ವಿಜಯಪುರ: ಪ್ರವಾದಿ ಮಹಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಮುಸ್ಲಿಂ ಸಮುದಾಯದವರು ಪಟ್ಟಣದಲ್ಲಿ ಮಕ್ಕಾ, ಮದೀನಾಗಳ ಸ್ತಬ್ದ ಚಿತ್ರಗಳೊಂದಿಗೆ ಮೆರವಣಿಗೆ ನಡೆಸಿದರು.
ಪಟ್ಟಣದ ಎಲ್ಲಾ ಮಸೀದಿಗಳಿಂದ ಸ್ತಬ್ದ ಚಿತ್ರಗಳುಳ್ಳ ಟ್ರ್ಯಾಕ್ಟರ್ಗಳು ಜಿ.ಎಂ.ಸರ್ಕಲ್ನಲ್ಲಿರುವ ದರ್ಗಾ ಬಳಿಯಲ್ಲಿ ಸೇರಿ ಅಲ್ಲಿಂದ ಮೆರವಣಿಗೆ ಹೊರಟರು. ಮೆರವಣಿಗೆ ಸಮಯದಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಮಕ್ಕಳು ವಿವಿಧ ಬಗೆಯ ಬಾವುಟಗಳನ್ನು ಹಿಡಿದು, ಮೆರವಣಿಗೆಯಲ್ಲಿ ಅಲ್ಲಾಹ್ ಹು ಅಕ್ಬರ್ ಎಂಬ ಘೋಷಣೆ ಕೂಗುತ್ತಾ ಸಾಗಿದರು.
ಬಸ್ ನಿಲ್ದಾಣ, ಅಂಗತಟ್ಟಿ ನಂಜುಂಡಪ್ಪ ವೃತ್ತದ ಮೂಲಕ ತೆರಳಿದ ಮೆರವಣಿಗೆ ಶಿಡ್ಲಘಟ್ಟ ಕ್ರಾಸ್ ನಲ್ಲಿ ಜಮಾಯಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕೂಬಾ ಮಸೀದಿ ಬಳಿ ಅನ್ನದಾನ ಮಾಡಿದರು. ಮುಸ್ಲಿಮರು ನೆಲೆಸಿರುವ ಪ್ರದೇಶಗಳಲ್ಲಿ ಕೆಂಪು ಮತ್ತು ಹಸಿರು ಬಣ್ಣದ ಚಂದ್ರನ ನಡುವೆ ನಕ್ಷತ್ರವಿರುವ ಬಂಟಿಂಗ್ಸ್, ಹಸಿರು ಬಾವುಟಗಳನ್ನು ಕಟ್ಟಿ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿದ್ದರು.