30 ವರ್ಷ ರಾಜಕೀಯ ಜೀವನದಲ್ಲಿ ಎಂದಿಗೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತವನಲ್ಲ. ಮಾಜಿ ಶಾಸಕರಾದ ಬಸಪ್ಪ, ಅಶ್ವತ್ ರೆಡ್ಡಿ, ಎಚ್.ಪಿ. ರಾಜೇಶ್, ಎಸ್.ವಿ. ರಾಮಚಂದ್ರ ಮತ್ತು ಹಾಲಿ ಶಾಸಕ ಬಿ.ದೇವೇಂದ್ರಪ್ಪ ಅವರ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ನನ್ನ ಈ ತ್ಯಾಗ ಮತ್ತು ಸೇವೆಯನ್ನು ಗುರುತಿಸಿ ಕ್ಷೇತ್ರದ ಜನ ನನ್ನನ್ನು ಸದಾ ಬೆಂಬಲಿಸಿದ್ದಾರೆ. ಈ ಬಾರಿ ನನಗೂ ಒಂದು ಅವಕಾಶ ನೀಡಿ ಎಂದು ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಕೆ.ಪಿ. ಪಾಲಯ್ಯ ಹೇಳುವ ಮೂಲಕ 2028ರ ಚುನಾವಣಾ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
- ಜನ್ಮದಿನ ಅಂಗವಾಗಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಕೆ.ಪಿ.ಪಾಲಯ್ಯ
- - -
ಕನ್ನಡಪ್ರಭ ವಾರ್ತೆ ಜಗಳೂರು
30 ವರ್ಷ ರಾಜಕೀಯ ಜೀವನದಲ್ಲಿ ಎಂದಿಗೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತವನಲ್ಲ. ಮಾಜಿ ಶಾಸಕರಾದ ಬಸಪ್ಪ, ಅಶ್ವತ್ ರೆಡ್ಡಿ, ಎಚ್.ಪಿ. ರಾಜೇಶ್, ಎಸ್.ವಿ. ರಾಮಚಂದ್ರ ಮತ್ತು ಹಾಲಿ ಶಾಸಕ ಬಿ.ದೇವೇಂದ್ರಪ್ಪ ಅವರ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ನನ್ನ ಈ ತ್ಯಾಗ ಮತ್ತು ಸೇವೆಯನ್ನು ಗುರುತಿಸಿ ಕ್ಷೇತ್ರದ ಜನ ನನ್ನನ್ನು ಸದಾ ಬೆಂಬಲಿಸಿದ್ದಾರೆ. ಈ ಬಾರಿ ನನಗೂ ಒಂದು ಅವಕಾಶ ನೀಡಿ ಎಂದು ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಕೆ.ಪಿ. ಪಾಲಯ್ಯ ಹೇಳುವ ಮೂಲಕ 2028ರ ಚುನಾವಣಾ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದರು.
ಪಟ್ಟಣದ ಗುರುಭವನದಲ್ಲಿ ಸೋಮವಾರ ಕಾಂಗ್ರೆಸ್ ಮುಖಂಡ ಕೆ.ಪಿ. ಪಾಲಯ್ಯ ಅವರ ಅಭಿಮಾನಿಗಳು ಏರ್ಪಡಿಸಿದ್ದ ಜನ್ಮದಿನೋತ್ಸವ ಆಚರಣೆಯಲ್ಲಿ ಕೇಕ್ ಕತ್ತರಿಸಿ, ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಇದೇ ಕ್ಷೇತ್ರದಲ್ಲಿ ಹುಟ್ಟಿ, 30 ವರ್ಷಗಳಿಂದ ಜನರ ಸುಖ-ದುಃಖಗಳಲ್ಲಿ ಭಾಗಿಯಾಗುತ್ತಾ ನಿರಂತರ ಸೇವೆ ಮಾಡುತ್ತಿದ್ದೇನೆ. 7 ವರ್ಷಗಳ ಕಾಲ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷನಾಗಿ ಇಡೀ ರಾಜ್ಯಾದ್ಯಂತ ಸಂಘಟನೆ ಮಾಡಿದ್ದರೂ, ಹಳ್ಳಿಯ ಜನರ ಒಡನಾಟ ಎಂದಿಗೂ ತಪ್ಪಿಲ್ಲ. ದೇವರು ಮತ್ತು ಹಿರಿಯರು ಯಾವಾಗ ನಮಗೆ ಉನ್ನತ ಅಧಿಕಾರ ಅನುಗ್ರಹಿಸುತ್ತಾರೋ ಅದನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ ಎಂದರು.
ನಿಗಮ ಮಂಡಳಿ ಅಧ್ಯಕ್ಷ ಭಾಗ್ಯ:
ರಾಜ್ಯ ಬ್ರಾಹ್ಮಣ ನಿಗಮ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿ, ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಕೆ.ಪಿ. ಪಾಲಯ್ಯ ಜನ್ಮದಿನೋತ್ಸವ ಸಮಾರಂಭ ಹೊಸ ರಾಜಕೀಯ ದಿಕ್ಸೂಚಿಗೆ ಸಾಕ್ಷಿಯಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವ ಪೂರ್ಣ ಭರವಸೆಯಿದೆ. ಜಾರಕಿಹೊಳಿ ಆಪ್ತರಾಗಿರುವ ಕೆ.ಪಿ. ಪಾಲಯ್ಯ ಪಕ್ಷದ ಸಂಘಟನೆಗಾಗಿ ಹಗಲಿರುಳು ಶ್ರಮಿಸಿದ್ದಾರೆ. 2 ಬಾರಿ ಜಿಪಂ ಸದಸ್ಯ, ಪಕ್ಷದ ಎಸ್ಟಿ ಘಟಕದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಿಷ್ಠೆಗೆ ತಕ್ಕಂತೆ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುವುದು ಖಚಿತ ಎಂದರು.
ದೇವಸ್ಥಾನಗಳಲ್ಲಿ ಪೂಜೆ:
ಹುಟ್ಟುಹಬ್ಬದ ಅಂಗವಾಗಿ ಜಗಳೂರಿನ ದೊಡ್ಡ ಮಾರಿಕಾಂಬ ದೇವಸ್ಥಾನ, ಈಶ್ವರ ದೇವಸ್ಥಾನ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಕೆ.ಪಿ.ಪಾಲಯ್ಯ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ, ಮಹಾತ್ಮ ಗಾಂಧಿ ವೃತ್ತದಲ್ಲಿ ಕೆ.ಪಿ.ಪಿ. ಅವರಿಗೆ ಅಭಿಮಾನಿಗಳು ಹೂವಿನ ಹಾರಗಳ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು. ಅಲ್ಲಿಂದ ಮೆರವಣಿಗೆಯ ಮೂಲಕ ಸ್ಥಳೀಯ ಗುರುಭವನಕ್ಕೆ ಕರೆತರಲಾಯಿತು.
ಯುವಜನರ ಸ್ವಯಂಪ್ರೇರಿತ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ತಾಲೂಕಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಬ್ರೆಡ್ ಹಾಗೂ ಹಣ್ಣು ವಿತರಿಸಲಾಯಿತು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಅರಸಿಕೆರೆ ಬ್ಲಾಕ್ ಅಧ್ಯಕ್ಷ ಮಂಜುನಾಥ್, ಪ್ರಮುಖ ಮುಖಂಡರಾದ ಯರಬಳ್ಳಿ ಉಮಾಪತಿ, ಮಂಜುನಾಥ್, ಸುರೇಶ್ಗೌಡ್ರು, ಸಿ.ತಿಪ್ಪೇಸ್ವಾಮಿ, ಪ್ರಮುಖ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
- - -
-೧ಜೆಎಲ್ಆರ್ಚಿತ್ರ೧ಎ:
ಜಗಳೂರು ಗುರುಭವನದಲ್ಲಿ ಕಾಂಗ್ರೆಸ್ ಮುಖಂಡ ಕೆ.ಪಿ. ಪಾಲಯ್ಯ ಜನ್ಮದಿನ ಹಿನ್ನೆಲೆ ವಿವಿಧ ಮುಖಂಡರು ಹಾಗೂ ಅಭಿಮಾನಿಗಳು ಹೂವಿನ ಹಾರ ಹಾಕಿ ಶುಭ ಕೋರಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.