ಬೆಳ್ತಂಗಡಿ: ಬೆಳ್ತಂಗಡಿಯಿಂದ ಬೆಂಗಳೂರು ಹೈಕೋರ್ಟಿಗೆ ತೆರಳಲು 325 ಕಿ.ಮೀ. ಇದ್ದು ಪ್ರಯಾಣ ಮಾತ್ರವಲ್ಲದೆ, ವಸತಿ,ಇತರ ಖರ್ಚುಗಳು ಹೊರೆಯಾಗುತ್ತದೆ. ತಾಲೂಕಿನ ಹಲವಾರು ಲ್ಯಾಂಡ್ ಟ್ರಿಬ್ಯುನಲ್ಗೆ ಸಂಬಂಧಿಸಿದ ಪ್ರಕರಣಗಳು ಹಲವು ದಶಕಗಳಿಂದ ಹೈಕೋರ್ಟಿನಲ್ಲಿ ಬಾಕಿಇದ್ದು ಈ ಎಲ್ಲ ಕಾರಣಗಳಿಂದ ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂದು ವಕೀಲರ ಸಂಘ ಒತ್ತಾಯಿಸಿದೆಶುಕ್ರವಾರ ಬೆಳ್ತಂಗಡಿ ವಕೀಲರ ಸಂಘ ಹೈಕೋರ್ಟು ಪೀಠ ಹೋರಾಟ ಸಮಿತಿ ಬೆಳ್ತಂಗಡಿ ಮತ್ತು ವಿವಿಧ ಸಂಘ ಸಂಸ್ಥೆಗಳ ಜೊತೆ ವಕೀಲರ ಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಒತ್ತಾಯಿಸಲಾಯಿತು.ಹೈಕೋರ್ಟು ಪೀಠ ಹೊರಾಟ ಸಮಿತಿಯ ಬೆಳ್ತಂಗಡಿ ತಾಲೂಕು ಅದ್ಯಕ್ಷ ಧನಂಜಯ ರಾವ್ ಮಾತನಾಡಿ, ಮಂಗಳೂರು ವಕೀಲರ ಸಂಘದಿಂದ 1981ರಿಂದಲೇ ಹೋರಾಟ ಪ್ರಾರಂಭವಾಗಿದೆ. ಮಂಗಳೂರಲ್ಲಿ ಪ್ರಾರಂಭವಾದರೆ ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದ.ಕ ಜಿಲ್ಲೆಯ ಜನರಿಗೆ ಅನುಕೂಲವಾಗುತ್ತದೆ. ನ್ಯಾಯಕ್ಕಾಗಿ ದೂರದ ಬೆಂಗಳೂರಲ್ಲಿ ಅಲೆದಾಡುವ ಸ್ಥಿತಿ ತಪ್ಪುತ್ತದೆ ಎಂದರು.
ಸಭೆಯಲ್ಲಿ ಸಹಿಸಂಗ್ರಹ ಅಭಿಯಾನ, ವಿದ್ಯಾರ್ಥಿಗಳಲ್ಲಿ ಜಾಗೃತಿ, ಒಪ್ಪಿಗೆ ಪತ್ರ ಚಳವಳಿ, ಹೈಕೋರ್ಟಲ್ಲಿ ಪ್ರಕರಣ ಇರುವವರನ್ನು ಒಟ್ಟುಸೇರಿಸುವುದು, ತಾಲೂಕು ಮಟ್ಟದಲ್ಲಿ ಸಮಾವೇಶ ಮಾಡುವುದು, ಸಾಮಾಜಿಕ ಮೀಡಿಯಾ ಮೂಲಕ ಮಾಹಿತಿಯನ್ನು ಇದರ ಅಗತ್ಯತೆಯನ್ನು ಜನಸಾಮಾನ್ಯರಿಗೆ ತಿಳಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂತು.ವಿವಿಧ ಸಂಘಸಂಸ್ಥೆಗಳ ಮುಖಂಡರಾದ ಎಂಜಿನಿಯರ್ ಜಗದೀಶ್, ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಕುಮಾರ್ ಹೆಗ್ಡೆ, ಉದ್ಯಮಿಗಳಾದ ಡೊನಾಲ್ಡ್ ಲೋಬೋ, ವಸಂತ ಶೆಟ್ಟಿ, ಜಯರಾಜ್ ಸಾಲಿಯಾನ್, ಶ್ರಿನಿವಾಸ್ ಗೌಡ, ಬಿ.ಎಂ. ಭಟ್ , ಪ್ರವೀಣ್ ಫರ್ನಾಂಡಿಸ್ ಉಜಿರೆ, ವೆಂಕಣ್ಣ ಕೊಯ್ಯೂರು, ಸೇವಿಯರ್ ಪಾಲೇಲಿ ಮುಂತಾದವರು ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಕಾರ್ಯದರ್ಶಿ ನವೀನ್, ಹಿರಿಯ ವಕೀಲರ ಸಂಘದ ಅದ್ಯಕ್ಷ ಅಲೋಶಿಯಸ್ ಲೋಬೋ, ಹೊರಾಟ ಸಮಿತಿಯ ಉಪಾದ್ಯಕ್ಷ ಶಿವಕುಮಾರ್ ಉಪಸ್ಥಿತರಿದ್ದರು. ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಶೈಲೇಶ್ ಠೋಸರ್ ಸ್ವಾಗತಿಸಿದರು. ಸರಕಾರಿ ಅಭಿಯೋಜಕ ಮನೋಹರ್ ಕುಮಾರ್ ನಿರೂಪಿಸಿದರು. ಬಳಿಕ ಹೋರಾಟದ ರೂಪುರೇಷೆ ಮಾಡಲಾಯಿತು.