ಕನ್ನಡಪ್ರಭ ವಾರ್ತೆ ಬಂಟ್ವಾಳ
ಡ್ಯಾಂನ ಹತ್ತಿರವಿರುವ ನೀರು ಪೂರೈಕಾ ಕಚೇರಿಗೆ ಸಂತ್ರಸ್ತ ಆಕ್ರೋಶಿತ ರೈತರು ಬೀಗ ಜಡಿಯಲು ಮುಂದಾದಾಗ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ, ತಳ್ಳಾಟದ ಹೈಡ್ರಾಮ ನಡೆಯಿತು.
ಡ್ಯಾಂನ ನೀರು ಸರಬರಾಜು ಸ್ಥಾವರಕ್ಕೆ ಬೀಗ ಜಡಿಯಲು ಮುಂದಾಗುತ್ತಿದ್ದಂತೆಯೇ ಪೊಲೀಸರು ಅರ್ಧದಲ್ಲೇ ಪ್ರತಿಭಟನಕಾರರನ್ನು ತಡೆದ ಪರಿಣಾಮ ತಳ್ಳಾಟ ಉಂಟಾಗಿ ಡ್ಯಾಂನವರೇ ಗೇಟಿಗೆ ಬೀಗ ಹಾಕಿ ರೈತರು ಒಳಪ್ರವೇಶಿಸದಂತೆ ತಡೆದರು. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಸ್ಥಳಕ್ಕೆ ಬಂದು ಸಂತ್ರಸ್ತರ ಬೇಡಿಕೆಯನ್ನು ಪರಿಹರಿಸದೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದ ರೈತರು ಸ್ಥಳದಲ್ಲೇ ದೊಡ್ಡ ಪಾತ್ರೆಗಳನ್ನು ಇಟ್ಟು, ಬೆಂಕಿ ಹಾಕಿ ಅಡುಗೆ ತಯಾರಿಸಲು ಆರಂಭಿಸಿದರು.ಸ್ಥಳಕ್ಕೆ ಮನಪಾ ಎಜಿನಿಯರ್ ನರೇಶ್ ಶಣೈ, ಬಂಟ್ವಾಳ ತಹಸೀಲ್ದಾರ್ ಎಸ್ ಬಿ. ಕೂಡಲಗಿ, ಉಪತಹಸೀಲ್ದಾರ್ ದಿವಾಕರ ಮುಗುಳಿ, ಮನಪಾ ಸಹಾಯಕ ಎಜಿನಿಯರ್ ಅಶ್ವಿನ್ ಮತ್ತಿತರರು ಭೇಟಿ ನೀಡಿ ರೈತರ ಮನವೊಲಿಸುವ ಪ್ರಯತ್ನ ನಡೆಸಿದರೂ ಜಗ್ಗದೆ ಪ್ರತಿಭಟನೆ ಮುಂದುವರಿಸಿದರು.
ರೈತ ಸಂಘದ ಪ್ರಮುಖರಾದ ಮುರುವ ಮಹಾಬಲ ಭಟ್, ಸುದೇಶ್ ಮಯ್ಯ, ಭಾಸ್ಕರ, ದಿಲೀಪ್ ರೈ, ಮೊಯ್ದಿನಬ್ಬ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿಷುಕುಮಾರ್, ಕಾರ್ಯದರ್ಶಿ ಜನಾರ್ದನ ಬಂಗೇರ, ಮೊದಲಾದವರು ನೇತೃತ್ವದ ವಹಿಸಿದ್ದರು.
ಸ್ಥಳಕ್ಕೆ ಮನಪಾ ಆಯುಕ್ತ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಮಂಗಳೂರು ಮನಪಾ ಆಯುಕ್ತ ಆನಂದ ಸಿ.ಎಲ್. ಭೇಟಿ ನೀಡಿ ಸಂತ್ರಸ್ತ ರೈತರ ಅಹವಾಲು ಆಲಿಸಿದರು. ತುಂಬೆಯ ಡ್ಯಾಂ ಬಳಿ ಶಾಶ್ವತ ತಡೆಗೋಡೆ ನಿರ್ಮಾಣ, ತುಂಬೆಯ ನೀರು ಶುದ್ಧೀಕರಣ ಘಟಕದಿಂದ ಹೊರಹೊಮ್ಮವ ಕೊಳಚೆ ನೀರಿನ ಹೂಳು ತುಂಬಿಕೊಂಡು ತೋಡು ಮುಚ್ಚಿಹೋಗಿರುವುದು, ರೈತರಿಗೆ ಮಾಹಿತಿ ನೀಡದೆ ೭ ಮೀಟರ್ ನೀರು ನಿಲ್ಲಿಸಿರುವುದು, ಒರತೆ ಪ್ರದೇಶಕ್ಕೂ ಪರಿಹಾರ ನೀಡಬೇಕು ಹಾಗೂ ಬೇಸಿಗೆಯಲ್ಲಿ ರೈತರಿಗೆ ಮಾಹಿತಿ ನೀಡದೆ ಪಂಪ್ಸೆಟ್ನ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬಗ್ಗೆ ದೂರಿಕೊಂಡರು.ರೈತರ ಸಮಸ್ಯೆಗೆ ಸ್ಪಂದಿಸಿದ ಆಯುಕ್ತರು ತಡೆಗೋಡೆ ನಿರ್ಮಾಣಕ್ಕೆ ಹಣ ಮೀಸಲಿಟಿದ್ದು ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಈ ವಾರದಿಂದಲೇ ಕಾಮಗಾರಿ ಆರಂಭಗೊಳ್ಳಲಿದ್ದು ೬೩ ಮೀಟರ್ ಹಾಗೂ ೫೭ ಮೀಟರ್ ಉದ್ದದ ಎರಡು ತಡೆಗೋಡೆ ನಿರ್ಮಿಸಲಾಗುವುದು, ಬಳಿಕ ಮಣ್ಣು ತುಂಬಿ ಜಮೀನನ್ನು ಯಥಾಸ್ಥಿತಿಗೆ ತರಲಾಗುವುದು ಎಂದು ಭರವಸೆ ನೀಡಿದರು. ತೋಟಗಾರಿಕೆ ಇಲಾಖೆಯಿಂದ ವರದಿ ಪಡೆದು, ಮೇಯರ್ ಜೊತೆ ಚರ್ಚೆ ನಡೆಸಿ ಅದರನ್ವಯ ಸೂಕ್ತ ಪರಿಹಾರ ನೀಡಲಾಗುವುದು, ಈಗ ಡ್ಯಾಂನಲ್ಲಿ ೬ ಮೀಟರ್ ಮಾತ್ರ ನೀರು ನಿಲ್ಲಿಸಿದ್ದು ಮುಂದಿನ ಮಾರ್ಚ್ನಲ್ಲಿ ೭ ಮೀಟರ್ ನೀರು ನಿಲ್ಲಿಸುವ ಅವಶ್ಯಕತೆ ಬಂದಾಗ ಮುಳುಗಡೆ ಜಮೀನಿನ ಸರ್ವೆ ನಡೆಸಲಾಗುವುದು ಹಾಗೂ ಶಾಶ್ವತ ಪರಿಹಾರದ ಬಗ್ಗೆ ಚರ್ಚಿಸಲಾಗುವುದು, ಶುದ್ಧೀಕರಣ ಘಟಕದ ಬಳಿ ತೋಡಿನಿಂದ ಹೂಳು ತೆಗೆಯುವ ಕಾರ್ಯ ಮಾಡಲಾಗುವುದು, ಬೇಸಿಗೆಯಲ್ಲಿ ನೀರಿನ ಅಭಾವ ಇದ್ದಾಗ ವಿದ್ಯುತ್ ಕಡಿತಗೊಳಿಸದೆ ರೈತರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಂಟ್ವಾಳ ಗ್ರಾಮಾಂತರ ಸಿಐ ಶಿವಕುಮಾರ್ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.