ಕನ್ನಡಪ್ರಭ ವಾರ್ತೆ ಹಾಸನ
ಜೀವನದಲ್ಲಿ ಏನಾಗಬೇಕೆಂಬ ಗುರಿಯೊಂದಿಗೆ ಯುವಕರು ಶಿಕ್ಷಣ ಪಡೆದುಕೊಂಡರೆ ಮಾತ್ರ ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ರೋಟರಿ ವಲಯ 9ರ ಮಾಜಿ ಸಹಾಯಕ ಗೌವರ್ನರ್ ಹಾಗೂ ವೈದ್ಯೆ ಡಾ. ಸೌಮ್ಯ ಮಣಿ ಅವರು ಸಲಹೆ ನೀಡಿದರು.ನಗರದ ಎಂ.ಜಿ. ರಸ್ತೆಯ ಗಾಂಧೀ ಭವನದಲ್ಲಿ ನಡೆದ ಅಕ್ಷರ ಬುಕ್ ಹೌಸ್ ಹಾಗೂ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ವತಿಯಿಂದ ಆಯೋಜಿಸಿದ್ದ ಅಕ್ಷರ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಇಂದು ಬಹುತೇಕ ಯುವಕರು ಜೀವನದ ಗುರಿ ಬೇರೆ ಇಟ್ಟುಕೊಂಡು ಬೇರೆ ಶಿಕ್ಷಣ ಪಡೆಯುತ್ತಿರುವುದನ್ನು ವಿಷಾದಿಸಿದರು.ಸಮಾಜ ಸೇವಕ ಹಾಗೂ ಉದ್ಯಮಿ ವಿಜಯ್ ಕುಮಾರ್ ಮಾತನಾಡಿ, ಸಮಾಜ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಅದನ್ನು ಮರಳಿ ಸಮಾಜಕ್ಕೆ ನೀಡಬೇಕೆಂಬ ಆಲೋಚನೆ ಎಲ್ಲರಲ್ಲಿ ಇರೋದಿಲ್ಲ. ಆದರೆ ಅಕ್ಷರ ಬುಕ್ ಹೌಸ್ ಪುಸ್ತಕಗಳನ್ನು ನೀಡಿ ಭವಿಷ್ಯದ ಆಧಾರಸ್ತಂಭವಾಗುವ ಮಕ್ಕಳಿಗೆ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ. ಇಂತಹ ಕಾರ್ಯಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಿದರೆ ಪ್ರತಿಯೊಬ್ಬರ ಮನೆಯ ಮಕ್ಕಳು ಸಮಾಜಕ್ಕೆ ಮಾದರಿಯಾಗುತ್ತಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಅಕ್ಷರ ಬುಕ್ ಹೌಸ್ ಮಾಲೀಕ ಹಾಗೂ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಅಧ್ಯಕ್ಷ ಟೈಮ್ಸ್ ಗಂಗಾಧರ್ ಬಿ.ಕೆ. ಅವರು ತಮ್ಮ ಅನುಭವ ಹಂಚಿಕೊಂಡು, `ಜಿಲ್ಲೆಯಲ್ಲಿ ಪುಸ್ತಕದ ಅಂಗಡಿ ಆರಂಭಿಸಿ ಹತ್ತು ವರ್ಷ ಕಳೆದಿದೆ. ಇಂದಿಗೂ ನಮ್ಮ ಅಂಗಡಿಯನ್ನು ಬಹುತೇಕ ಜನರಿಗೆ ತಿಳಿದಿಲ್ಲ ಎಂಬುದು ಓದುವ ಅಭಿರುಚಿಯ ಮಟ್ಟವನ್ನು ತೋರಿಸುತ್ತದೆ. ಪ್ರತಿ ವರ್ಷ ಲಕ್ಷಾಂತರ ರು. ವೆಚ್ಚ ಮಾಡಿ ಅಗ್ರ ಅಂಕ ಪಡೆದ ಮಕ್ಕಳಿಗೆ ಪುಸ್ತಕಗಳನ್ನು ನೀಡಿ ಸನ್ಮಾನಿಸುತ್ತಿದ್ದೇವೆ. ನಮ್ಮ ಉದ್ದೇಶ. ಕನಿಷ್ಟ ಮಟ್ಟಿಗೆ ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸುವುದು ಎಂದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಮಾರು 400 ವಿದ್ಯಾರ್ಥಿಗಳಿಗೆ ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ನೀಡಿ ಸನ್ಮಾನಿಸಲಾಯಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಮತ್ತು ಅಧ್ಯಾಪಕರಿಗೂ ಗೌರವ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ರೋಟರಿ ವಲಯ 9ರ ಸಹಾಯಕ ಗೌವರ್ನರ್ ಮಂಜುನಾಥ್, ವಲಯ ಸೇನಾನಿ ಮಮತಾ ಪಟೇಲ್, ಕಾರ್ಯದರ್ಶಿ ರವಿಕುಮಾರ್ ಪಿ., ಖಜಾಂಚಿ ದಿಲೀಪ್ ಕುಮಾರ್ ಎಚ್.ಕೆ. ಹಾಗೂ ಅನೇಕ ಗಣ್ಯರು ಹಾಜರಿದ್ದರು.