ಆಂಗ್ಲರ ನೆಲದಲ್ಲಿ ಕನ್ನಡ ಡಿಂಡಿಮ ಬಾರಿಸಿದ ಆದೀಶ ವಾಲಿ

KannadaprabhaNewsNetwork |  
Published : Oct 03, 2024, 01:16 AM IST
ಚಿತ್ರ 2ಬಿಡಿಆರ್‌888ಆದೀಶ ರಜನೀಶ್‌ ವಾಲಿ | Kannada Prabha

ಸಾರಾಂಶ

ಯುಕೆ ಪಾರ್ಲಿಮೆಂಟ್‌ನಲ್ಲಿ ಕನ್ನಡದಲ್ಲಿ ಮಾತನಾಡಿ, ವಚನ ಪಠಿಸಿದ ಆದೀಶಆದೀಶ ಕನ್ನಡ ಪ್ರೇಮಕ್ಕೆ ಮನಸೋತ ಕೋಟ್ಯಂತರ ಜನ, ಡಿಸಿಎಂ ಡಿಕೆಶಿ ಟ್ವೀಟ್‌

ಅಪ್ಪಾರಾವ್‌ ಸೌದಿ

ಕನ್ನಡಪ್ರಭ ವಾರ್ತೆ ಬೀದರ್‌

ಬ್ರಿಟೀಷರ ನೆಲದಲ್ಲಿ ಕನ್ನಡದ ಬಾವುಟ ಹಾರಿಸುವ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದ ಯುವಕ ಆದೀಶ ವಾಲಿ ಮತ್ತೊಮ್ಮೆ ಕನ್ನಡದ ಹಿರಿಮೆ ಹೆಚ್ಚಿಸಿ ಬಸವಣ್ಣನ ಅನುಯಾಯಿಗಳ ಮನ ಗೆದ್ದಿದ್ದಾರೆ.

ಇಲ್ಲಿನ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅವರ ಮೊಮ್ಮಗ, ಎಚ್‌ಕೆಇ ಸೊಸೈಟಿಯ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ ವಾಲಿ ಅವರ ಪುತ್ರ ಆದೀಶ್‌ ವಾಲಿ,‌ ಈ ಹಿಂದೆ ಸಿಟಿ ಯೂನಿರ್ವಸಿಟಿ ಆಫ್‌ ಲಂಡನ್‌ನ ಬೇಸ್‌ ಸ್ಕೂಲ್‌ ಆಫ್‌ ಮ್ಯಾನೇಜ್ಮೆಂಟ್‌ನಿಂದ ಮಾಸ್ಟರ್ಸ್‌ ಪದವಿ ಪಡೆದಿದ್ದು, ಆ ದಿನಗಳ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಸ್ವೀಕರಿಸುವ ಸಂದರ್ಭ ಕನ್ನಡ ಬಾವುಟ ಹಾರಿಸಿ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದು ಮಾಸುವ ಮುನ್ನವೇ ಮತ್ತೊಮ್ಮೆ ಕನ್ನಡಿಗರ ಮನ ಸೆಳೆಯುವಲ್ಲಿ ವಿದೇಶದಲ್ಲಿ ಕನ್ನಡವನ್ನು ಪಸರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಂಡನ್ ಯೂತ್‌ ಕೌನ್ಸಿಲ್‌ನ ಮೊದಲ ಭಾರತೀಯ ಸದಸ್ಯನಾಗಿರುವ, ಬೀದರ್‌ನ‌ ಅದೀಶ್‌ ರಜನೀಶ್‌ ವಾಲಿ ಅವರು ಲಂಡನ್‌ನ ಯುಕೆ ಸಂಸತ್ತಿನಲ್ಲಿ ನಡೆದ ಯುವ ಸಮ್ಮಳನದಲ್ಲಿ ‘ಹವಾಮಾನ ವಲಸೆ –ಯುಕೆ ಸರ್ಕಾರದ ನೀತಿ’ ಎಂಬ ವಿಷಯ ಮಂಡಿಸುವ ಆರಂಭದಲ್ಲಿಯೇ ತಮ್ಮ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿ, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ‘ಇವನಾರವ ಇವನಾರವ ಇವ ನಮ್ಮವ ಇವ ನಮ್ಮವ’ ವಚನ ಪಠಿಸುವ ಮೂಲಕ ಮತ್ತೊಮ್ಮೆ ಕನ್ನಡಿಗನಾಗಿರುವ ಹಿರಿಮೆ ವಿದೇಶದಲ್ಲಿ ಮೆರೆದಿದ್ದಾರೆ.

ಯುಕೆ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ಹಾಗೂ ಬಸವಣ್ಣನ ಸ್ಮರಿಸಿ ವಚನ ಪಠಿಸುವ ಮೂಲಕ ಕೋಟ್ಯಂತರ ಬಸವ ಅನುಯಾಯಿಗಳ ಮನ ಗೆದ್ದಿದ್ದಾರೆ. ಇಷ್ಟೇ ಅಲ್ಲ ಆದೀಶ ವಾಲಿ ಅವರ ಈ ಕನ್ನಡ ಪ್ರೇಮದ ಕುರಿತಂತೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಟ್ವೀಟ್‌ ಮಾಡಿ ಈ ಯುವಕ ಮಾದರಿ ಎಂದು ಶ್ಲಾಘಿಸಿದ್ದಾರೆ. ಇದಕ್ಕೂ ಮೊದಲೂ ರಾಜ್ಯದ ಮುಖ್ಯಮಂತ್ರಿಗಳು, ಮಂತ್ರಿಗಳು ಸೇರಿದಂತೆ ಅನೇಕರು ಕನ್ನಡ ಪ್ರೇಮವನ್ನು ಕೊಂಡಾಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ಪರಿಷತ್ತಿಗೆ ಆದೀಶ್‌ ವಾಲಿಯನ್ನು ಕರೆಯಿಸಿಕೊಂಡು ಸನ್ಮಾನಿಸಿ ಪ್ರತಿಷ್ಠಿತ ಪರಿಷತ್ತು ಗೌರವ ಸದಸ್ಯತ್ವ ನೀಡಿ ಯುಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಳೆಸುವ ಜವಾಬ್ದಾರಿಯನ್ನೂ ನೀಡಿದ್ದು ಸೇರಿದಂತೆ ರಾಜ್ಯದಾದ್ಯಂತ ಆದೀಶಗೆ ಸನ್ಮಾನ, ಅಭಿನಂದನೆಗಳು ಸುರಿದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಹಕ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿ
ಆಂಧ್ರ ಗಡಿಯಲ್ಲಿ ಕನ್ನಡ ಶಾಲಾರಂಭಕ್ಕೆ ನೆರವು ನೀಡಿದ್ದ ಚನ್ನಬಸವ ಶಿವಯೋಗಿ