಿನ ಮುಕುಂದ ಗ್ರಾಮದ ತುಂಗಭದ್ರಾ ನದಿಗೆ ಈಜಲು ಹೋದ ಯುವಕನೊಬ್ಬ ಕೊಚ್ಚಿಕೊಂಡು ಹೋಗಿರುವ ಘಟನೆ ಭಾನುವಾರ ಜರುಗಿದೆ. ನಗರದ ಬಡಿ ಬೇಸ್ ಬಡಾವಣೆಯ ಮಹಿಬೂಬ್ (23) ಎಂಬ ಯುವಕ ನಾಪತ್ತೆಯಾಗಿದ್ದಾನೆ. ಸ್ನೇಹಿತರಿಬ್ಬರು ಬೆಳಗ್ಗೆ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋದಾಗ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಮತ್ತೊಬ್ಬ ಸ್ನೇಹಿತ ಅಬ್ಬು ಎಂಬಾತನನ್ನು ಗ್ರಾಮಸ್ಥರು ರಕ್ಷಿಸಿ ಪ್ರಾಣಪಾಯದಿಂದ ಪಾರು ಮಾಡಿದ್ದಾರೆ. ಆದರೆ ಮಹಿಬೂಬ್ ರಾತ್ರಿ 7 ಗಂಟೆ ಯಾದರೂ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ವೀರಾರೆಡ್ಡಿ ಭೇಟಿ ನೀಡಿದ್ದಾರೆ. ಮೇಲಾಧಿಕಾರಿಗೆ ಮಾಹಿತಿ ನೀಡಿ ಈಜು ತಜ್ಞರನ್ನು ಕರೆಸಿ ಶೋಧಕಾರ್ಯಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.