ಕುಷ್ಟಗಿ: ಬಣಜಿಗ ಸಮಾಜದ ಮೂಲ ವೃತ್ತಿ ವ್ಯಾಪಾರವಾದರೂ ಇಂದು ವ್ಯಾಪಾರದ ಗಡಿ ಮೀರಿ ಶಿಕ್ಷಣ, ಆಡಳಿತ, ರಾಜಕೀಯ, ಉದ್ಯಮ, ಕೃಷಿ, ವೈದ್ಯಕೀಯ, ಕಾನೂನು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಸಾಧಕರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ಪ್ರತೀಕ, ಬಣಜಿಗ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದು, ಸಮಾಜದಲ್ಲಿರುವ ಹಿಂದುಳಿದವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ಸಂಘಟನೆಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಬಣಜಿಗ ಸಮಾಜ ಸ್ಥಾಪಿಸಿರುವ ಕೆಎಲ್ಇ ಶಿಕ್ಷಣ ಸಂಸ್ಥೆಗಳು ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅನೇಕರಿಗೆ ಉದ್ಯೋಗದ ಅವಕಾಶ ಕಲ್ಪಿಸಿರುವುದು ಸಮಾಜಕ್ಕೆ ಹೆಮ್ಮೆಯ ವಿಷಯ ಎಂದು ಹೇಳಿದರು.ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಬಣಜಿಗ ಸಮಾಜವು ಶಿಕ್ಷಣ, ವ್ಯಾಪಾರ, ಸಾಮಾಜಿಕ ಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳ ಮೂಲಕ ರಾಜ್ಯಕ್ಕೆ ಮಹತ್ತರ ಕೊಡುಗೆ ನೀಡಿದೆ.ಸಮಾಜದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ನಾನು ಬದ್ಧನಿದ್ದೇನೆ ಎಂದು ತಿಳಿಸಿದರು.
ಬಣಜಿಗ ಸಮಾಜವು ಮಠಗಳಿಗೆ ಮಹತ್ತರ ಕೊಡುಗೆ ನೀಡುವ ಮೂಲಕ ಜ್ಞಾನ ಪ್ರಸಾರಕ್ಕೆ ನೆರವಾಗಿದೆ. ಆರ್ಥಿಕವಾಗಿ ಹಿಂದುಳಿದವರನ್ನು ಮೇಲಕ್ಕೆತ್ತುವುದು ಸಮಾಜದ ಜವಾಬ್ದಾರಿ. ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಸಮಾಜ ಸಂಘಟಿತವಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಶಿಕ್ಷಣ ಸಂಸ್ಥೆ ಕಟ್ಟಿದ ಶಿಸ್ತಿನ ಸಮಾಜ ಬಣಜಿಗ ಸಮಾಜವಾಗಿದೆ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಪ್ರವೃತ್ತಿ ಬಿಡಬೇಕು ಎಂದು ಸಲಹೆ ನೀಡಿದರು.
ಮಾಜಿ ಸಂಸದ ರಮೇಶ್ ಕತ್ತಿ ಮಾತನಾಡಿ, ದಾನ, ಧರ್ಮ ಮತ್ತು ಶಿಕ್ಷಣಕ್ಕೆ ಹೆಸರಾದ ಬಣಜಿಗ ಸಮಾಜ ಮಠ, ಮಂದಿರ ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದರು.
ಶಿಕ್ಷಕಿ ಲೀಲಾವತಿ ಶೆಟ್ಟರ್ ಉಪನ್ಯಾಸ ನೀಡಿ, ಬಣಜಿಗ ಸಮಾಜ ರಾಜ್ಯಕ್ಕೆ ಏಳು ಮುಖ್ಯಮಂತ್ರಿಗಳನ್ನು ನೀಡಿದ ಹೆಮ್ಮೆಯ ಸಮಾಜವಾಗಿದೆ. ಶಿಕ್ಷಣ, ಆಡಳಿತ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡಿದೆ. ಬಸವಣ್ಣನ ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯ ಮೌಲ್ಯಗಳು ಬಣಜಿಗ ಸಮಾಜದ ಬದುಕಿನಲ್ಲಿ ಬೆರೆತು ಹೋಗಿದ್ದು, ಇದೇ ಮೌಲ್ಯಗಳು ಸಮಾಜ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಣಜಿಗ ಸಮಾಜದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ, ಜಿಲ್ಲಾಧ್ಯಕ್ಷ ವೀರೇಶ ಬಂಗಾರಶೆಟ್ಟರ್, ರಾಜ್ಯ ಸಮಿತಿ ನಿರ್ದೇಶಕ ಬಸವರಾಜ ಪಡಿ, ಮಾಜಿ ಜಿಪಂ ಸದಸ್ಯ ಕೆ ಮಹೇಶ್, ಸೋಮಶೇಖರ್ ವೈಜಾಪುರ,ಈರಣ್ಣ ಕಲಕಬಂಡಿ, ವೀರೇಶ ಬೊಳ್ಳೊಳ್ಳಿ, ಜಯದೇವಿ ಉಪ್ಪಿನ್, ಅಕ್ಕಮಹಾದೇವಿ ಪಟ್ಟಣಶೆಟ್ಟಿ, ವಿಶ್ವನಾಥ ಮಳಗಿ, ರವೀಂದ್ರನಾಥ ಪಾಟೀಲ, ಬಸಟ್ಟೆಪ್ಪ ಕುಂಬಳಾವತಿ, ಉಮಾಪತಿ ಅಕ್ಕಿ, ಸಿದ್ದಲಿಂಗಪ್ಪ ಕಲಕಬಂಡಿ, ಫಕೀರಪ್ಪ ಹೊಸವಕ್ಕಲ್, ಬಸವರಾಜ ಕುದುರಿಮೋತಿ, ವೀರಣ್ಣ ಗಜೇಂದ್ರಗಡ, ಸಂಗಪ್ಪ ಕಡಿವಾಲ್, ಈರಣ್ಣ ಸೊಬರದ, ಶಿವಪ್ಪ ಕುಡತೀನಿ, ಸಿದ್ದಮಲ್ಲಪ್ಪ ಜಿಗಜಿನ್ನಿ, ವಿಶ್ವನಾಥ ಕನ್ನೂರು, ಪ್ರಶಾಂತ್ ಗಡಾದ, ಅಶೋಕ್ ಬೊಳ್ಳೊಳ್ಳಿ, ಸಂಗಪ್ಪ ಚೆಟ್ಟೇರ್ ಬಸಟ್ಟೆಪ್ಪ ಶಿಳ್ಳಿನ್ ಸೇರಿದಂತೆ ಸಮಾಜದ ಮುಖಂಡರು, ಪದಾಧಿಕಾರಿಗಳು, ವಿವಿಧ ಕ್ಷೇತ್ರಗಳ ಸಾಧಕರು, ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.