ಶಿರಸಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಗೈರು: ಶಾಸಕ ಭೀಮಣ್ಣ ನಾಯ್ಕ ಕೆಂಡಾಮಂಡಲ

KannadaprabhaNewsNetwork |  
Published : Apr 30, 2025, 12:38 AM IST
ಪೊಟೋ೨೯ಎಸ್.ಆರ್.ಎಸ್೨ (ತ್ರೈಮಾಸಿಕ ಕೆಡಿಪಿ ಸಭೆ ರದ್ಧುಗೊಳಿಸಿ, ಹೊರ ಬಂದ ಶಾಸಕ ಭೀಮಣ್ಣ ನಾಯ್ಕ) | Kannada Prabha

ಸಾರಾಂಶ

ಶಿರಸಿ ನಗರದ ಆಡಳಿತ ಸಭಾಂಗಣದಲ್ಲಿ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಗೈರು ಹಾಜರಾದ ಕಾರಣ ಕೆಂಡಾಮಂಡಲರಾದ ಶಾಸಕ ಭೀಮಣ್ಣ ನಾಯ್ಕ, ಸಭೆ ರದ್ದುಗೊಳಿಸಿ ಹೊರನಡೆದು, ಮುಂದಿನ ವಾರ ಸಭೆ ಏರ್ಪಡಿಸಲು ಅಧಿಕಾರಿಗಳಿಗೆ ಆದೇಶಿಸಿದರು.

ಶಿರಸಿ: ನಗರದ ಆಡಳಿತ ಸಭಾಂಗಣದಲ್ಲಿ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಗೈರು ಹಾಜರಾದ ಕಾರಣ ಕೆಂಡಾಮಂಡಲರಾದ ಶಾಸಕ ಭೀಮಣ್ಣ ನಾಯ್ಕ, ಸಭೆ ರದ್ದುಗೊಳಿಸಿ ಹೊರನಡೆದು, ಮುಂದಿನ ವಾರ ಸಭೆ ಏರ್ಪಡಿಸಲು ಅಧಿಕಾರಿಗಳಿಗೆ ಆದೇಶಿಸಿದರು.

ಸಭೆಗೆ ಆಗಮಿಸುತ್ತಿದ್ದಂತೆಯೇ ಹಲವು ಪ್ರಮುಖ ಅಧಿಕಾರಿಗಳು ಸಭೆಗೆ ಆಗಮಿಸದಿರುವುದನ್ನು ಅರಿತು ಶಾಸಕ ಭೀಮಣ್ಣ ನಾಯ್ಕ ಗರಂ ಆದರು. ತಾಪಂ ಕಾರ್ಯ ನಿರ್ವಹಣಾಧಿಕಾರಿ ಸತೀಶ ಹೆಗಡೆ ಸ್ವಾಗತ ಕೋರುತ್ತಿದ್ದಂತೆಯೇ ಮೈಕ್ ಹಿಡಿದ ಭೀಮಣ್ಣ, ಯಾವ ಯಾವ ಇಲಾಖೆಗೆ ಸಭೆಗೆ ಆಗಮಿಸಿಲ್ಲ ಎಂಬುದರ ಮಾಹಿತಿ ಕೇಳಿದರು. ಕೆಡಿಸಿಸಿ ಬ್ಯಾಂಕ್, ನಗರಸಭೆ, ಕೈಗಾರಿಕಾ ಅನುಷ್ಠಾನಾಧಿಕಾರಿ, ಯುವಜನ ಸೇವಾ ಇಲಾಖೆ, ಆರ್‌ಟಿಒ, ಪಿಎಂಜಿಎಸ್‌ವೈ, ಅಬಕಾರಿ ಇಲಾಖೆ ಸೇರಿದಂತೆ ಪ್ರಮುಖ ೯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿರಲಿಲ್ಲ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರೂ ಪ್ರಗತಿಯ ವರದಿ ಒಪ್ಪಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡ ಭೀಮಣ್ಣ ನಾಯ್ಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ೧೫ ದಿನಗಳ ಹಿಂದೆಯೇ ಈ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲು ಉದ್ದೇಶಿಸಿ ಎಲ್ಲ ಇಲಾಖೆಗಳಿಗೂ ಸುತ್ತೋಲೆ ಕಳುಹಿಸಲಾಗಿತ್ತು. ಅಧಿಕಾರಿಗಳು ಈ ರೀತಿಯ ನಿರ್ಲಕ್ಷ್ಯ ವಹಿಸುವುದನ್ನು ಸಹಿಸುವುದಿಲ್ಲ. ಮಳೆಗಾಲಕ್ಕೆ ಇಲನ್ನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಈ ಹಂತದಲ್ಲಿ ಆಗಬೇಕಾದ ಕಾಮಗಾರಿಗಳೇನು? ಯಾವ ಕೆಲಸ ಎಷ್ಟಾಗಿದೆ? ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಬೇಕಿತ್ತು. ಆದರೆ, ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲ ಎಂದು ಆಕ್ಷೇಪಿಸಿದರು.

ಬಳಿಕ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಭೀಮಣ್ಣ ನಾಯ್ಕ, ತ್ರೈಮಾಸಿಕ ಕೆಡಿಪಿ ಸಭೆಯ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ, ಈ ಸಭೆಯನ್ನು ನಡೆಸದೇ ಮುಂದೂಡುತ್ತಿದ್ದು, ಮುಂದಿನ ದಿನಾಂಕ ನಿಗದಿಪಡಿಸಿ ಎಲ್ಲ ಸಿದ್ಧತೆಗಳೊಂದಿಗೆ ಆಗಮಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸಭೆಯಿಂದ ಹೊರ ನಡೆದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಭೀಮಣ್ಣ ನಾಯ್ಕ, ಶಾಲೆಗಳು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಮಳೆಗಾಲದ ಸಿದ್ಧತೆಗೆ ಚರ್ಚಿಸಬೇಕಿದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿ ತೋರಿದ್ದು, ಕಾಟಾಚಾರಕ್ಕೆ ಕೆಡಿಪಿ ಸಭೆ ನಡೆಸಲು ನಾನು ಸಿದ್ಧನಿಲ್ಲ. ಈ ಕುರಿತಂತೆ ಜಿಲ್ಲಾಧಿಕಾರಿಗೂ ಮಾಹಿತಿ ನೀಡಿದ್ದೇನೆ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ತೋಟಗಾರಿಕೆ ಇಲಾಕೆ ಉಪನಿರ್ದೇಶಕ ಡಾ. ಬಿ.ಪಿ. ಸತೀಶ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ