ದಾವಣಗೆರೆ: ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮದಡಿ 31 ಕಂದಾಯ ಜಿಲ್ಲೆಗಳಲ್ಲಿ ಬರ ಘೋಷಣೆಯ ಹಿನ್ನೆಲೆಯಲ್ಲಿ ಬರಗಾಲದಲ್ಲಿ ಮಕ್ಕಳಲ್ಲಿನ ಪೌಷ್ಟಿಕಾಂಶ ಕೊರತೆಯಾಗಬಾರದೆಂದು ಏ.11ರಿಂದ ಮೇ 28ರವರೆಗೆ ಭಾನುವಾರ ಹೊರತುಪಡಿಸಿ ನಿರಂತರವಾಗಿ 41 ದಿನಗಳ ಕಾಲ ಮಧ್ಯಾಹ್ನದ ಬಿಸಿಯೂಟ ನೀಡಲು ಸಿದ್ಧತೆ ನಡೆಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಶಾಲೆ ಆಯ್ಕೆ: ಗ್ರಾಮ, ಕೇಂದ್ರ ಸ್ಥಾನದಲ್ಲಿ ಒಂದಕ್ಕಿಂತ ಹೆಚ್ಚು ಶಾಲೆಗಳಿದ್ದಲ್ಲಿ ಅವುಗಳಲ್ಲಿ ಹೆಚ್ಚು ಮಕ್ಕಳಿರುವ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆ ಶಾಲೆಗೆ ಇತರೆ ಶಾಲೆ ಮಕ್ಕಳು ಬಂದು ಊಟ ಮಾಡಿ ಹೋಗಬಹುದಾಗಿದೆ. ಪ್ರತಿ 2 ಕಿಮೀ ವ್ಯಾಪ್ತಿಯ ಒಳಗೆ ಕೇಂದ್ರಗಳನ್ನು ಗುರುತಿಸುವ ಕೆಲಸ ಮಾಡಬೇಕಾಗಿದೆ. 250ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ನಿರ್ವಹಣೆಗೆ ಹೆಚ್ಚುವರಿಯಾಗಿ ಶಿಕ್ಷಕರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಬಹುದಾಗಿದೆ ಎಂದರು.
ಪೋಷಕರಿಂದ ಒಪ್ಪಿಗೆ ಪತ್ರ: ಬೇಸಿಗೆ ರಜೆಯಲ್ಲಿ ಶಾಲೆಗೆ ಬಂದು ಊಟ ಮಾಡುವ ವಿದ್ಯಾರ್ಥಿಗಳ ವಿವರವನ್ನು ಸಂಗ್ರಹಿಸಲು ತಿಳಿಸಿ. ಯಾರು ಬಿಸಿಯೂಟ ಮಾಡಲು ಮಕ್ಕಳನ್ನು ಕಳುಹಿಸಲು ಒಪ್ಪಿಗೆ ನೀಡುವ ಪೋಷಕರಿಂದ ಒಪ್ಪಿಗೆ ಪತ್ರ ಸಂಗ್ರಹಿಸಬೇಕು. ಆ ಮಕ್ಕಳಿಗೆ ಮಾತ್ರ ಹಿಂದಿನ ಮೆನುವಿನಂತೆ ಊಟ ತಯಾರು ಮಾಡಿ ವಿತರಣೆ ಮಾಡಬೇಕಾಗಿದೆ ಎಂದರು.ಶುದ್ಧ ಕುಡಿಯುವ ನೀರು, ಕಲಬೆರೆಕೆ ಆಹಾರ ತಡೆ: ಬಿಸಿಯೂಟ ಮಾಡುವ ಕೇಂದ್ರಗಳಿಗೆ ಆಯಾ ಗ್ರಾಮ ಪಂಚಾಯಿತಿಗಳು ಮತ್ತು ತಾಲೂಕು ಕೇಂದ್ರವಾಗಿದ್ದಲ್ಲಿ ಸ್ಥಳೀಯ ಸಂಸ್ಥೆಗಳು ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು.