ಬೆಳೆಗಳಿಗೆ ಮಾರುಕಟ್ಟೆ ಒದಗಿಸಲು ಗ್ರಾಮ ದತ್ತು: ಪ್ರೊ.ಹರಿಣಿಕುಮಾರ್

KannadaprabhaNewsNetwork |  
Published : Dec 25, 2025, 01:45 AM IST
೨೩ಕೆಎಂಎನ್‌ಡಿ-೫ಮಂಡ್ಯ ತಾಲೂಕು ವಿ.ಸಿ.ಫಾರಂನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ವಿಶೇಷಾಧಿಕಾರಿ ಪ್ರೊ.ಕೆ.ಎಂ.ಹರಿಣಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಬೆಂಗಳೂರಿನ ನಮ್ಮವರು ಎಂಬ ಸಂಸ್ಥೆ ರೈತರಿಗೆ ರಾಜಧಾನಿಯಲ್ಲಿ ಉತ್ತಮ ಮಾರುಕಟ್ಟೆ ಒದಗಿಸಲು ಮುಂದೆ ಬಂದಿದೆ. ರೈತರು ತಮ್ಮ ಉತ್ಪನ್ನಗಳನ್ನು ಬೆಂಗಳೂರಿಗೆ ತಲುಪಿಸಿದಲ್ಲಿ ಅದನ್ನು ವೈಜ್ಞಾನಿಕ ಬೆಲೆಗೆ ಮಾರಾಟ ಮಾಡಿ ರೈತರಿಗೆ ಒಳ್ಳೆಯ ಹಣವನ್ನು ಕೊಡಿಸುವ ಪ್ರಯತ್ನ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ದೃಷ್ಠಿಯಿಂದ ಜಿಲ್ಲೆಯ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಬೆಂಗಳೂರಿನಲ್ಲಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ. ಕೆ.ಎಂ.ಹರಿಣಿಕುಮಾರ್ ತಿಳಿಸಿದರು.

ಬೆಂಗಳೂರಿನ ನಮ್ಮವರು ಎಂಬ ಸಂಸ್ಥೆ ರೈತರಿಗೆ ರಾಜಧಾನಿಯಲ್ಲಿ ಉತ್ತಮ ಮಾರುಕಟ್ಟೆ ಒದಗಿಸಲು ಮುಂದೆ ಬಂದಿದೆ. ರೈತರು ತಮ್ಮ ಉತ್ಪನ್ನಗಳನ್ನು ಬೆಂಗಳೂರಿಗೆ ತಲುಪಿಸಿದಲ್ಲಿ ಅದನ್ನು ವೈಜ್ಞಾನಿಕ ಬೆಲೆಗೆ ಮಾರಾಟ ಮಾಡಿ ರೈತರಿಗೆ ಒಳ್ಳೆಯ ಹಣವನ್ನು ಕೊಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಉದ್ದೇಶಕ್ಕಾಗಿ ಜಿಲ್ಲೆಯ ಯಾವುದಾದರೊಂದು ಗ್ರಾಮ ಅಥವಾ ಹೋಬಳಿಯನ್ನು ಆಯ್ಕೆ ಮಾಡಿಕೊಂಡು ಪ್ರಾಯೋಗಿಕವಾಗಿ ಚಾಲನೆ ನೀಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಸಣ್ಣ ವಾಹನಗಳನ್ನು ಸಿದ್ಧಪಡಿಸಿ ರೈತರ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದೇವೆ. ಈ ವ್ಯವಸ್ಥೆ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಅದನ್ನು ವಿಸ್ತರಿಸಿ ಕೃಷಿ ನಷ್ಟವಲ್ಲ. ಲಾಭದಾಯಕ ಉದ್ಯಮ ಎಂಬುದನ್ನು ತೋರಿಸುವ ಕೆಲಸ ಮಾಡಬೇಕಿದೆ ಎಂದರು.

ಕೃಷಿ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳು ಶೇ. 90ರಷ್ಟು ರೈತರಿಗೆ ತಲುಪುತ್ತದೆ. ಇನ್ನು ಶೇ. 10ರಷ್ಟು ಪ್ರಮಾಣದಲ್ಲಿ ತಲುಪುತ್ತಿಲ್ಲ. ಈ ಬಗ್ಗೆಯೂ ರೈತರಿಗೆ ಅರಿವು ಮೂಡಿಸಲು ನಿರ್ಧರಿಸಲಾಗಿದೆ ಎಂದರು.

ಈಗಾಗಲೇ ಕೃಷಿಯಿಂದ ಯುವಜನರು ವಿಮುಖರಾಗುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಎಲ್ಲರೂ ನಗರ ಮತ್ತು ಪಟ್ಟಣ ಪ್ರದೇಶಗಳತ್ತ ವಲಸೆ ಹೋಗುತ್ತಿದ್ದು, ಮುಂದೆ ಹಳ್ಳಿಗಳಲ್ಲಿ ಕೇವಲ 4 ರಿಂದ 5 ಮಂದಿ ಮಾತ್ರ ಉಳಿಯುವಂತಹ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು.

ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಂತಹ ದೊಡ್ಡ ನಗರಕ್ಕೂ ಇದು ವ್ಯಾಪಿಸುವುದರಲ್ಲಿ ಅಚ್ಚರಿಯಿಲ್ಲ. ಇದನ್ನು ಅರಿತು ಯುವಜನರು ಹಳ್ಳಿಯಲ್ಲೇ ಇದ್ದುಕೊಂಡು ಕೃಷಿಯಲ್ಲಿ ಸಾಧನೆ ಮಾಡಬೇಕು. ಅಗತ್ಯವಾದ ಜ್ಞಾನವನ್ನು ಕೃಷಿ ವಿವಿಗಳಲ್ಲಿ ಪಡೆಯಬಹುದು ಎಂದರು.

ಕಬ್ಬಿನ ಬೆಳೆಯಲ್ಲಿ ವೈಜ್ಞಾನಿಕತೆಯನ್ನು ಬೆಳೆಸಿಕೊಳ್ಳಬೇಕು. ಆರು ಅಡಿ ಅಂತರದಲ್ಲಿ ಕಬ್ಬಿನ ಬಿತ್ತನೆ ಮಾಡಬೇಕು. ಮಧ್ಯದಲ್ಲಿ 13 ವಿವಿಧ ಬೆಳೆಗಳನ್ನು ಬೆಳೆದು ಲಾಭ ಮಾಡಿಕೊಳ್ಳಬಹುದು. ಇದರಲ್ಲಿ ದ್ವಿದಳ ಧಾನ್ಯಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಕಬ್ಬಿಗೆ ಸಾರಜನಕ ಲಭ್ಯವಾಗುತ್ತದೆ. ಕಬ್ಬಿನ ಇಳುವರಿಯೂ ಹೆಚ್ಚುತ್ತದೆ. ರೈತರು ಈ ಬಗ್ಗೆ ಗಮನ ಹರಿಸಬೇಕು. ರೈತರು ಕೃಷಿಯೇತರ ಚಟುವಟಿಕೆಗೆ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ. ಆದರೆ ಕೃಷಿ ಬಗ್ಗೆ ತಾತ್ಸಾರ ಮಾಡುತ್ತಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಸರ್ವೆ ಗಿಡಗಳನ್ನು ಬೆಳೆಸುವಂತೆ ಸಲಹೆ ನೀಡಿದ ಅವರು, ಒಂದು ಎಕರೆಯಲ್ಲಿ 5 ವರ್ಷಗಳ ಕಾಲ ಬೆಳೆದ ಸರ್ವೆ ಬೆಳೆಗೆ 10 ರಿಂದ 12 ಲಕ್ಷಕ್ಕೂ ಹೆಚ್ಚಿನ ಆದಾಯ ಮಾಡಿಕೊಳ್ಳಬಹುದು. ಎರಡು ವರ್ಷದ ಅಂತರ ಬೆಳೆಯಾಗಿ ಇತರೆ ಬೆಳೆಗಳನ್ನು ಬೆಳೆಯಬಹುದಾಗಿದ್ದು, ಇದರಿಂದಲೂ ಲಾಭ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ನಾವೇ ಮಾರುಕಟ್ಟೆ ಮಾಡಲು ಸಹಾಯ ಮಾಡುತ್ತೇವೆ. ರೈತರು ಅರಣ್ಯ ಕೃಷಿಗೂ ಹೆಚ್ಚಿನ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.

10 ಲಕ್ಷಕ್ಕೂ ಹೆಚ್ಚಿನ ರೈತರ ಭೇಟಿ:

ಈ ಬಾರಿಯ ಕೃಷಿ ಮೇಳ ಅತ್ಯಂತ ಯಶಸ್ವಿಯಾಗಿದ್ದು, ಸುಮಾರು 10 ರಿಂದ 12 ಲಕ್ಷ ರೈತರು ಕೃಷಿ ಮೇಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. 20 ಮಂದಿ ರೈತರು ಬೆಳೆ ಬಗ್ಗೆ ತರಬೇತಿ ಪಡೆಯಲು ಬಂದಲ್ಲಿ ನಾವು ಅವರಿಗೆ ತರಬೇತಿ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.ಕಬ್ಬಿನ ಋತುಮಾನ ಬದಲಾವಣೆಯಿಂದ ಇಳುವರಿ ಸಾಧ್ಯ

ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬಿನ ಇಳುವರಿ ಹೆಚ್ಚಿದೆ. ಅಲ್ಲಿನ ಮಣ್ಣು, ಹವಾಗುಣಕ್ಕೆ ಹಾಗೂ ಬೇಸಿಗೆ ಸಮಯದಲ್ಲಿ ಅವರು ಕಟಾವು ಮಾಡುತ್ತಾರೆ. ಹಾಗಾಗಿ ಹೆಚ್ಚಿನ ಇಳುವರಿ ಬರಲು ಸಾಧ್ಯವಾಗುತ್ತದೆ. ನಮ್ಮಲ್ಲಿ ಜೂನ್ ಜುಲೈನಲ್ಲಿ ಕಟಾವು ಮಾಡುವುದರಿಂದ ಹೆಚ್ಚಿನ ಇಳುವರಿ ಸಾಧ್ಯವಾಗುವುದಿಲ್ಲ ಎಂದು ಕೃಷಿ ವಿವಿ ವಿಶೇಷಾಧಿಕಾರಿ ಡಾ.ಕೆ.ಎಂ. ಹರಿಣಿಕುಮಾರ್ ಹೇಳಿದರು.

ಒಂದು ವೇಳೆ ಋತುಮಾನ ಬದಲಾವಣೆ ಮಾಡಿಕೊಂಡು ಬಿತ್ತನೆ ಕಾರ್ಯ ಮಾಡಿದರೆ ಹೆಚ್ಚಿನ ಇಳುವರಿ ಬರುತ್ತೆ. ಆದರೆ, ಕಬ್ಬಿನ ತೂಕ ಕಡಿಮೆಯಾಗುತ್ತದೆ. ಇದರಿಂದ ರೈತರು ನಷ್ಟ ಅನುಭವಿಸಬೇಕಾಗುತ್ತದೆ ಎಂದು ವಿವರಿಸಿದರು.

ಫಿಲಿಫೈನ್ಸ್‌ನಿಂದ ಭತ್ತದ ತಳಿಗಳನ್ನು ತರಿಸಿಕೊಂಡು ಮೊದಲು ನಾವು ಸಂಶೋಧನೆ ನಡೆಸಿ ಎಷ್ಟು ಪ್ರಮಾಣದ ಇಳುವರಿ, ಆರೋಗ್ಯ ದೃಷ್ಠಿಯಿಂದ ಯಾವೆಲ್ಲಾ ಪರಿಣಾಮಗಳಿವೆ ಎಂಬುದನ್ನು ದೃಢೀಕರಿಸಿಕೊಂಡು ನಂತರ ರೈತರಿಗೆ ವಿತರಣೆ ಮಾಡುವ ಕಾರ್ಯ ಪ್ರಾರಂಭಿಸಬೇಕಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ