ಇಂದು ಉನ್ನತ ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕ್ರೀಡೆಗಳನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಂಡು ನಿಮ್ಮ ಮುಂದೆ ಇರುವ ಸವಾಲು ಎದುರಿಸಲು ಸಿದ್ಧವಾಗಬೇಕು .
ಕನ್ನಡಪ್ರಭ ವಾರ್ತೆ ಹಲಗೂರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿಭಾಗದಲ್ಲಿ ಆದಿಚುಂಚನಗಿರಿ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ವಿದ್ಯಾರ್ಥಿನಿ ವಿಭಾಗದಲ್ಲಿ ಪಾಂಡವಪುರ ಶ್ರೀ ಶಂಭುಲಿಂಗೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯ ವಿದ್ಯಾರ್ಥಿಗಳು ಚಾಂಪಿಯನ್ ಟ್ರೋಫಿ ಪಡೆದುಕೊಂಡರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಕ್ರೀಡಾ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಮಂಡ್ಯ ವಿಶ್ವವಿದ್ಯಾಲಯ ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆಗೆ ಕಾಲೇಜಿನ ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ಚಾಲನೆ ನೀಡಿದರು.
ಗುರುವಾರ ಬೆಳಗ್ಗೆ 6 ಗಂಟೆಗೆ 37 ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಆವರಣದಿಂದ ಗುಂಡಾಪುರದ ಬೆಟ್ಟದರಸಮ್ಮನ ದೇವಸ್ಥಾನದ ಸನ್ನಿಧಿವರಿಗೂ ಸುಮಾರು 10 ಕಿಲೋ ಮೀಟರ್ ಓಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ಮೆಡಲ್ ನೀಡಿ ಅಭಿನಂದಿಸಲಾಯಿತು.
ದೈಹಿಕ ಶಿಕ್ಷಕ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಇಂದು ಉನ್ನತ ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕ್ರೀಡೆಗಳನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಂಡು ನಿಮ್ಮ ಮುಂದೆ ಇರುವ ಸವಾಲು ಎದುರಿಸಲು ಸಿದ್ಧವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಗುಲ್ಲಾಜ ಬಾನು, ಉಪಾಧ್ಯಕ್ಷೆ ಲತಾ, ಸಮಾಜ ಸೇವಕರಾದ ಕುಂತೂರು ಗೋಪಾಲ್, ದೇವರಹಳ್ಳಿ ಕುಮಾರ್, ಜಿಪಂ ಮಾಜಿ ಸದಸ್ಯ ಚಂದ್ರಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಹರ್ ಜಿ.ಎಸ್, ಮಂಡ್ಯ ವಿವಿ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀನಿವಾಸ್, ಶಂಕ್ರೇಗೌಡ ಡಾ.ಸೀಮಾ ಕೌಸರ್, ಪ್ರೊಫೆಸರ್ ಸುಧಾಬಿದರಿ, ತಾರಾ ಜಯಲಕ್ಷ್ಮೀ, ಗುರುಪ್ರಸಾದ್, ರವಿ, ಸೂಪರಿಂಡೆಂಟ್ ಕುಮಾರಸ್ವಾಮಿ, ಶಿವರಾಂ, ಉಮೇಶ್, ರಘು, ಕನ್ನಡ ಮೂರ್ತಿ ಗಿರೀಶ್, ರವಿ, ಅನುಸೂಯಾ, ಶ್ರೀಧರ್ ಗ್ರಂಥಪಾಲಕರಾದ ಕೃಷ್ಣಪ್ಪ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.