ಅಕ್ರಮ ಗಣಿಗಾರಿಕೆ ಮಾಡಿದವರಿಗೆ ಎಂದಿಗೂ ಅವಕಾಶ ನೀಡಬೇಡಿ. ಇಂಥವರಿಗೆ ಅಧಿಕಾರ ಕೊಟ್ಟರೆ ಲೂಟಿ ಹೊಡೆಯುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕುರುಗೋಡು: ಅಕ್ರಮ ಗಣಿಗಾರಿಕೆ ಮಾಡಿದವರಿಗೆ ಎಂದಿಗೂ ಅವಕಾಶ ನೀಡಬೇಡಿ. ಇಂಥವರಿಗೆ ಅಧಿಕಾರ ಕೊಟ್ಟರೆ ಲೂಟಿ ಹೊಡೆಯುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಸಮೀಪದ ಏಳುಬೆಂಚಿ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯನ್ನು ಜನಾರ್ದನ ರೆಡ್ಡಿ ಸಿಂಗಾಪುರ, ಬೀಜಿಂಗ್ ಮಾಡುವೆ ಅಂತ ಹೇಳ್ತಾರೆ. ರೆಡ್ಡಿ ಬೆಂಬಲಿಸುತ್ತಿರುವ ಬಿಜೆಪಿ ಅಭ್ಯರ್ಥಿಯನ್ನು ಯಾವುದೇ ಕಾರಣಕ್ಕೂ ಗೆಲ್ಲಿಸಬಾರದು. ಸಂಡೂರಿನಲ್ಲಿ ರಸ್ತೆ, ನೀರು, ಶಾಲೆ, ಅಂಗನವಾಡಿ, ಆಸ್ಪತ್ರೆ, ಮೊಬೈಲ್ ಕ್ಲಿನಿಕ್ ಸೇರಿ ಏನೇನು ಅಭಿವೃದ್ಧಿ ಆಗಿದೆಯೋ ಅದೆಲ್ಲ ಸಂತೋಷ್ ಲಾಡ್ ಮತ್ತು ತುಕಾರಾಮ್ ಅವರ ಅವಧಿಯಲ್ಲಿ ಮಾತ್ರ. ಅಭಿವೃದ್ಧಿ ಬಗ್ಗೆ ಹೆಚ್ಚು ಒಲವು ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ಸಂಸದ ಈ. ತುಕಾರಾಂ ಪತ್ನಿ ಅನ್ನಪೂರ್ಣಾ ಅವರಿಗೆ ಮತ ಚಲಾಯಿಸಿ, ನನ್ನ ಕೈಬಲ ಬಡಿಸಬೇಕು ಎಂದು ಮನವಿ ಮಾಡಿದರು.ರೈತರ ಹಿತದೃಷ್ಟಿಯಿಂದ ಬೇಸಿಗೆ ಬೆಳೆಗೂ ನೀರು ಹರಿಸುತ್ತೇವೆ. ಬಿಜೆಪಿ ಮಂಡಿಸಿದ ಆಯ-ವ್ಯಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಕೇವಲ ₹೨೧ ಸಾವಿರ ಕೋಟಿ ಮೀಸಲಿಟ್ಟಿದ್ದರು. ಕಾಂಗ್ರೆಸ್ ಸರ್ಕಾರ ₹೩೯,೧೨೧ ಕೋಟಿ ಮೀಸಲಿಟ್ಟಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮಕ್ಕೆ ₹೫ ಸಾವಿರ ಕೋಟಿ ನೀಡಿದ್ದೇವೆ. ಜನಸಾಮಾನ್ಯರ ಅಭಿವೃದ್ಧಿಗಾಗಿ ಏನು ಬೇಕು? ಎಲ್ಲ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದರು.
ಅಭ್ಯರ್ಥಿ ಅನ್ನಪೂರ್ಣಾ ತುಕಾರಾಂ, ಸಚಿವರಾದ ಸಂತೋಷ್ ಲಾಡ್ ಮತ್ತು ಶಿವರಾಜ್ ತಂಗಡಗಿ, ಶಾಸಕ ಬಿ.ನಾಗೇಂದ್ರ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಜಯ್ ಸಿಂಗ್ ಮತ್ತು ಜೆ.ಎನ್. ಗಣೇಶ್ ಮಾತನಾಡಿದರು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಮಾಜಿ ಶಾಸನ ಪಿ.ಟಿ. ಪರಮೇಶ್ವರ ನಾಯಕ್ ಮತ್ತು ಭೀಮಾ ನಾಯಕ್, ಬಿ.ವಿ. ಶಿವಯೋಜಿ, ಅಲ್ಲಂ ಪ್ರಶಾಂತ್, ಅಮರೇಶ ಶಾಸ್ತ್ರೀ, ಗಂಗಾಧರ ಗೌಡ, ಕೆ. ಗಂಗಣ್ಣ, ಕೆ. ಅಮರೇಶ್, ಎಸ್. ತಮ್ಮನಗೌಡ, ವಿನಾಯಕ, ಸದಾನಂದ, ವಿನಯ್ ಇದ್ದರು.