ಕಬ್ಬು ಕಾಯ್ದೆ ರದ್ದುಗೊಳಿಸಿ, ಎಸ್ಎಪಿ ಪುನಃ ಜಾರಿಗೆ ತನ್ನಿ

KannadaprabhaNewsNetwork | Published : Oct 2, 2024 1:01 AM

ರಾಜ್ಯ ಸರ್ಕಾರ ಹರಿಯಾಣ ಪಂಜಾಬ್ ಮಾದರಿಯಲ್ಲಿ ಪ್ರತಿ ಟನ್‌ಗೆ 900 ರುಪಾಯಿಗಳ ಎಸ್ಎಪಿ ನಿಗದಿಪಡಿಸಬೇಕು. ರೆವಿನ್ಯೂ ಶೇರಿಂಗ್ ಫಾರ್ಮುಲ್‌ ರದ್ದುಪಡಿಸಬೇಕು

ಕನ್ನಡಪ್ರಭ ವಾರ್ತೆ ಕಲಬುರಗಿ

ಕರ್ನಾಟಕ ಕಬ್ಬು ಕಾಯ್ದೆ 2013 ರದ್ದುಪಡಿಸಿ, ರಾಜ್ಯ ಸಲಹಾ ಬೆಲೆ ನೀತಿ (ಎಸ್ಎಪಿ) ಪುನರ್ ಸ್ಥಾಪಿಸಲು ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನು ಕಲಬುರಗಿಯಲ್ಲಿ ನಡೆದ ಕಬ್ಬು ಬೆಳೆಗಾರರ ಸಮ್ಮೇಳನ ಅಂಗೀಕರಿಸಿದೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮ್ಮೇಳನದಲ್ಲಿ 13ನಿರ್ಣಯ ಅಂಗೀಕಾರ ಮಾಡಿ, ಅವುಗಳ ಜಾರಿಗಾಗಿ ಸರ್ಕಾರಕ್ಕೆ ಒತ್ತಾಯಿಸಲಾಯಿತು. ರೈತ ವಿರೋಧಿ ಸಹಕಾರಿ ಹಾಗೂ ಸಾರ್ವಜನಿಕರಂಗದ ಸಕ್ಕರೆ ಕಾರ್ಖಾನೆಗಳ ವಿರೋಧಿ ರಂಗರಾಜನ್ ಸಮಿತಿ ಶಿಫಾರಸ್ಸಿನ ಹಿನ್ನೆಲೆ ಸಕ್ಕರೆ ರಂಗವನ್ನು ಅನಿಯಮಿತ ಎಸ್ಎಪಿ ರದ್ದತಿಗಾಗಿ ತಂದಿರುವ ಕರ್ನಾಟಕ ಕಬ್ಬು (ಖರೀದಿ ಹಾಗೂ ಪೂರೈಕೆ ನಿಯಂತ್ರಣ) ಕಾಯ್ದೆ 2013 ರದ್ದುಗೊಳಿಸಬೇಕು. ಹಾಗೂ 2013ಕ್ಕಿಂತ ಮುಂಚೆ ಇದ್ದ ರಾಜ್ಯ ಸಲಹಾ ಬೆಲೆ (ಎಸ್ಎಪಿ) ಪುನರ್ ಸ್ಥಾಪಿಸಬೇಕು. ಕಬ್ಬು ಬೆಳಗಾರರ ಬೇಡಿಕೆಗಳ ಕುರಿತಂತೆ ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟಿಸಲು ನಿರ್ಣಾಯಿಸಲಾಯಿತು.

9.5 ಇಳುವರಿ ಆಧಾರದಲ್ಲಿ 5500 ಎಫ್ಆರ್‌ಪಿ ನಿಗದಿಪಡಿಸಬೇಕು, ಕೇಂದ್ರದ ರೈತ ವಿರೋಧಿ 2024ರ ಸಕ್ಕರೆ ನಿಯಂತ್ರಣ ಮಂಡಳಿ ಆದೇಶ ವಾಪಸ್ ಪಡೆಯಬೇಕು. ರಾಜ್ಯ ಸರ್ಕಾರ ಹರಿಯಾಣ ಪಂಜಾಬ್ ಮಾದರಿಯಲ್ಲಿ ಪ್ರತಿ ಟನ್‌ಗೆ 900 ರುಪಾಯಿಗಳ ಎಸ್ಎಪಿ ನಿಗದಿಪಡಿಸಬೇಕು. ರೆವಿನ್ಯೂ ಶೇರಿಂಗ್ ಫಾರ್ಮುಲ್‌ ರದ್ದುಪಡಿಸಬೇಕು ಎಂದು ಆಗ್ರಹಿಸಲಾಯ್ತು.

ತೂಕ ಪರೀಕ್ಷಿಸಲು ಕಬ್ಬು ಬೆಳೆಗಾರರ ಮುಖಂಡರ ಒಳಗೊಂಡ ಸಮಿತಿ ರಚಿಸಬೇಕು. ಮತ್ತು ಮಾಹಿತಿ ನೀಡದೆ ಭೇಟಿ ನೀಡಿ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು. ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶದಲ್ಲಿ ಶೇ.50ರಷ್ಟು ಪಾಲು ಕಬ್ಬು ಬೆಳೆಗಾರರಿಗೆ ನೀಡಬೇಕು. ಸಕ್ಕರೆ ಇಳುವರಿ ಘೋಷಣೆಯಲ್ಲಿ ಕಾರ್ಖಾನೆ ಅವರು ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆ ತೋರಿಸುತ್ತಿದ್ದಾರೆ ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಲಾಯಿತು.

ಸಹಕಾರಿ ಮತ್ತು ಸಾರ್ವಜನಿಕ ಕಾರ್ಖಾನೆಗಳ ಪುನಶ್ಚೇತನ ಕೇಂದ್ರ ಸಕ್ಕರೆ ಅಭಿವೃದ್ಧಿ ಮಂಡಳಿಯಿಂದ ಬಡ್ಡಿ ರಹಿತ ಸಾಲ, 30-40 ವರ್ಷಗಳಿಗೆ ಗುತ್ತಿಗೆ ನೀಡುವುದಾಗಲಿ ಅಥವಾ ಮಾರಾಟ ಮಾಡುವ ಪ್ರವೃತ್ತಿ ಕೈಬಿಡಬೇಕು. ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಹಣಪಾವತಿ, ಇಲ್ಲವಾದರೆ ಶೇ. 15ರಷ್ಟು ಬಡ್ಡಿ ಸೇರಿಸಿ ಹಣ ಕೊಡಬೇಕು. ಇಲ್ಲವಾದರೆ ಕಾರ್ಖಾನೆ ಆಡಳಿತ ಮಂಡಳಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರ ಆಸ್ತಿ ಮುಟ್ಟಗೋಲು ಹಾಕಿಕೊಳ್ಳಬೇಕು ಎಂದು ಕಬ್ಬು ಬೆಳೆಗಾರರು ಆಗ್ರಹಿಸಿದರು.

ತಮಿಳುನಾಡಿನಲ್ಲಿ ಬೈಂಡಿಂಗ್ ವೇಸ್ಟೇಜ್ ಅನ್ನು ಹೆಚ್ಚಾಗಿ ಕಡಿತ ಮಾಡಿದ್ದರ ವಿರುದ್ಧ ತಮಿಳುನಾಡಿನ ಕಬ್ಬು ಬೆಳೆಗಾರರ ಸಂಘ ಹೋರಾಟ ನಡೆಸಿ 1966 3A ಸೆಕ್ಷನ್ ಅಡಿಯಲ್ಲಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ ₹150 ಕೋಟಿ ರೈತರಿಗೆ ಕೊಡಿಸಿರುವ ಸಂಘಕ್ಕೆ ಕರ್ನಾಟಕ ಕಬ್ಬು ಬೆಳೆಗಾರರ ಸಂಘದಿಂದ ಅಭಿನಂದನೆ ಸಲ್ಲಿಸಲಾಯಿತು.

ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ಅಧಿನಿಯಮ 2013 ಹಾಗೂ ತಿದ್ದುಪಡಿ ಅಧಿನಿಯಮ 2014ರ ಪ್ರಕಾರ 2022-23ನೇ ಸಾಲಿನಲ್ಲಿ ಎಥೆನಾಲ್ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳು 150 ರುಪಾಯಿ ಹಾಗೂ ಉತ್ಪಾದಿಸದೆ ಇರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ₹100 ಹೆಚ್ಚುವರಿಯಾಗಿ ನೀಡಬೇಕೆಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಅನ್ವಯ ತಕ್ಷಣ ರೈತರಿಗೆ ಹಣ ಪಾವತಿ ಮಾಡಿಸಬೇಕು. ಅದರಂತೆ ಪ್ರತಿವರ್ಷಗಳ ಬಾಕಿ ಹಣ ನೀಡಬೇಕು. ಎಂದು ಸಮ್ಮೇಳನದಲ್ಲಿ ಈ ಎಲ್ಲಾ ನಿರ್ಣಯಗಳನ್ನು ಅಂಗೀಕಾರ ಮಾಡಿ ಅವುಗಳ ಜಾರಿಗಾಗಿ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ನೂತನ ಪದಾಧಿಕಾರಿಗಳ ಆಯ್ಕೆ:

ಜಿ.ನಾಗರಾಜ್ (ರಾಜ್ಯಾಧ್ಯಕ್ಷ), ಎನ್.ಎಲ್.ಭರತ್ ರಾಜ್ (ರಾಜ್ಯ ಪ್ರಧಾನ ಕಾರ್ಯದರ್ಶಿ), ಚಂದ್ರ ಗೌಡ ಕಲ್ಲನಗೌಡ ಪಾಟೀಲ್ ಬೆಳಗಾವಿ, ಶರಣಬಸಪ್ಪ ಮಮಶೆಟ್ಟಿ ಕಲಬುರಗಿ, ನ್ಯಾಮಗೌಡ ಬಾಗಲಕೋಟೆ, ಕುಳ್ಳೇಗೌಡ ಮಂಡ್ಯ (ಉಪಾಧ್ಯಕ್ಷರು), ಬೀಮರಾಯ ಪೂಜಾರಿ. ವಿಜಯಪುರ, ಶ್ರೀಮಂತ ಬೀರೆದಾರ ಕಲಬುರಗಿ, ಚಂದ್ರಶೇಖರ ಸಂಗಪ್ಪ ಕೊಪ್ಪಳ, ಸಿದ್ದರಾಮ ದಣ್ಣೂರ ಕಲಬುರಗಿ (ಸಹಕಾರ್ಯದರ್ಶಿಗಳು), ಕೊಟ್ಟಿಗೆ ಮಲ್ಲಿಕಾರ್ಜುನ ವಿಜಯನಗರ, ಶುಕೂರ್ ಮಂಡ್ಯ, ಶ್ರೀನಿವಾಸ್ ಮಂಡ್ಯ, ಅವಿನಾಶ ಸಾರಥಿ ಬಾಗಲಕೋಟೆ, ಮಲ್ಲಿಕಾರ್ಜುನ ಸಾವುಕಾರ್ ವಿಜಯನಗರ, ಅಣ್ಣರಾಯ ಈಳಿಗೇರ ವಿಜಯಪುರ, ಗೋಪಾಲ ಶಿವಗದ್ದಿಗೆ ವಿಜಯಪುರ. ನಿಂಗಣ್ಣ ವಡಿಗೇರಿ ಯಾದಗಿರಿ, ಚನ್ನಪ್ಪ ಆನೆಗುಂದಿ ಯಾದಗಿರಿ, ಶಿವಮೋಗಪ್ಪ ಕಲಬುರಗಿ, ಪ್ರಕಾಶ ಜಾನಿ ಕಲಬುರಗಿ,

ರಾಮಚಂದ್ರಪ್ಪ ಬೀದರ್ ಇವರು ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.