ಮೂಲ್ಕಿ: ಜೀವನದಲ್ಲಿನ ಒಳ್ಳೆತನಗಳು ಸಂಸ್ಮರಣೆಯಾಗುತ್ತದೆ. ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಶ್ರೀನಿವಾಸ ಭಾಗವತರಂತಹ ವ್ಯಕ್ತಿತ್ವ ಬೇರೆ ಯಾರು ಇಲ್ಲ ಎಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವಿ ಪ್ರಸಾದ ಅಸ್ರಣ್ಣ ಹೇಳಿದರು.
ಸಮಾರಂಭದಲ್ಲಿ ಅಗರಿ ರಘುರಾಮ ಭಾಗವತ ಪ್ರಶಸ್ತಿಯನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡಿಗೆ 50 ಇಂಚಿನ ಎಲ್ ಇಡಿಟಿವಿಯೊಂದಿಗೆ ಮತ್ತು ಅಗರಿ ಪ್ರಶಸ್ತಿಯನ್ನು ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ ವಹಿಸಿದ್ದು, ಹಿಂದು ವಿದ್ಯಾದಾಯಿನೀ ಸಂಘ ಸುರತ್ಕಲ್ ನ ಅಧ್ಯಕ್ಷ ಜಯಚಂದ್ರ ಹತ್ವಾರ್ ಎಸ್. ಕಿನ್ನಿಗೋಳಿಯ ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಶ್ರೀನಿವಾಸ ಕಾಲೇಜಿನ ಫ್ರೊಫೆಸರ್ ಶ್ರೀನಾಥ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರೀಶ ಆಚಾರ್ಯ ಪಿ., ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ರಮೇಶ್ ಭಟ್ ಎಸ್. ಜಿ., ಯಕ್ಷಯಾನ ಸಂಚಾಲಕಿ ಪೂರ್ಣಿಮಾ ಯತೀಶ್ ರೈ, ಅಗರಿ ದಿನೇಶ್ ರಾವ್ ಉಪಸ್ಥಿತರಿದ್ದರು. ಅಗರಿ ಸಂಸ್ಮರಣ ಭಾಷಣವನ್ನು ಕೃಷ್ಣ ಪ್ರಕಾಶ ಉಳಿತ್ತಾಯ ಅವರು ಹಾಗೂ ಅಭಿನಂದನಾ ಭಾಷಣವನ್ನು ಡಾ. ವಾದಿರಾಜ ಕಲ್ಲೂರಾಯ ಮಾಡಿದರು. ಬೆಳಗ್ಗೆಯಿಂದ ಸಂಜೆವರೆಗೆ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ನಡೆಯಿತು. ಅಗರಿ ರಾಘವೇಂದ್ರ ರಾವ್ ಸ್ವಾಗತಿಸಿದರು, ಗಿರೀಶ್ ನಾವಡ ನಿರೂಪಿಸಿದರು.