ಹಗರಿಬೊಮ್ಮನಹಳ್ಳಿ: ತಾಲೂಕಿನ ಬೆಣಕಲ್ಲು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹನಾ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿ ಜಯಲಕ್ಷ್ಮೀ ಮಾತನಾಡಿ, ಜೋಳ, ನವಣೆ, ಸಾಮೆ, ಬರಗು, ಊದಲು, ಕೊರಲೆ, ಹಾರಕ ಇಂತಹ ಧಾನ್ಯಗಳ ಸೇವನೆಯಿಂದ ಗಟ್ಟಿಯಾಗುವ ಜತೆಗೆ ಕಾಯಿಲೆಗಳಿಂದ ದೂರವಿರಬಹುದಾಗಿದೆ. ಹಣ್ಣು, ಹಸಿ ತರಕಾರಿಗಳನ್ನು ಹೆಚ್ಚು ಬಳಕೆ ಮಾಡಬೇಕು ಎಂದು ತಿಳಿಸಿದರು. ಇದೇವೇಳೆ ಹಾರಕದ ಪಲಾವ್ ಮಾಡುವ ಪ್ರಾತ್ಯಕ್ಷಿಕೆ ತೋರಿಸಿದರು.
ತಾಲೂಕು ಯೋಜನಾಧಿಕಾರಿ ಟಿ.ಆರ್. ಮಂಜುಳಾ ಮಾತನಾಡಿ, ಸಿರಿಧಾನ್ಯಗಳು ಅಪೌಷ್ಟಿಕತೆಯ ವಿರುದ್ಧ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಸಿದ್ಧ ಸಿರಿಧಾನ್ಯ ಅತ್ಯುತ್ತಮ ಆಯ್ಕೆಯಾಗಿದೆ. ದಿನನಿತ್ಯದ ಅಡುಗೆಯಲ್ಲಿ ಬಳಕೆ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಇವುಗಳ ಬಳಕೆಯಿಂದ ಕೊಲೆಸ್ಟ್ರಾಲ್ ಪ್ರಮಾಣ ನಿಯಂತ್ರಣವಾಗುವ ಜತೆಗೆ ಹೃದಯಾಘಾತ ತಡೆಯುವಲ್ಲಿ ಸಿರಿಧಾನ್ಯ ಬಳಕೆ ಮಹತ್ವ ಪಡೆದಿದೆ ಎಂದು ಹೇಳಿದರು. ಕೇಂದ್ರದ ಸಿ. ನನ್ನಾಭಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಹುಸೇನ್ಬಾಷಾ, ಸೇವಾಪ್ರತಿನಿಧಿಗಳಾದ ಸುಮಾ, ಸಾವಿತ್ರಿ, ಕೇಂದ್ರದ ಸದಸ್ಯರು ಇದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು.