ಹುಬ್ಬಳ್ಳಿ:
ಆಗಿರುವುದೇನು?
2022ರಲ್ಲಿ 19 ವಿದ್ಯಾರ್ಥಿಗಳಿಗೆ 4 ವರ್ಷದ ಸಂಗೀತ ಶಿಕ್ಷಣಕ್ಕಾಗಿ ಪ್ರವೇಶಾತಿ ನೀಡಲಾಗಿತ್ತು. ಇದರಲ್ಲಿ 2 ವರ್ಷ ಪೂರ್ಣಗೊಂಡಿದೆ. ಆದರೆ ಈಗ ಗುರುಕುಲವನ್ನು 2 ತಿಂಗಳ ಹಿಂದೆ ಮೈಸೂರು ಸಂಗೀತ ವಿವಿಗೆ ಹಸ್ತಾಂತರಿಸಿ, ಗುರುಕುಲವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ 19 ವಿದ್ಯಾರ್ಥಿಗಳಿಗೆ ಗುರುಗಳೇ ಇಲ್ಲದಂತಾಗಿದೆ. ತರಗತಿಗಳು ನಡೆಯುತ್ತಿಲ್ಲ. ಈ ನಡುವೆ ಮೈಸೂರು ಸಂಗೀತ ವಿವಿಯೂ ಇಲ್ಲಿ ತನ್ನ ತರಗತಿ ನಡೆಸಲು ಸೋಮವಾರ ಪ್ರವೇಶ ಪೂರ್ವ ಪರೀಕ್ಷೆ ನಡೆಸಿದೆ. ಈ ಪರೀಕ್ಷೆ ಬಂದ್ ಮಾಡಬೇಕು. ಗುರುಕುಲ ಪುನರಾರಂಭಿಸಿ ವಿದ್ಯಾರ್ಥಿಗಳಿಗೆ ಸೌಲಭ್ಯದ ಜತೆಗೆ ಶಿಕ್ಷಣ ನೀಡಬೇಕು. ಗುರುಕುಲವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೊಳಪಡಿಸಬೇಕು ಎಂಬ ಬೇಡಿಕೆ ಪ್ರತಿಭಟನಾಕಾರರದ್ದು.ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ಮಾತನಾಡಿ, ಗುರುಕುಲ ಕಳೆದ 12 ವರ್ಷದಿಂದ ನಡೆಯುತ್ತಿದ್ದು, ಮೈಸೂರಿನ ಗಂಗೂಬಾಯಿ ಹಾನಗಲ್ಲ ವಿವಿಗೆ ಹಸ್ತಾಂತರಿಸಲಾಗಿದೆ. ಆದರೆ, ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಜಿಲ್ಲಾಡಳಿತ ಯಾವ ನಿರ್ಧಾರ ತೆಗೆದುಕೊಂಡಿಲ್ಲ. ಸೋಮವಾರ ಗುರುಕುಲದಲ್ಲಿ ನಡೆಯುತ್ತಿರುವ ವಿವಿಯ ಭರತನಾಟ್ಯದ ಪ್ರಾಯೋಗಿಕ ಪರೀಕ್ಷೆ ತಡೆಯಲು ನಿರ್ಧರಿಸಲಾಗಿತ್ತು. ಆದರೆ, ಪಾಲಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಸ್ಪಂದಿಸದಿದ್ದಲ್ಲಿ ಇಲ್ಲಿ ನಡೆಯುತ್ತಿರುವ ಪರೀಕ್ಷೆಗೆ ತಡೆಯೊಡ್ಡುವುದಾಗಿ ಎಚ್ಚರಿಕೆ ನೀಡಿದರು.
ಗುರುಕುಲದ ವಿದ್ಯಾರ್ಥಿಗಳು ಗಂಟೆಗೂ ಹೆಚ್ಚುಕಾಲ ಸಂಗೀತ ಪ್ರಸ್ತುತಪಡಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕಲಗೌಡ ಪಾಟೀಲ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೆ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಎಬಿವಿಪಿ ಕಾರ್ಯಕರ್ತರು ಗುರುಕುಲದ ಒಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಎಬಿವಿಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ತಹಸೀಲ್ದಾರ್ ಕಲಗೌಡ ಪಾಟೀಲ ಜಿಲ್ಲಾಧಿಕಾರಿಗೆ ಕರೆ ಮಾಡಿ ಪ್ರತಿಭಟನಾ ನಿರತರೊಂದಿಗೆ ಮಾತನಾಡಿಸಿದರು.
ಈ ವೇಳೆ ಗುರುಕುಲದ ವಿದ್ಯಾರ್ಥಿಗಳಾದ ಪ್ರತೀಕ ಓಂಕಾರ, ಶಿವಸ್ವಾಮಿ, ಮಹೇಶ ಹುಳ್ಳೇಕಾರ, ಯಶ್ರಾಜ ಶೆವಾಲೆ, ಸಚಿನ್, ಎಬಿವಿಪಿ ಉತ್ತರ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಸಚಿವ ಕುಳಗೇರಿ, ನಗರ ಕಾರ್ಯದರ್ಶಿ ಸಿದ್ಧಾರ್ಥ ಕೋರಿ ಸೇರಿದಂತೆ ಹಲವರಿದ್ದರು. ನಾವಿಲ್ಲಿ ಗುರುಗಳ ಹತ್ರ ಸಂಗೀತ ಕಲಿಯಾಕ ಬಂದೀವ್ರಿ. ನಮ್ಗ ಡಿಗ್ರಿ, ಸರ್ಟಿಫಿಕೇಟ್ ಬೇಕಾಗಿದ್ರ ಎಲ್ಲೋ ಹೋಗ್ತಿದ್ವಿ. ಈ ಗುರುಕುಲದೊಳ್ಗ ಸಿಗುವ ಶಿಕ್ಷಣ ಎಲ್ಲಿ ಸಿಗಂಗಿಲ್ಲರ್ರಿ. ನಮ್ಗ ಹಿಂದೆ ಕಲಿಸಿದ ಗುರುಗಳು ಮತ್ ಬರ್ಬೇಕು. ನಾವು ಗುರುಕುಲ ಬಿಟ್ಟು ಎಲ್ಲೂ ಹೋಗಂಗಿಲ್ಲ ಎಂದು ಗುರುಕುಲದ ವಿದ್ಯಾರ್ಥಿ ಓಂಕಾರ ಪತ್ತಾರ ಹೇಳಿದರು.