ಕನ್ನಡಪ್ರಭ ವಾರ್ತೆ ಕೊಲ್ಹಾರ
ರೈತ ಶರಣು ಅಂಗಡಿ ಮಾತನಾಡಿ, ಕೆಐಡಿಬಿಗೆ ಭೂಮಿ ಕಳೆದುಕೊಂಡ ರೈತರಿಗೆ ಯೋಗ್ಯವಾದ ಬೆಲೆ ನೀಡುತ್ತಿಲ್ಲ. ನಮ್ಮ ಭೂಮಿಗೆ ಪರಿಹಾರ ನೀಡದೆ ಜಮೀನಿನ ಪಹಣಿ ಪತ್ರದಲ್ಲಿ ಹೆಸರು ಕಡಿಮೆ ಮಾಡಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ. ಜೆಎಂಸಿ ಆಧಾರದ ಮೇಲೆ ಜಮೀನುಗಳಲ್ಲಿದ್ದ ಗಿಡ ಮರಗಳಿಗೆ ಸರಿಯಾದ ಪರಿಹಾರ ನೀಡದೆ ಲಂಚ ಪಡೆದು ಕೆಲವರಿಗೆ ಹೆಚ್ಚು ಹಾಗೂ ಕೆಲವರಿಗೆ ಕಡಿಮೆ ಹಣ ನೀಡಿ ರೈತರಲ್ಲಿ ತಾರತಮ್ಯ ಮಾಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಭೂ ಹಿತರಕ್ಷಣಾ ನಿರಾಶ್ರಿತರ ರೈತ ಸಂಘದ ಅಧ್ಯಕ್ಷ ಶಿವಾನಂದ ಕೆಂಗಲಗುತ್ತಿ ಮಾತನಾಡಿ, 2013ರ ಆದೇಶದಂತೆ 1ಎಕರೆ ನೀರಾವರಿ ಭೂಮಿಗೆ ₹20 ಲಕ್ಷ, ಒಣ ಬೇಸಯಕ್ಕೆ ₹20 ಲಕ್ಷ ಕೊಡಬೇಕೆಂದು ಅವಾರ್ಡ್ ಮಾಡಬೇಕು. ಹಂತ ಹಂತವಾಗಿ ನೀಡಿದ ಪರಿಹಾರದ ಹಣಕ್ಕೆ ಶೇ.18 ಬಡ್ಡಿ ಹಾಕಿ ಕೊಡಬೇಕು. ಭೂ ನಿರಾಶ್ರಿತರಿಗೆ ಯೋಜನಾ ಸರ್ಟಿಫಿಕೆಟ್ ಕೊಡಬೇಕು. ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಸರ್ಕಾರಿ ನೌಕರಿ ಕೊಡಬೇಕು. ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ನಾಳೆಯಿಂದ ತಹಸೀಲ್ದಾರ್ ಕಚೇರಿ ಬೀಗ ಹಾಕಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಮಾತನಾಡಿ, ಕೆಐಡಿಬಿಗೆ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಕೊಡಿಸುವುದು ಸರ್ಕಾರದ ಕೆಲಸ. ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಪರಿಹಾರ ಒದಗಿಸಬೇಕು. ನಾವು ಯಾರು ಕೂಡಾ ಅಧಿಕಾರಿಗಳ ಬಳಿ ಹೋಗುದಿಲ್ಲ. ಸಂಕ್ರಾಂತಿ ಭೋಗಿ ಹಬ್ಬವಿದ್ದರೂ ಕೂಡಾ ಇಂತಹ ಉರಿ ಬಿಸಿಲಿನಲ್ಲಿ ಕುಳಿತು ರೈತರು ಹೋರಾಟ ಮಾಡುತಿದ್ದರು ಸರ್ಕಾರವಾಗಲಿ, ಸಂಬಂಧಿಸಿದ ಸಚಿವರಾಗಲಿ ಮತ್ತು ಇಲಾಖೆ ಅಧಿಕಾರಿಗಳಾಗಲಿ ಬಂದು ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎರಡು ದಿನಗಳಲ್ಲಿ ಅಧಿಕಾರಿಗಳು ಬಂದು ರೈತರ ಸಮಸ್ಯೆ ಬಗೆಹರಿಸಲಿಲ್ಲ ಅಂದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.