ಕೇಂದ್ರದ ಹಣಕ್ಕೆ ತನ್ನ ಪಾಲು ಸೇರಿಸಿ ರೈತರಿಗೆ ನೀಡಿ: ಎಚ್.ಡಿ. ಕುಮಾರಸ್ವಾಮಿ ಆಗ್ರಹ

KannadaprabhaNewsNetwork |  
Published : Apr 30, 2024, 02:04 AM IST
ಶಿವಮೊಗ್ಗದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ, ಸಂಸದ ಬಿ. ವೈ. ರಾಘವೇಂದ್ರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಸಂಸದ ಬಿ.ವೈ.ರಾಘವೇಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೇಂದ್ರದಿಂದ ಬರಪರಿಹಾರ ಬಂದಿಲ್ಲ ಎಂದು ಒಂದೇ ಸಮನೆ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದ ರಾಜ್ಯ ಕಾಂಗ್ರೆಸ್ ಇದೀಗ ಕೇಂದ್ರ ಬರ ಪರಿಹಾರ ಹಣ ಬಿಡುಗಡೆ ಮಾಡಿದ ಬಳಿಕ ತನ್ನ ಪಾಲಿನ ಹಣವೂ ಸೇರಿಸಿ ರೈತರಿಗೆ ಯಾವ ರೀತಿ ಹಂಚಿಕೆ ಮಾಡುತ್ತದೆ ಎಂಬುದರ ಕುರಿತು ಮಾಹಿತಿ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು 18 ಸಾವಿರ ಕೋಟಿ ರು.ಗಳ ನಷ್ಟ ಎಂದು ವರದಿ ನೀಡಿದ್ದು, ಹಣಕಾಸು ಆಯೋಗದ ಪ್ರಕಾರ 4900 ಸಾವಿರ ಕೋಟಿ ರು. ಪರಿಹಾರ ಬರಬೇಕು ಎಂದು ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಹೇಳಿದ್ದರು. ಅದರಂತೆ ಕೇಂದ್ರ ಇದೀಗ 3500 ಕೋಟಿ ರು. ಹಣ ಬಿಡುಗಡೆ ಮಾಡಿದೆ. ಈಗ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಸೇರಿಸಬೇಕಲ್ಲವೇ? ಅದನ್ನು ರೈತರ ಖಾತೆಗೆ ಹಾಕಬೇಕಲ್ಲವೇ? ಇದರ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಬರೀ ಚುನಾವಣೆಯಲ್ಲಿಯೇ ಮುಳುಗಿದರೆ ಆಗದು ಎಂದರು.

ಆರೇಳು ತಿಂಗಳಿಂದ ಸರ್ಕಾರ ಏನೂ ಮಾಡುತ್ತಿಲ್ಲ. ತೀವ್ರ ಬರಗಾಲದಿಂದ ಸಂಕಷ್ಟ ಎದುರಿಸುತ್ತಿರುವ ರೈತರ ನೆರವಿಗೆ ಬಂದಿಲ್ಲ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರದ ವಿರುದ್ಧ ಸದಾ ವಾಗ್ದಾಳಿ ನಡೆಸುವುದೇ ಇವರ ಮಾಮೂಲಿ ನಡೆಯಾಗಿತ್ತು. ಇನ್ನೊಂದೆಡೆ ‘ನನ್ನ ತೆರಿಗೆ ನನ್ನ ಹಕ್ಕು’ ಎಂದು ಹೇಳುತ್ತಾ ಗಲಾಟೆ ಎಬ್ಬಿಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದೊಡನೆ ಸಂಘರ್ಷ ಮಾಡುತ್ತಾ ಕೂರುವುದು ಸರಿಯಲ್ಲ. ಪರಸ್ಪರ ಅನುಸರಿಸಿ ಹೋಗಬೇಕು. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವಧಿ ಹತ್ತು ವರ್ಷದಲ್ಲಿ ಕೇವಲ ಎರಡು ಸಾವಿರ ಕೋಟಿ ರು. ಬಂದಿದೆ. ಈಗ ಒಂದೇ ವರ್ಷದಲ್ಲಿ ಮೂರೂವರೆ ಸಾವಿರ ಕೋಟಿ ರು. ಬಂದಿದೆ. ಇದನ್ನು ಸರಿಯಾಗಿ ಬಳಕೆ ಮಾಡಿ ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರ ಬರೀ ಗ್ಯಾರಂಟಿಗಳ ಭಜನೆ ಮಾಡುತ್ತಿದೆ. ಅದರ ಹೊರತಾಗಿ ಇನ್ನೊಂದು ವಿಷಯದ ಕುರಿತು ಚರ್ಚೆ ಮಾಡುತ್ತಿಲ್ಲ. ಮೋದಿ ಬಗ್ಗೆ ವಾಗ್ದಾಳಿ ನಡೆಸುವುದಷ್ಟೇ ಇವರ ಕೆಲಸವಾಗಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಒಂದೆಡೆ ಖಜಾನೆ ಖಾಲಿ ಮಾಡಿಕೊಂಡು ಸುಪ್ರಿಕೋರ್ಟ್‌ಗೆ ಹೋಗುವುದು ಎಂತಹ ನಡವಳಿಕೆ? ಇನ್ನೊಂದೆಡೆ ವಿದ್ಯುತ್ ದರ ಹೆಚ್ಚಳ, ಮದ್ಯದ ದರದಲ್ಲಿ ಹೆಚ್ಚಳ, ಸ್ಟಾಂಪ್ ಡ್ಯೂಟಿಯಲ್ಲಿ ಹೆಚ್ಚಳ ಮುಂತಾದವುಗಳ ಮೂಲಕ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನಾನು ಕೇಂದ್ರ ಸರ್ಕಾರದ ಪರ ವಕಾಲತ್ತು ವಹಿಸುತ್ತೇನೆ ಎಂದುಕೊಳ್ಳಬೇಕಾಗಿಲ್ಲ. ಬದಲಾಗಿ ರಾಜ್ಯ ಸರ್ಕಾರ ಜನರಿಗಾಗಿ ಏನು ಮಾಡುತ್ತಿದೆ ಎಂದು ಪ್ರಶ್ನಿಸುತ್ತೇನೆ. ನನ್ನನ್ನು ನಾಡದ್ರೋಹಿ ಎಂದು ಕಾಂಗ್ರೆಸ್ ಮುಖಂಡರು ಟೀಕಿಸಿದರು. ಮುಂದೆ ಯಾರು ನಾಡದ್ರೋಹಿ ಎಂದು ಗೊತ್ತಾಗುತ್ತದೆ. ಚುನಾವಣೆ ಫಲಿತಾಂಶ ಬಂದಾಗ ಏನೇನು ಆಗಬಹುದು ಎಂಬುದನ್ನು ನೋಡೋಣ ಎಂದರು.

ಮೊದಲ ಹಂತದ 14 ಕ್ಷೇತ್ರಗಳಲ್ಲಿ ಮಂಡ್ಯ, ಹಾಸನ, ಶಿವಮೊಗ್ಗ ಸೇರಿ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಧರ್ಮ ಪಾಲಿಸಿವೆ. ಮಂಡ್ಯ ಮತ್ತು ಹಾಸನದಲ್ಲಿ ಕೂಡ ಬಿಜೆಪಿ ಕಾರ್ಯಕರ್ತರು ಸರಿಯಾಗಿ ಬೆಂಬಲ ನೀಡಿದ್ದಾರೆ. ಈ ವಿಷಯದಲ್ಲಿ ದೇವೇಗೌಡರಿಗೆ ಮಾಹಿತಿ ಕೊರತೆ ಇರಬಹುದೆಂದರು.

ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಕುಮಾರಸ್ವಾಮಿಯವರು ನನ್ನ ಪರವಾಗಿ ಜಿಲ್ಲೆಯಲ್ಲಿ ಮೂರು ಸಭೆಗಳಲ್ಲಿ ಭಾಗಿಯಾಗಲಿದ್ದು, ಎರಡೂ ಪಕ್ಷಗಳು ಸೇರಿ ಮೋದಿ ಕೈ ಬಲಪಡಿಸಲಾಗುವುದು. ಇಲ್ಲಿ ಗೆಲುವು ಶತ ಸಿದ್ಧ ಎಂದರು.

ಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್, ಭೋಜೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ. ಡಿ. ಮೇಘರಾಜ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಾಜಿ ಶಾಸಕ ರಘುಪತಿ ಭಟ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!