ಮಂಗಳೂರು: ದ.ಕ. ಜಿಲ್ಲೆಯಲ್ಲಿ ಡಿಸಿ ಮನ್ನಾ ಜಮೀನು ಹಂಚಿಕೆಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ತಿಳಿಸಿದರು.ಸೋಮವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಡಿಸಿ ಮನ್ನಾ ಜಮೀನು ಹಂಚಿಕೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಲಭ್ಯವಿದ್ದ ಅಂದಾಜು 8,800 ಎಕರೆ ಭೂಮಿಯಲ್ಲಿ 7,400 ಎಕರೆಯಷ್ಟು ಜಿಲ್ಲೆಯಲ್ಲಿ ಹಂಚಿಕೆಯಾಗಿದೆ. ಉಳಿಕೆಯಾಗಿರುವ ಡಿಸಿ ಮನ್ನಾ ಹಾಗೂ ಇತರ ಸರ್ಕಾರಿ ಭೂಮಿಯನ್ನು ಹಂಚಿಕೆ ಮಾಡುವ ನಿಟ್ಟಿನಲ್ಲಿ ಉಳುಮೆ ಮಾಡಲು ಒಂದು ಅಥವಾ 2 ಎಕರೆ ಭೂಮಿ ನೀಡಲು ನಮ್ಮಲ್ಲಿ ಸಾಧ್ಯವಿಲ್ಲ. ಅಷ್ಟು ಪ್ರಮಾಣದಲ್ಲಿ ಕಂದಾಯ ಭೂಮಿ ಲಭ್ಯವಿಲ್ಲ ಎಂದರು.ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆಯಲ್ಲಿದ್ದು, ಕನಿಷ್ಟ ನಿವೇಶನವನ್ನಾದರೂ ಒದಗಿಸುವ ನಿಟ್ಟಿನಲ್ಲಿ ಕ್ರಮ ಆಗಬೇಕಾಗಿದೆ. ಕಂದಾಯ ಇಲಾಖೆಯಿಂದ ಪಂಚಾಯಿತಿಗೆ ಹಸ್ತಾಂತರ ಮಾಡಿದ ಭೂಮಿಯನ್ನು ಅಭಿವೃದ್ಧಿಪಡಿಸಲು ಅನುದಾನ ಬೇಕು. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಮಾರ್ಗಸೂಚಿ ಆಗಬೇಕಾಗಿದೆ. ಡಿಸಿ ಮನ್ನಾ ಭೂಮಿಯನ್ನು ಯಾವ ರೀತಿ ಹಂಚಿಕೆ ಮಾಡಬೇಕೆಂಬ ಬಗ್ಗೆಯೂ ಸರ್ಕಾರವನ್ನು ಕೋರಲಾಗಿದ್ದು, ಮಾಜಿ ಸೈನಿಕರಿಗೂ ಕಡ್ಡಾಯವಾಗಿ ಭೂಮಿ ನೀಡಬೇಕು. ಇದಕ್ಕೆಲ್ಲಾ ಸಂಬಂಧಿಸಿ ಹಂಚಿಕೆ ಕುರಿತಂತೆ ಮಾರ್ಗಸೂಚಿ ಬಂದು, ಅನುದಾನದ ನಿಗದಿಯಾದ ತಕ್ಷಣ ಹಂಚಿಕೆಗೆ ನಿಯಮಾನುಸಾರ ಮಾಡಲಾಗುವುದು ಎಂದರು.