ನಗರ ಪಾಲಿಕೆ ಚುನಾವಣೆ ನಡೆಸದಿದ್ದರೆ ಮೊಕದ್ದಮೆ : ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು

KannadaprabhaNewsNetwork | Updated : Mar 24 2025, 12:37 PM IST

ನಗರ ಪಾಲಿಕೆ ಚುನಾವಣೆಯನ್ನು ಕೂಡಲೇ ನಡೆಸಿ, ಬೃಹತ್‌ ಮೈಸೂರು ಮಹಾನಗರ ಪಾಲಿಕೆ ರಚನೆ ಸಂಬಂಧ ಚರ್ಚೆಗೆ ಅವಕಾಶ ನೀಡದಿದ್ದರೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದಾಗಿ ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದರು.

  ಮೈಸೂರು :  ನಗರ ಪಾಲಿಕೆ ಚುನಾವಣೆಯನ್ನು ಕೂಡಲೇ ನಡೆಸಿ, ಬೃಹತ್‌ ಮೈಸೂರು ಮಹಾನಗರ ಪಾಲಿಕೆ ರಚನೆ ಸಂಬಂಧ ಚರ್ಚೆಗೆ ಅವಕಾಶ ನೀಡದಿದ್ದರೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದಾಗಿ ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹೋರಾಟ ಸಮಿತಿ ಏರ್ಪಡಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ರಾಜ್ಯ ಸರ್ಕಾರವು ಬೃಹತ್‌ ನಗರ ಪಾಲಿಕೆ ರಚನೆ ಹೆಸರಿನಲ್ಲಿ ಮುಂದೂಡುತ್ತಿದೆ. ಚುನಾವಣಾ ಆಯೋಗ ಕೂಡ ರಾಜ್ಯಸರ್ಕಾರದ ಮರ್ಜಿ ಕಾಯದೆ, ಅವಧಿ ಮುಗಿದಿರುವ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರ ಚುನಾವಣೆ ಘೋಷಿಸಬೇಕು ಎಂದರು.

ಸದ್ಯ ಮೂರು ಪಕ್ಷದವರು ಜನಹಿತ ಮರೆತು ವೈಯಕ್ತಿಕ ಹಿತಾಸಕ್ತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಈ ಮೂವರಲ್ಲಿ ಯಾರೂ ಹಿತವರಲ್ಲ. ಆದ್ದರಿಂದ ರಾಜ್ಯದಲ್ಲಿ ಪರ್ಯಾಯ ಪಕ್ಷಗಳ ಅದತ್ಯವಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ ಈ ಮೂರು ಪಕ್ಷಗಳ ಸ್ಥಳೀಯ ಮುಖಂಡರು, ಕಾರ್ಯಕರ್ತರಿಗೆ ಬೃಹತ್ ಮಹಾ ನಗರಪಾಲಿಕೆ ರಚನೆ ಬದಲಿಗೆ ಶಿಘ್ರ ಚುನಾವಣೆ ನಡೆಯುವುದು ಬೇಕಿದೆ. ಆದರೆ, ಪಕ್ಷದ ನಾಯಕತ್ವದ ವಿರುದ್ಧ ಧ್ವನಿ ಎತ್ತಲಾಗದೆ ಸುಮ್ಮನಿದ್ದಾರೆ ಎಂದು ಅವರು ಹೇಳಿದರು.

ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜೇ ಅರಸು ಮಾತನಾಡಿ, ಕಳೆದ ಹದಿನೇಳು ತಿಂಗಳಿಂದ ಮೈಸೂರು ನಗರಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲ. ಮೈಸೂರಿನ ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಪ್ರಶ್ನಿಸಿದರು.

ವಿಧಾನಸಭೆಗೆ ಅವಧಿ ಮುಗಿದ ಕೂಡಲೇ ಚುನಾವಣೆ ನಡೆಸಲಾಗುತ್ತದೆ, ಇಲ್ಲೇಕೆ ಸಾಧ್ಯವಾಗುತ್ತಿಲ್ಲ? ಬೃಹತ್ ಮೈಸೂರು ಮಹಾ ನಗರಪಾಲಿಕೆ ರಚನೆ ಹೆಸರಲ್ಲಿ ಸರ್ಕಾರ ಮೈಸೂರಿನ ನಾಗರಿಕರ ಮೂಗಿಗೆ ತುಪ್ಪ ಸವರಲು ಹೊರಟಿದೆ.

ಬೃಹತ್ ಮಹಾ ನಗರಪಾಲಿಕೆ ರಚನೆ ಮಾಡಿದರೆ ಈಗಿರುವ 65 ವಾರ್ಡ್ ಬದಲಿಗೆ 99 ವಾರ್ಡ್ ರಚನೆ ಮಾಡಲಾಗುತ್ತದೆ. ಲ್ಯಾಂಡ್ ಮಾಫಿಯಾ, ಲೇಔಟ್ ಮಾಫಿಯಾದವರು ಅವರ ಆಸ್ತಿಯ ಮೌಲ್ಯ ಹೆಚ್ಚಿಸಿಕೊಳ್ಳಲು ಈ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಸರ್ಕಾರ ಮನ್ನಣೆ ನೀಡಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಸೋಮಸುಂದರ್, ಬಿ.ಎಸ್‌.ಪಿ ರಾಜ್ಯಪ್ರಧಾನ ಕಾರ್ಯದರ್ಶಿ ನಾಗಯ್ಯ, ಸೋಸಲೆ ಸಿದ್ದರಾಜು, ಕನ್ನಡ ವೇದಿಕೆಯ ಬಾಬು ಇದ್ದರು

  ಚರ್ಚೆಯೇ ನಡೆದಿಲ್ಲ 

ಎಸ್‌.ಡಿ.ಪಿ.ಐನ ಅಬ್ದುಲ್ ಮಜೀದ್ ಮಾತನಾಡಿ, ಬೃಹತ್ ಮಹಾ ನಗರಪಾಲಿಕೆ ರಚನೆ ಸಂಬಂಧ ಸಾರ್ವಜನಿಕ ಚರ್ಚೆಯೇ ನಡೆದಿಲ್ಲ. ಬದಲಿಗೆ ರಿಯಲ್ ಎಸ್ಟೇಟ್ ಲಾಬಿಗೆ ಮಣೆಹಾಕಲು ಸರ್ಕಾರ ಬೃಹತ್ ಮೈಸೂರು ಮಹಾ ನಗರಪಾಲಿಕೆ ರಚನೆಯ ಹೆಸರೇಳುತ್ತಿದೆ. ಸದ್ಯ ಇರುವ 65 ವಾರ್ಡ್‌ಗಳಿಗೇ ಸಮರ್ಪಕ ಮೂಲ ಸೌಕರ್ಯ ಕಲ್ಪಿಸಲಾಗದವರು ಬೃಹತ್ ಮಹಾ ನಗರಪಾಲಿಕೆ ಮಾಡಿದರೆ ನಾಗರಿಕ ಸೌಕರ್ಯ ಕಲ್ಪುಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು

.ನಗರದ ಮೂರು ಜನ ಶಾಸಕರೂ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಪಾಲಿಕೆ ಚುನಾವಣೆ ನಡೆಯದಂತೆ ನೋಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವವಾದಿಯಾದರೆ ತಕ್ಷಣ ಚುನಾವಣೆ ನಡೆಸಲಿ ಎಂದು ಅವರು ಒತ್ತಾಯಿಸಿದರು.