ಶಾಹೀನ್‌ನಿಂದ ಮಹಮೂದ್‌ ಗಾವಾನ್‌ ಮದರಸಾ ದತ್ತು

KannadaprabhaNewsNetwork |  
Published : Aug 29, 2024, 12:48 AM IST
ಚಿತ್ರ 28ಬಿಡಿಆರ್‌4ಬೀದರ್‌ನ ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್‌ ಖದೀರ್‌ ಅವರು ನವದೆಹಲಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕ ಜುಲ್ಫೆಕಾರ್‌ ಅಲಿ ಅವರೊಂದಿಗೆ ಮಹಮೂದ್‌ ಗಾವಾನ್‌ ಮದರಸಾ ನಿರ್ವಹಣೆಗೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಂಡರು. | Kannada Prabha

ಸಾರಾಂಶ

ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹವು ಮುಂದಿನ ಐದು ವರ್ಷಗಳ ಅವಧಿಗೆ ಸ್ಮಾರಕದ ನಿರ್ವಹಣೆ ನೋಡಿಕೊಳ್ಳಲಿದೆ. ಸ್ಮಾರಕಕ್ಕೆ ಹೊಸ ಕಳೆ ನೀಡಲಿದೆ.

ಕನ್ನಡಪ್ರಭ ವಾರ್ತೆ ಬೀದರ್‌

ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹವು ಇಲ್ಲಿಯ ಐತಿಹಾಸಿಕ ಮಹಮೂದ್‌ ಗಾವಾನ್‌ ಮದರಸಾ ದತ್ತು ಸ್ವೀಕರಿಸಿದ್ದು ಸಮೂಹದ ಅಧ್ಯಕ್ಷ ಡಾ.ಅಬ್ದುಲ್‌ ಖದೀರ್‌ ಅವರು ಈ ಸಂಬಂಧ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹವು ಮುಂದಿನ ಐದು ವರ್ಷಗಳ ಅವಧಿಗೆ ಸ್ಮಾರಕದ ನಿರ್ವಹಣೆ ನೋಡಿಕೊಳ್ಳಲಿದೆ. ಸ್ಮಾರಕಕ್ಕೆ ಹೊಸ ಕಳೆ ನೀಡಲಿದೆ. ಶುದ್ಧ ಕುಡಿಯುವ ನೀರು, ಶೌಚಾಲಯ, ತ್ಯಾಜ್ಯ ನಿರ್ವಹಣೆ, ಶಿಶು ಪಾಲನಾ ಕೋಣೆಗಳು, ರ್ಯಾಂಪ್‌ ನಿರ್ಮಾಣ, ವಿದ್ಯುತ್‌ ಚಾಲಿತ ರಿಕ್ಷಾ, ಆಹಾರ ಮಳಿಗೆ, ದೀಪಾಲಂಕಾರ, ವಾಚನಾಲಯ, ಪ್ರಥಮ ಚಿಕಿತ್ಸಾ ಕೇಂದ್ರ, ಸಿಸಿಟಿವಿ ಕ್ಯಾಮೆರಾ, ವೈಫೈ ಮೊದಲಾದ ಸೌಲಭ್ಯಗಳನ್ನು ಒದಗಿಸಲಿದೆ.

ಪ್ರವಾಸಿಗರಿಗೆ 14ನೇ ಶತಮಾನದಲ್ಲಿ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದ್ದ ಮದರಸಾದ ಇತಿಹಾಸವನ್ನು ವಿವರಿಸಲು ಗೈಡ್‌ಗಳನ್ನು ನೇಮಕ ಮಾಡಲಿದೆ. ಮಹಮೂದ್‌ ಗಾವಾನ್‌ ಮದರಸಾ ಹಿಂದೆ ವಿಶ್ವವಿದ್ಯಾಲಯ ಆಗಿತ್ತು. ದೇಶ, ವಿದೇಶದ ವಿದ್ಯಾರ್ಥಿಗಳು ಇಲ್ಲಿಗೆ ಅಧ್ಯಯನಕ್ಕೆ ಬರುತ್ತಿದ್ದರು ಹೀಗಾಗಿ ಶಾಹೀನ್ ಸಹ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಐತಿಹಾಸಿಕ ಸ್ಮಾರಕವನ್ನು ಅಭಿವೃದ್ಧಿಪಡಿಸಲು ಸ್ಮಾರಕ ದತ್ತು ಯೋಜನೆಯಡಿ ದತ್ತು ತೆಗೆದುಕೊಂಡಿದೆ.

ಸ್ಮಾರಕವನ್ನು ಐದು ವರ್ಷಗಳ ಅವಧಿಯಲ್ಲಿ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ಹಸ್ತಾಂತರಿಸಲಾಗುವುದು. ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಕಲೆ,‌ ಇತಿಹಾಸ, ಪರಂಪರೆಯ ಹೆಗ್ಗುರುತು ಆಗಿರುವ ಜಿಲ್ಲೆಯ ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈಜೋಡಿಸಬೇಕಿದೆ ಎಂದು ಡಾ.ಅಬ್ದುಲ್ ಖದೀರ್‌, ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರು ತಿಳಿಸಿದ್ದಾರೆ.

ಬೀದರ್‌ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶ:

ಬೀದರ್‌ನಲ್ಲಿ ಇರುವಷ್ಟು ಐತಿಹಾಸಿಕ ಮಹತ್ವದ ಸ್ಮಾರಕಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಇಲ್ಲ ‌. ಆದರೂ, ಅವುಗಳಿಗೆ ಪ್ರಾಮುಖ್ಯತೆ ನೀಡುವ ಕೆಲಸ ಅಷ್ಟಾಗಿ ಆಗಿಲ್ಲ. ಇದೀಗ ಮತ್ತೇ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಚಟುವಟಿಕೆಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಪ್ರವಾಸೋದ್ಯಮ ಬೆಳೆದರೆ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಖದೀರ್‌ ತಿಳಿಸಿದ್ದಾರೆ.

ಶಿಕ್ಷಣ ಕೇಂದ್ರವಾಗಿದ್ದ ಗಾವಾನ್‌ ಮದರಸಾ:

ಬಹಮನಿ ರಾಜವಂಶದ ಪ್ರಧಾನಿ ಆಗಿದ್ದ ಮಹಮೂದ್‌ ಗಾವಾನ್‌ ಅವರು 1472ರಲ್ಲಿ ನಿರ್ಮಿಸಿದ ಮದರಸಾ ಒಂದು ಕಾಲದಲ್ಲಿ ಪ್ರಸಿದ್ಧ ಶಿಕ್ಷಣ ಕೇಂದ್ರವಾಗಿತ್ತು. ಇಲ್ಲಿ ಒಂದು ಸಾವಿರ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅವಕಾಶ ಇತ್ತು. ಅರೆಬಿಕ್‌ ಹಾಗೂ ಪರ್ಷಿಯನ್‌ ಭಾಷೆಗಳಲ್ಲಿ ದೇವತಾ ಶಾಸ್ತ್ರ, ತತ್ವ ಶಾಸ್ತ್ರ, ಖಗೋಳ ಶಾಸ್ತ್ರ, ಗಣಿತ ಶಾಸ್ತ್ರ ಶಿಕ್ಷಣ ನೀಡಲಾಗುತ್ತಿತ್ತು. ಮದರಸಾ 3,000 ಪುಸ್ತಕಗಳ ಗ್ರಂಥಾಲಯ ಹೊಂದಿತ್ತು. ಪ್ರಾರ್ಥನಾ ಸ್ಥಳ, ಉಪನ್ಯಾಸ ಸಭಾಂಗಣ, ಪ್ರಾಧ್ಯಾಪಕರು, ವಿದ್ಯಾರ್ಥಿಗಳ ವಸತಿ ಗೃಹಗಳು ಸೇರಿ ವಿವಿಧ ವ್ಯವಸ್ಥೆಗಳ ಕುರುಹುಗಳು ಇಲ್ಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!