ಕನ್ನಡಪ್ರಭ ವಾರ್ತೆ ನಾಗಮಂಗಲ
ಬೆಳ್ಳೂರು ಪಟ್ಟಣಕ್ಕೆ ಅಗತ್ಯ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಿ ಅಭಿವೃದ್ಧಿ ಪಡಿಸುವುದಾಗಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ತಾಲೂಕಿನ ಬೆಳ್ಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಭೇಟಿ ಮತ್ತು ಕುಂದುಕೊರತೆ ಆಲಿಸುವ ಸಭೆಯಲ್ಲಿ ಭಾಗವಹಿಸಿದ ನಂತರ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದರು.
ಚುನಾವಣೆ ವೇಳೆ ಜನಸಾಮಾನ್ಯರು ಬೆಳ್ಳೂರು ಪಟ್ಟಣದ ಅಭಿವೃದ್ಧಿಗೆ ಒಲವು ವ್ಯಕ್ತಪಡಿಸಿದ್ದರು. ಹೀಗಾಗಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲು ಮೂಲ ಸೌಕರ್ಯ ಕಲ್ಪಿಸಲಾಗುವುದು. ಪಟ್ಟಣ ಪಂಚಾಯ್ತಿಗೆ ನೂತನ ಕಟ್ಟಡದ ಜೊತೆಗೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದರು.ಮಾರ್ಕೋನಹಳ್ಳಿಯಿಂದ ಬೆಳ್ಳೂರು ಪಟ್ಟಣಕ್ಕೆ ನೀರು ಸರಬರಾಜು ಮಾಡುವುದು ಅಲ್ಪಸ್ವಲ್ಪ ಸಮಸ್ಯೆ ಇದ್ದು, ಇದನ್ನು ಶೀಘ್ರ ಬಗೆಹರಿಸಿ ಜನ ಸಾಮಾನ್ಯರಿಗೆ ನೀರು ಪೂರೈಸಲು ಅಗತ್ಯ ಕ್ರಮ ವಹಿಸುವುದಾಗಿ ಸಚಿವರು ತಿಳಿಸಿದರು.
ನಂತರ ದೇವಿಹಳ್ಳಿ, ಅರಣಿ, ಬೆಳ್ಳೂರು, ಗೊಂಡೇನಹಳ್ಳಿ ಹಾಗೂ ಬಿಂಡಿಗನವಿಲೆ ಗ್ರಾಮಗಳಲ್ಲಿ ಸಾರ್ವಜನಿಕರ ಭೇಟಿ ಮಾಡಿ ಹಾಗೂ ಕುಂದುಕೊರತೆ ಆಲಿಸಿದರು, ಸಭೆಯಲ್ಲಿ ಬಂದಂತಹ ಪತ್ರಗಳನ್ನು ಒಂದು ತಿಂಗಳೊಳಗೆ ಬಗೆ ಹರಿಸುವ ಬರವಸೆ ನೀಡಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ತಾಪಂ ಮಾಜಿ ಸದಸ್ಯ ಮೂಡ್ಲಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ದಿನೇಶ್, ಪಿಎಲ್ ಡಿ.ಬ್ಯಾಂಕ್ ರಾಜ್ಯ ನಿರ್ದೇಶಕರಾದ ತಿಮ್ಮರಾಯಿಗೌಡ, ಮುಖಂಡರಾದ ಯಾಸೀನ್, ಮಹೇಶ್, ಪಾಪಣ್ಣ, ಎಸಿ ನಂದೀಶ್, ತಹಸೀಲ್ದಾರ್ ನಯೀಂ ಉನ್ನಿಸಾ, ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯ್ತಿ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಮುಂಖಡರು ಹಾಜರಿದ್ದರು.ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಬಲವಾಗಿದೆ. ರಾಜ್ಯದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಮೂಲಕ ಹೆಚ್ಚು ಸ್ಥಾನವನ್ನು ಗೆಲ್ಲಲಿದೆ.
- ಎನ್.ಚಲುವರಾಯಸ್ವಾಮಿ, ಸಚಿವರು.