ಆಲೂರಿನಲ್ಲಿ ಮತ್ತೆ 3 ತಿಂಗಳು ರೈಲು ನಿಲುಗಡೆಗೆ ಸಮ್ಮತಿ

KannadaprabhaNewsNetwork | Published : Jan 1, 2025 1:02 AM

ಜಿಲ್ಲೆಯ ಆಲೂರು ತಾಲೂಕು ಕೇಂದ್ರದಲ್ಲಿ ಕಳೆದ ಆರು ತಿಂಗಳಿನಿಂದ ಪ್ರಯಾಣಿಕ ರೈಲು ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಆದರೆ, ಕೆಲ ದಿನಗಳಿಂದ ನಿಲುಗಡೆಯನ್ನು ಸ್ಥಗಿತ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಮೂರು ತಿಂಗಳು ರೈಲನ್ನು ನಿಲ್ಲಿಸಲು ಸಮ್ಮಿತಿಸಲಾಗಿದೆ ಎಂದು ರಾಧಮ್ಮ ಜನಸ್ಪಂದನಾ ವೇದಿಕೆ ಸಂಸ್ಥಾಪಕ ಹೇಮಂತ್ ಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ಆಲೂರು ತಾಲೂಕು ಕೇಂದ್ರದಲ್ಲಿ ಕಳೆದ ಆರು ತಿಂಗಳಿನಿಂದ ಪ್ರಯಾಣಿಕ ರೈಲು ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಆದರೆ, ಕೆಲ ದಿನಗಳಿಂದ ನಿಲುಗಡೆಯನ್ನು ಸ್ಥಗಿತ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಮೂರು ತಿಂಗಳು ರೈಲನ್ನು ನಿಲ್ಲಿಸಲು ಸಮ್ಮಿತಿಸಲಾಗಿದೆ ಎಂದು ರಾಧಮ್ಮ ಜನಸ್ಪಂದನಾ ವೇದಿಕೆ ಸಂಸ್ಥಾಪಕ ಹೇಮಂತ್ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ನಾವು ಸಲ್ಲಿಸಿದ ಮನವಿ ಆಧಾರದ ಮೇಲೆ ಆಲೂರು ರೈಲ್ವೆ ನಿಲ್ದಾಣಕ್ಕೆ ೨೦೨೪ ಫೆಬ್ರವರಿ ೭ ರಂದು ಪ್ರಾಯೋಗಿಕವಾಗಿ ಆರು ತಿಂಗಳವರೆಗೆ ರೈಲು ನಿಲುಗಡೆ ಆದೇಶ ಹೊರಡಿಸಿತ್ತು. ನಂತರ ಮತ್ತೊಮ್ಮೆ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣಗೆ ಮನವಿ ಸಲ್ಲಿಸಿದ್ದರಿಂದ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಆದರೆ ಈ ಡಿಸೆಂಬರ್ ೪ ರಿಂದ ರೈಲ್ವೆ ನಿಲ್ಗಡೆ ಸಾಧ್ಯವಿಲ್ಲ ಎಂದು ಆದೇಶ ಹೊರಡಿಸಿದೆ. ರಾಧಮ್ಮ ಜನ ಸ್ಪಂದನ ಸಂಸ್ಥೆಯಿಂದ ಖುದ್ದಾಗಿ ಹುಬ್ಬಳಿಯ ನೈರುತ್ಯ ಇಲಾಖೆ ಸಂಪರ್ಕಿಸಿದಾಗ ಅಲ್ಲಿನ ಸೆಕ್ರೆಟರಿ ಸುನಿಲ್ ಆಲೂರು ರೈಲ್ವೆ ನಿಲ್ಯಾಣದಲ್ಲಿ ರೈಲ್ವೆ ಆದಾಯವು ಪ್ರತಿ ತಿಂಗಳು ಅಂದರೆ ಕಳೆದ ನವಂಬರ್ ತಿಂಗಳಲ್ಲಿ ೧೧,೩೦೦ ಮತ್ತು ಅಕ್ಟೋಬರ್ ನಲ್ಲಿ ₹೯೮೦೦ ಸಂಗ್ರಹವಾಗಿದೆ ಎಂದರು. ನವೆಂಬರ್ ನಲ್ಲಿ ೧೯೨ ಜನ ಆಲೂರು ನಿಲ್ದಾಣದಲ್ಲಿ ಟಿಕೆಟ್ ತೆಗೆದುಕೊಂಡಿದ್ದಾರೆ. ಆದರೆ ರೈಲ್ವೆ ಇಲಾಖೆಯು ಯಶವಂತಪುರದಿಂದ ಆಲೂರಿಗೆ ಬರುವ ಪ್ರಯಾಣಿಕರ ಟಿಕೆಟ್ ಆದಾಯವನ್ನು ಪರಿಗಣಿಸದೆ ಅಲ್ಲಿನ ಆದಾಯವನ್ನು ಯಶವಂತಪುರಕ್ಕೆ ಮಾತ್ರ ಸೀಮಿತ ಎಂದು ಪರಿಗಣಿಸಿದೆ ರೈಲ್ವೆ ನಿಯಮದ ಪ್ರಕಾರ ತಿಂಗಳಿಗೆ ಕನಿಷ್ಠ ₹೩೦೦೦೦ ಆದಾಯ ಬಂದಿದ್ದರೆ ರೈಲ್ವೆ ಕಮರ್ಷಿಯಲ್ ಇಲಾಖೆ ನಿಲುಗಡೆ ಆದೇಶವನ್ನು ರದ್ದು ಪಡಿಸುತ್ತಿರಲಿಲ್ಲ. ನಿಗದಿತ ಪ್ರಮಾಣದಲ್ಲಿ ಆಲೂರು ನಿಲ್ದಾಣದಲ್ಲಿ ಆದಾಯ ಬಂದಿರುವುದಿಲ್ಲ ಎಂದು ನಮಗೆ ತಿಳಿಸಿದ್ದಾರೆ. ನಾವು ಸಮಗ್ರವಾಗಿ ಅಧ್ಯಯನವನ್ನು ಮಾಡಿ ರೈಲ್ವೆ ಇಲಾಖೆಗೆ ಮತ್ತೊಮ್ಮೆ ಪುನರ್ ಪರಿಶೀಲಿಸಿ ಎಂದು ಕೆಲವೊಂದು ಅಂಕಿ ಅಂಶಗಳ ಸಮೇತ ಗಮನ ಸೆಳೆದಿದ್ದೇವೆ ಎಂದರು.

ದೇಶದ ಎಷ್ಟೋ ರೈಲು ನಿಲ್ದಾಣಗಳಲ್ಲಿ ₹೬,೦೦೦ ಕ್ಕಿಂತ ಕಡಿಮೆ ಆದಾಯವಿದ್ದರೂ ಶಾಶ್ವತ ನಿಲುಗಡೆಯನ್ನು ಮಾಡಿಕೊಟ್ಟಿದ್ದಾರೆ. ನಮ್ಮ ರಾಜ್ಯದ ವಿಜಯಪುರ ಜಿಲ್ಲೆಯ ನಿಂಬಾಳ್ ನಿಲ್ದಾಣದಲ್ಲಿ ಕಳೆದ ವರುಷ ಸಂಸದರು ರಮೇಶ್ ಜಿಗುಣಗಿ ಶಾಶ್ವತ ನಿಲುಗಡೆಯನ್ನು ಕಡಿಮೆಯಾಗದೆ ಇದ್ದರೂ ಸಹ ಮಾಡಿಸಿಕೊಟ್ಟಿದ್ದಾರೆ. ಇದೇ ಮಾದರಿಯಲ್ಲಿ ನಮ್ಮ ಕ್ಷೇತ್ರದ ಸಂಸದರು ಕೂಡ ರೈಲ್ವೆ ಕೆಲಸ ಮಂತ್ರಿಗಳಾದ ಅಶ್ವಿನಿ ವೈಷ್ಣವ ಬಳಿ ವಿಶೇಷ ಮನವಿಯನ್ನ ಸಲ್ಲಿಸಿ ಶಾಶ್ವತ ನಿಲುಗಡೆಯನ್ನ ಮಾಡಿಸಿಕೊಡುತ್ತೇನೆ ಎಂದು ನಮಗೆ ಭರವಸೆ ಕೊಟ್ಟಿದ್ದಾರೆ. ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿ ೩೦ ಮೈಸೂರಿನ ಡಿ ಆರ್ ಎಂ ಶಿಲ್ಪಿ ಅಗರ್ವಾಲ್ ಅವರಿಗೆ ದೂರವಾಣಿ ಕರೆ ಮಾಡಿ ತಕ್ಷಣವೇ ಮೂರು ತಿಂಗಳ ನಿಲುಗಡೆಯನ್ನು ಮಾಡಿಕೊಡಿ ಎಂದು ಸೂಚನೆ ಕೊಟ್ಟಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿನಯ್, ಸೋಮಶೇಖರ್‌ ಇದ್ದರು.