ಕನ್ನಡಪ್ರಭ ವಾರ್ತೆ ಕಾಪು
ಕೃಷಿ ವಿಜ್ಞಾನಿಗಳ ತಂಡ ಜಿಲ್ಲೆಯ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೇಟಿ ನೀಡಿ ಕೃಷಿ ಸಮಸ್ಯೆಗಳನ್ನು ಗುರುತಿಸಿ ಪ್ರಾತಿಕ್ಷಿಕೆ ಮತ್ತು ತರಬೇತಿ ನೀಡುವ ಮೂಲಕ ಕೃಷಿಕರಿಗೆ ಉತ್ತೇಜನ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ನವೀನ್ ಹೇಳಿದರು.ಅವರು ಇಲ್ಲಿನ ಶಿರ್ವ ಗ್ರಾ.ಪಂ. ಸಭಾಭವನದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ನವದೆಹಲಿ, ವಿಸ್ತರಣಾ ನಿರ್ದೇಶನಾಲಯ ಶಿವಮೊಗ್ಗ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಜಿಲ್ಲಾ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಹಾಗೂ ಸ್ಥಳೀಯ ಸಂಘಟನೆಗಳ ಸಹಭಾಗಿತ್ವದಲ್ಲಿ ಪೂರ್ವ ಮುಂಗಾರು ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರೈತರಿಗೆ ಪೂರಕವಾಗಿ ಹೊಸ ತಂತ್ರಜ್ಞಾನ ಪರಿಚಯ ಮಾಡುವ ಉದ್ದೇಶದಿಂದ ಕೃಷಿ ಮತ್ತು ಅದರ ಅವಲಂಬಿತ ಉದ್ಯೋಗದ ಒಳಾಂಗಣ ಹಾಗೂ ಹೊರಾಂಗಣ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಶ್ರೀನಿವಾಸ್ ಬೀಜೋತ್ಪಾದನೆ, ಗಿಡಮೂಲಿಕೆ, ತರಕಾರಿ, ಹೂ ಮತ್ತು ಔಷಧೀಯ ಸಸ್ಯ, ಸುಗಂಧ ದ್ರವ್ಯ ಬೆಳೆ ತಳಿಗಳ ಬಗ್ಗೆ ತಿಳಿಸಿದರು. ಕಾಪು ತಾ.ಪಂ. ಕೃಷಿ ಅಧಿಕಾರಿ ಪುಷ್ಪಾ ಕೃಷಿ ಪರಿಕರಗಳು, ಸಹಾಯಧನದೊಂದಿಗೆ ಯಂತ್ರೋಪಕರಣಗಳು, ಕೃಷಿಭಾಗ್ಯ ಯೋಜನೆ, ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು.ಬ್ರಹ್ಮಾವರ ಕೃಷಿ ವಿಜ್ಞಾನಕೇಂದ್ರದ ತಾಂತ್ರಿಕ ಅಧಿಕಾರಿ ಪ್ರವೀಣ್ ಕೆ.ಎನ್., ಹವಾಮಾನ ಮುನ್ಸೂಚನೆಯ ಬಗ್ಗೆ ಮಾತನಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಮಣಿ ವಂದಿಸಿದರು.