ಅಧಿಕಾರಿಗಳು ಸಾರ್ವಜನಿಕರಿಗೆ ಸತಾಯಿಸಿದರೆ ಕ್ರಮ: ಸಚಿವ ಮಂಕಾಳ ವೈದ್ಯ

KannadaprabhaNewsNetwork |  
Published : Jan 07, 2025, 12:30 AM IST
ಪೊಟೋ ಪೈಲ್ : 6ಬಿಕೆಲ್1 | Kannada Prabha

ಸಾರಾಂಶ

ಮಾರ್ಚ್ 15ರೊಳಗೆ ಸರ್ಕಾರದ ಎಲ್ಲ ಅನುದಾನಗಳನ್ನೂ ಬಳಸಿಕೊಳ್ಳಬೇಕು. ಅನುದಾನ ಬಳಕೆಯಾಗದೇ ವಾಪಸ್ ಹೋದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಸಚಿವ ಮಂಕಾಳ ವೈದ್ಯ ಸೂಚಿಸಿದರು.

ಭಟ್ಕಳ: ಕಚೇರಿಗೆ ಬರುವ ಜನರಿಗೆ ಅಧಿಕಾರಿಗಳು ಕೆಲಸಗಳನ್ನು ಮಾಡಿಕೊಡಲು ಸತಾಯಿಸಿದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಎಚ್ಚರಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಕಚೇರಿಗೆ ಬರುವ ಜನರನ್ನು ಗೌರಯುತವಾಗಿ ನಡೆಸಿಕೊಳ್ಳಬೇಕು. ಅದನ್ನು ಬಿಟ್ಟು ಜನರ ಕೆಲಸ ಕಾರ್ಯಗಳಿಗೆ ಸತಾಯಿಸುವುದು, ಗೌರವ ಕೊಡದೇ ಇರುವುದು, ಕೆಟ್ಟ ಭಾಷೆಯಲ್ಲಿ ಮಾತನಾಡುವುದನ್ನು ಮಾಡಿದರೆ ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾರ್ಚ್ 15ರೊಳಗೆ ಸರ್ಕಾರದ ಎಲ್ಲ ಅನುದಾನಗಳನ್ನೂ ಬಳಸಿಕೊಳ್ಳಬೇಕು. ಅನುದಾನ ಬಳಕೆಯಾಗದೇ ವಾಪಸ್ ಹೋದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇದಕ್ಕೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಹೀಗಾಗಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆಯಲ್ಲಿ ಏಜೆಂಟರ ಹಾವಳಿ ಸಂಪೂರ್ಣ ಬಂದ್ ಆಗಬೇಕು. ಜನರ ಕೆಲಸವನ್ನು ಏಜೆಂಟರಿಲ್ಲದೇ ಮಾಡಿಕೊಡಬೇಕು ಎಂದು ತಾಕೀತು ಮಾಡಿದ ಸಚಿವರು, ಏಜೆಂಟರ ಹಾವಳಿ ಬಗ್ಗೆ ನಿಗಾ ವಹಿಸಿ ಇದಕ್ಕೆ ಅವಕಾಶ ಮಾಡಿ ಕೊಡಬೇಡಿ ಎಂದು ತಹಸೀಲ್ದಾರರಿಗೆ ಸೂಚಿಸಿದರು.

ತಹಸೀಲ್ದಾರ್ ಕಚೇರಿಯಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರ ನೀಡಲು ಸತಾಯಿಸಲಾಗುತ್ತದೆ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ ನಾಯ್ಕ ಮತ್ತು ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ರಾಜು ನಾಯ್ಕ ಅವರು ಸಚಿವರ ಗಮನಕ್ಕೆ ತಂದಾಗ, ಸಚಿವರು ತಹಸೀಲ್ದಾರರ ಬಳಿ ಈ ಬಗ್ಗೆ ಚರ್ಚಿಸಿ, ಕೇಸ್ ವರ್ಕರ್ ಕರೆಸುವಂತೆ ಸೂಚಿಸಿದರು.

ಕೇಸ್ ವರ್ಕರ್ ಸಭೆಗೆ ಬಂದಾಗ ಸಚಿವರು ಜನನ ಮತ್ತು ಮರಣ ಪ್ರಮಾಣಪತ್ರ ವಿತರಿಸಲು ವಿಳಂಬ ಮಾಡುವುದು ಯಾಕೆ? ನಿಮ್ಮ ಮೇಲೆ ದೂರು ಇದೆ ಎಂದು ಹೇಳಿ ಕೆಲಸ ತ್ವರಿತಗತಿಯಲ್ಲಿ ಮಾಡಿಕೊಡುವಂತೆ ತಾಕೀತು ಮಾಡಿದರು.

ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ರಸ್ತೆ ಮತ್ತಿತರ ಕಾಮಗಾರಿ ವಿಳಂಬಗತಿಯಿಂದ ಸಾಗುತ್ತಿರುವುದರಿಂದ ಕೆಲಸ ಪೂರ್ಣಗೊಳ್ಳುವ ವರೆಗೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಡಿ ಎಂದು ಪುರಸಭೆ ಮುಖ್ಯಾಧಿಕಾರಿಗೆ ಸಚಿವರು ಸೂಚಿಸಿದರು. ಅಂಗನವಾಡಿ ಕೇಂದ್ರವನ್ನು ಸ್ವಂತ ಕಟ್ಟಡದಲ್ಲಿ ಮಾಡಬೇಕಾಗಿದೆ. ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುವುದು ಸರಿಯಲ್ಲ ಎಂದು ಸಚಿವರು ಹೇಳಿದರು.

ಜಿಪಿಎಸ್ ಆದ ಮತ್ತು ಹಳೆ ಅತಿಕ್ರಮಣದಾರರಿಗೆ ತೊಂದರೆ ಕೊಡುವುದು ಸರಿಯಲ್ಲ. ಆದರೆ ಹೊಸ ಅತಿಕ್ರಮಣಕ್ಕೆ ಯಾರೂ ಮುಂದಾಗಬಾರದು ಎಂದ ಸಚಿವರು, ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡ ನೆಟ್ಟರೆ ಅನುಕೂಲವಾಗಲಿದೆ. ಇದರಿಂದ ಕಾಡುಪ್ರಾಣಿಗಳು ತೋಟಕ್ಕೆ ಬರುವುದಾದರೂ ತಪ್ಪುತ್ತದೆ. ಕಾಡುಪ್ರಾಣಿಗಳ ಹಾವಳಿಯಿಂದ ರೈತರು ತೊಂದರೆ ಪಡುವಂತಾಗಿದೆ. ಕಾಡುಪ್ರಾಣಿ ಮತ್ತು ಬೆಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಶೀಘ್ರ ವಿತರಿಸಿ ಎಂದು ಸಚಿವರು ಅರಣ್ಯಾಧಿಕಾರಿಗೆ ಹೇಳಿದರು.

ಸಮಯಕ್ಕೆ ಸರಿಯಾಗಿ ಬಸ್ಸುನ್ನು ಓಡಿಸಲು ನಿಮಗೆ ಏನು ತೊಂದರೆ ಆಗಿದೆ ಎಂದು ಸಚಿವರು ಡಿಪೋ ವ್ಯವಸ್ಥಾಪಕರಲ್ಲಿ ಪ್ರಶ್ನಿಸಿದರು. ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಕೊಡಬೇಕು. ಮಾರ್ಚ್ ಅಂತ್ಯದೊಳಗೆ ಕ್ಷೇತ್ರದಲ್ಲಿ ಯಾವುದೇ ಮನೆಗೆ ವಿದ್ಯುತ್ ಇಲ್ಲ ಎಂದು ಹೇಳಬಾರದು ಎಂದ ಸಚಿವರು, 110 ಕೆವಿ ಕಾಮಗಾರಿ ಮಾರ್ಚ್ ಅಂತ್ಯದೊಳಗೆ ಮುಗಿಸಬೇಕು. ಕೆಲಸವನ್ನು ಶೀಘ್ರಗತಿಯಲ್ಲಿ ಮುಗಿಸಲು ನಿಗಾ ವಹಿಸಿ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.

ಸಭೆಯಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ, ತಾಪಂ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ ನಾಯಕ, ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಪುರಸಭೆ ಉಪಾಧ್ಯಕ್ಷ ಅಲ್ತಾಪ್ ಖರೂರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕೆಡಿಪಿ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ