ಕ್ಷೀರ ಸಂಜೀವಿನಿ ಹಂತ 5 ರ ಯೋಜನೆಯಡಿ ಹೈನುಗಾರರಿಗೆ ಮಾಹಿತಿ ಕಾರ್ಯಾಗಾರ
ಹೈನುಗಾರರುಗಳು ಗುಣಮಟ್ಟದ ಹಾಲು ನೀಡುವ ಮೂಲಕ ಹಾಸನ ಹಾಲು ಒಕ್ಕೂಟದೊಂದಿಗೆ ಹಾಲು ಉತ್ಪಾದಕರ ಏಳಿಗೆಗೂ ಕಾರಣಕರ್ತರಾಗಬಹುದು ಎಂದು ಹಾಸನ ಹಾಲು ಒಕ್ಕೂಟದ ಟೀಮ್ ಲೀಡರ್ ಸುರೇಶ್ ಕುಮಾರ್ ಹೇಳಿದ್ದಾರೆ.
ತಣಿಗೆಬೈಲು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬುಧವಾರ ನಡೆದ ಕ್ಷೀರ ಸಂಜೀವಿನಿ ಹಂತ -5 ರ ಯೋಜನೆಯಡಿ ಹೈನುಗಾರರಿಗೆ ಹಮ್ಮಿಕೊಂಡಿದ್ದ ಸಾಕು ಪ್ರಾಣಿಗಳ ಸಾಂಕ್ರಾಮಿಕ ರೋಗಗಳ ತಿಳುವಳಿಕೆ , ಸಾಕು ಪ್ರಾಣಿಗಳೊಂದಿಗೆ ಪಶು ಸಾಕಾಣೆದಾರರಿಗೆ ಇರಬೇಕಾದ ಬಾಂಧವ್ಯ ಮತ್ತು ಆರೋಗ್ಯ ಸಲಹೆ, ಲಿಂಗ ಸಮಾನತೆ, ಕಾನೂನಿನ ಅರಿವಿನ ಬಗ್ಗೆ ಸಂಬಂಧಿಸಿದ ತಜ್ಞರಿಂದ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.1955 ರಲ್ಲಿ ಪ್ರಾರಂಭವಾದ ಕುಡಿಗೆ ಡೈರಿ ಇಂದು ಪ್ರತಿದಿನ 16650 ಲೀಟರ್ಗಳಷ್ಟು ಹಾಲನ್ನು ಶೇಖರಣೆ ಮಾಡುತ್ತಿದ್ದು, ತಣಿಗೆಬೈಲಿನ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ಚಿಕ್ಕಮಗಳೂರು ಜಿಲ್ಲೆಯ ಕಟ್ಟೆ ಕಡೆಯ ಭಾಗದ ಗ್ರಾಮೀಣ ಸಂಘ. ಇಂದು ಕೆ.ಎಂ.ಎಫ್ ನಿಂದ ಭಾರತ ದೇಶವಷ್ಟೇ ಅಲ್ಲದೇ ಹೊರ ದೇಶಗಳಾದ ಸಿಂಗಾಪುರ ಮುಂತಾದ ದೇಶಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.
ತಣಿಗೆ ಬೈಲು ಹಾಲು ಉತ್ಪಾದಕರ ಸಂಘದಿಂದ ಹೆಚ್ಚಿನ ಪ್ರಮಾಣದ ಹಾಲು ಒಕ್ಕೂಟಕ್ಕೆ ಕಳುಹಿಸಬೇಕು ಕೆಎಂಎಫ್ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಲಕ ಹಾಲನ್ನು ಸಂಗ್ರಹಿಸಿ ಸರ್ಕಾರದ ನಿಯಮದಂತೆ ಉತ್ತಮ ದರ ಮತ್ತು ವಿವಿಧ ಸೌಲಭ್ಯ ನೀಡಲಾಗುತ್ತಿದೆ. ಇವುಗಳ ಸದುಪಯೋಗ ಪಡೆಯುವ ಮೂಲಕ ತಮ್ಮ ಆದಾಯ ಹೆಚ್ಚಿಸಿಕೊಂಡು ಸಹಕಾರ ಸಂಘ ಮತ್ತು ಒಕ್ಕೂಟದ ಅಭಿವೃದ್ಧಿಗೂ ಸಹಕಾರ ನೀಡಬೇಕು ಎಂದು ಹೇಳಿದರು.
ಮಹಿಳಾ ಹಾಲು ಉತ್ಪಾದಕರ ಸಂಘ ಅಧ್ಯಕ್ಷೆ ಸುಶೀಲಮ್ಮ ಹನುಮಂತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಸುತ್ತಮುತ್ತಲ ಗ್ರಾಮಗಳಲ್ಲಿ ಹೈನುಗಾರಿಕೆ ನಡೆಯುತ್ತಿದ್ದರೂ, ಹಾಸನ ಹಾಲು ಒಕ್ಕೂಟದ ಡೈರಿ ಇಲ್ಲದೆ ತೊಂದರೆ ಯಾಗುತ್ತಿದ್ದುದ್ದನ್ನು ಮನಗಂಡು ಎನ್.ಎಸ್. ಹನುಮಂತಪ್ಪ, ಕೆ. ಮಂಜು, ಕೆ. ರಾಮದಾಸ್, ಎಚ್. ಚಂದ್ರಶೇಖರ್, ಹೆಚ್.ರಾಜಪ್ಪ, ಎಸ್. ಪಾಪಣ್ಣ, ಮುಂತಾದವರು ಸಹಕಾರಿ ಧುರೀಣ ಎಸ್.ಡಿ ಸೋನಾಲ್ ಗೌಡರ ಮನವೊಲಿಸಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಿಸಿದರು. ಹಾಲು ಉತ್ಪಾದಕರು ಈ ಸಂಘದ ಉಪಯೋಗ ಪಡೆಯಬೇಕು ಎಂದು ಹೇಳಿದರು.
-