ದಿವ್ಯಾಂಗರಿಗೆ ಸರ್ಕಾರದಿಂದ ಸೂಕ್ತ ಅವಕಾಶ: ಡಿಸಿ

KannadaprabhaNewsNetwork | Published : Feb 26, 2025 1:00 AM

ಸಾರಾಂಶ

ದಿವ್ಯಾಂಗರಿಗೆ ತಮ್ಮ ಜೀವನದಲ್ಲಿ ಶಕ್ತಿ ಮತ್ತು ಧೈರ್ಯವನ್ನು ಹೊಂದಿ ಆತ್ಮವಿಶ್ವಾಸದಿಂದ ಬದುಕಲು ಸರ್ಕಾರ ಎಲ್ಲ ರೀತಿಯ ಅವಕಾಶಗಳನ್ನು ಕಲ್ಪಿಸಿದೆ. ದಿವ್ಯಾಂಗರು ಸಾಮಾನ್ಯ ಜನರಂತೆ ಬದುಕು ನಡೆಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.

- ಅಂಗನವಾಡಿ ಶಿಕ್ಷಕರಿಗಾಗಿ ಪೂರ್ವಭಾವಿ ಮಧ್ಯಸ್ಥಿಕೆ ಅರಿವು ಕಾರ್ಯಕ್ರಮ । ಕಿಟ್‌ಗಳ ವಿತರಣೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ದಿವ್ಯಾಂಗರಿಗೆ ತಮ್ಮ ಜೀವನದಲ್ಲಿ ಶಕ್ತಿ ಮತ್ತು ಧೈರ್ಯವನ್ನು ಹೊಂದಿ ಆತ್ಮವಿಶ್ವಾಸದಿಂದ ಬದುಕಲು ಸರ್ಕಾರ ಎಲ್ಲ ರೀತಿಯ ಅವಕಾಶಗಳನ್ನು ಕಲ್ಪಿಸಿದೆ. ದಿವ್ಯಾಂಗರು ಸಾಮಾನ್ಯ ಜನರಂತೆ ಬದುಕು ನಡೆಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ನಗರದ ಪ್ರಾದೇಶಿಕ ಕೇಂದ್ರದಲ್ಲಿ ಸೋಮವಾರ ದಿವ್ಯಾಂಗರ ಕೌಶಾಲ್ಯಾಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕರಣದ ಸಂಯುಕ್ತ ಪ್ರಾದೇಶಿಕ ಕೇಂದ್ರ ವತಿಯಿಂದ, ಅಂಗನವಾಡಿ ಶಿಕ್ಷಕರಿಗಾಗಿ ಪೂರ್ವಭಾವಿ ಮಧ್ಯಸ್ಥಿಕೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ, ಕಿಟ್‌ಗಳ ವಿತರಿಸಿ ಅವರು ಮಾತನಾಡಿದರು.

ಸಿಆರ್‌ಸಿ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಪ್ರತಿಷ್ಠಿತ ಸಂಸ್ಥೆಯಾಗಿದೆ. ದಿವ್ಯಾಂಗ ವ್ಯಕ್ತಿಗಳ ಕಲ್ಯಾಣಕ್ಕಾಗಿ ಭಾರತ ಸರ್ಕಾರದ ವತಿಯಿಂದ ಸ್ಥಾಪಿಸಲ್ಪಟ್ಟ ಸಿಆರ್‌ಸಿ, 21 ವಿಧದ ದಿವ್ಯಾಂಗರ ಮತ್ತು ಜನರ ಅಗತ್ಯತೆಗಳನ್ನು ನೋಡಿಕೊಳ್ಳುತ್ತಿದೆ. ಅಂಗವಾಡಿ ಶಿಕ್ಷಕರಾಗಿರುವ ನೀವು ಪ್ರಸವಪೂರ್ವ ಮತ್ತು ನಂತರದ ಆರೈಕೆಗಾಗಿ ನಿಕಟವಾಗಿ ಕೆಲಸ ಮಾಡುತ್ತಿದ್ದೀರಿ. ಸಮಾಜದ ಜನರಲ್ಲಿ ಸಂವಹನ ಮಾಡುವುದು ನಿಮ್ಮ ಕರ್ತವ್ಯ. ನಿಮ್ಮ ವ್ಯಾಪ್ತಿಯಲ್ಲಿನ ಪ್ರತಿಯೊಬ್ಬ ನಾಗರೀಕರ ಸ್ಥಿತಿಯ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಮಕ್ಕಳು ಯಾವುದೇ ರೀತಿಯ ದಿವ್ಯಾಂಗತೆಗೆ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಸಹಾಯದ ಅಗತ್ಯವಿರುವ ಹಿರಿಯ ನಾಗರೀಕರು ಸೂಕ್ತ ಸಹಾಯ ಹಾಗೂ ಪ್ರಯೋಜನ ಪಡೆಯಲು ಸಿಆರ್‌ಸಿಗೆ ಭೇಟಿ ನೀಡುವಂತೆ ಅವರಿಗೆ ತಿಳಿಸಬೇಕು ಎಂದರು.

ಸಿಆರ್‌ಸಿ ಎಲ್ಲ ರೀತಿಯ ದಿವ್ಯಾಂಗತೆಗೆ ಸಂಬಂಧಿತ ಸಮಸ್ಯೆಗಳಲ್ಲಿ ಉತ್ತಮ ಪರಿಣತಿ ಹೊಂದಿರುವ ಸಿಬ್ಬಂದಿಯನ್ನು ಹೊಂದಿದೆ. ನೀವು ಮಗುವಿನ ಚಿಕ್ಕ ವಯಸ್ಸಿನಲ್ಲಿ ಯಾವುದೇ ಅಂಗವೈಕಲ್ಯವನ್ನು ಗುರುತಿಸಿದರೆ, ಅದನ್ನು ಗುಣಪಡಿಸಬಹುದು ಮತ್ತು ಸಿಆರ್‌ಸಿಯು ಅವರನ್ನು ಸಾಮಾನ್ಯ ಸ್ಥಿತಿಗೆ ತರಲು ಶ್ರಮಿಸುತ್ತದೆ ಎಂದು ತಿಳಿಸಿದರು.

ಅಂಗನವಾಡಿ ಶಿಕ್ಷಕರಿಗೆ ಆರಂಭಿಕ ಮಧ್ಯಸ್ಥಿಕೆ ಜಾಗೃತಿ ಮೂಡಿಸುವ ಕಿಟ್‌ಗಳ ವಿತರಣೆ ಹಾಗೂ ವಿವಿಧ ದಿವ್ಯಾಂಗರಿಗೆ 120 ಸಹಾಯಕ ಸಾಧನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ 70 ಕ್ಕೂ ಹೆಚ್ಚಿನ ಫಲಾನುಭವಿಗಳು ವಿವಿಧ ಬಗೆಯ ಸಹಾಯಕ ಸಾಧನಗಳನ್ನು ಪಡೆದುಕೊಂಡರು. ಅನಂತರ ಸಿಆರ್‌ಸಿಯಿಂದ ದಿವ್ಯಾಂಗರಿಗೆ ನೀಡಲಾಗುವ ಸವಲತ್ತುಗಳು ಸೇವೆಗಳನ್ನು ವಿತರಿಸಿದರು. ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಸಂವಾದ ನಡೆಸಿದರು. ಇಂತಹ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಮತ್ತು ದಿವ್ಯಾಂಗರಿಗೆ ಸೇವೆ ಸಲ್ಲಿಸುವುದು ಉದಾತ್ತ ಕೆಲಸ ಎಂದು ಸಿಬ್ಬಂದಿಗೆ ಶ್ಲಾಘಿಸಿದರು.

ಸಿಆರ್‌ಸಿ ನಿರ್ದೇಶಕಿ ಮೀನಾಕ್ಷಿ ಮಾತನಾಡಿ, ಬಿಪಿಎಲ್ ವರ್ಗದವರಿಗೆ ಮತ್ತು ಹಿರಿಯ ನಾಗರೀಕರಿಗೆ ವಿಕಲಚೇತನರಿಗೆ ಅಗತ್ಯವಿರುವ ಎಲ್ಲ ಸಹಾಯ ಮತ್ತು ಉಪಕರಣಗಳನ್ನು ಉಚಿತವಾಗಿ ನೀಡಲಾಗುತ್ತದೆ. 21 ವಿಧದ ದಿವ್ಯಾಂಗರಿಗೆ, ಪುನರ್ವಸತಿ, ಸಮಾಲೋಚನೆ, ಚಿಕಿತ್ಸೆ, ಉದ್ಯೋಗ ಕೌಶಲ್ಯಗಳ ತರಬೇತಿ, ಉದ್ಯೋಗ ಇತ್ಯಾದಿಗಳಿಗೆ ಸೇವೆ ಸಲ್ಲಿಸುತ್ತಾ ಇದ್ದಾರೆ. ಕರ್ನಾಟಕ ರಾಜ್ಯದ ಎಲ್ಲ ಜನರು ಸಿಆರ್‌ಸಿಯಿಂದ ಒದಗಿಸಲಾದ ಸೌಲಭ್ಯಗಳನ್ನು ಗರಿಷ್ಠವಾಗಿ ಬಳಸಿಕೊಳ್ಳುವಂತೆ ಅವರು ವಿನಂತಿಸಿದರು.

ಸಿಆರ್‌ಸಿ ಆಡಳಿತಾಧಿಕಾರಿ ವೈ.ಶ್ರೀನಾಥ್, 275 ಅಂಗನವಾಡಿ ಶಿಕ್ಷಕರು, ವಿಕಲಚೇತನರು ಅವರ ಬಂಧುಗಳು, ಸಿಆರ್‌ಸಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 500 ಜನ ಭಾಗವಹಿಸಿದ್ದರು.

- - - -25ಕೆಡಿವಿಜಿ41:

ದಾವಣಗೆರೆಯಲ್ಲಿ ಅಂಗನವಾಡಿ ಶಿಕ್ಷಕರಿಗಾಗಿ ಪೂರ್ವಭಾವಿ ಮಧ್ಯಸ್ಥಿಕೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಉದ್ಘಾಟಿಸಿ, ಕಿಟ್‌ಗಳ ವಿತರಿಸಿದರು.

Share this article