ದೇವರಹಿಪ್ಪರಗಿ: ಕೆಎಸ್ಆರ್ಟಿ ಬಸ್ಸೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ನಲ್ಲಿದ್ದ ಸುಮಾರು 20 ಜನರು ಗಂಭೀರ ಗಾಯಗೊಂಡಿರುವ ಘಟನೆ
ವಿಜಯಪುರದಿಂದ ಸಿಂದಗಿಗೆ ಹೋಗುವ ಮಾರ್ಗ ಮಧ್ಯ ತುಕಾಲಿ ಡಾಬಾ ಹತ್ತಿರ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ. ಮೆಕ್ಕೆಜೋಳ ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ವಿಜಯಪುರ ವಿಭಾಗಕ್ಕೆ ಸೇರಿದ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಬಸ್ ಹಾಗೂ ಲಾರಿ ಎರಡು ವಿಜಯಪುರದಿಂದ ದೇವರಹಿಪ್ಪರಗಿ ಮಾರ್ಗವಾಗಿ ಸಿಂದಗಿ ಕಡೆಗೆ ತೆರಳುತ್ತಿದ್ದವು. ಆದರೆ, ಪಟ್ಟಣದ ಬಳಿ ಲಾರಿಯನ್ನು ಓವರ್ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಬಸ್ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆ ನಂತರ ಅದೇ ರಸ್ತೆಯಲ್ಲಿ ಸಿಂದಗಿ ಕಡೆಗೆ ತೆರಳುತ್ತಿದ್ದ ಶಾಸಕ ಅಶೋಕ ಮನಗೂಳಿ ಸ್ಥಳೀಯರ ಸಹಾಯದಿಂದ ಗಾಯಾಳುಗಳ ರಕ್ಷಣೆ ಮಾಡಿದ್ದು, ಬಳಿಕ ವಾಹನಗಳ ತಡೆದು ಗಾಯಗಾಳುಗಳನ್ನು ವಿಜಯಪುರ, ಸಿಂದಗಿ ಹಾಗೂ ದೇವರಹಿಪ್ಪರಗಿ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಿ ಕೊಟ್ಟಿದ್ದಾರೆ.
ಬಳಿಕ, ಸ್ಥಳಕ್ಕೆ ದೇವರಹಿಪ್ಪರಗಿ ಪಿಎಸ್ಐ ಸಚಿನ್ ಆಲಮೇಲಕರ್ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ದೇವರಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.