ಕೇರಳಕ್ಕೆ ಸಾಗಿಸಲು ಸಂಗ್ರಹಿಸಿದ್ದ ಬಿತ್ತನೆ ಬೀಜದ ಅಕ್ರಮ ದಾಸ್ತಾನು ಕೇಂದ್ರಗಳ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 459 ಚೀಲ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡಿದ್ದಾರೆ.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ. ರವಿ ಮಾತನಾಡಿ, ನಿಖರ ಮಾಹಿತಿ ಮೇರೆಗೆ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಗೋದಾಮು ಮತ್ತು ಸಿಂಧುವಳ್ಳಿ ಗ್ರಾಮದ ಕೆ.ಎ. ಆಗ್ರೋ ಬಿತ್ತನೆ ಬೀಜ ಮಾರಾಟ ಕೇಂದ್ರದ ಮೇಲೆ ದಾಳಿ ನಡೆಸಲಾಗಿದ್ದು, ಅಲ್ಲಿ ಸುಮಾರು ಪರವಾನಗಿಯಲ್ಲಿ ನಮೂದಿಸದೆ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 230 ಚೀಲ ಮತ್ತು ಯಾವುದೇ ಸಂಸ್ಥೆಯ ಲೇಬಲ್ ಇಲ್ಲದ 110 ಚೀಲ ಬಿತ್ತನೆ ಬೀಜ ಹಾಗೂ ವಾರಂಗಲ್ ಸಂಸ್ಥೆಯ ಸುಮಂಜಲಿ ಸೀಡ್ಸ್ ಹಾಗೂ ಫಾರ್ಮ್ ಕಂಪನಿಗೆ ಸೇರಿದ 83 ಚೀಲ, ವೆಂಕಟೇಶವರ ಸೀಡ್ಸ್ ದಾಸಪುರಂಗೆ ಸೇರಿದ 36 ಚೀಲ ಸೇರಿದಂತೆ ಒಟ್ಟು 459 ಚೀಲ ಬಿತ್ತನೆ ಬೀಜಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಮೇಲ್ನೋಟಕ್ಕೆ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ನಡೆಸಲು ಈ ಕೇಂದ್ರದಲ್ಲಿ ಜ್ಯೋತಿ ತಳಿಯ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಇಡಲಾಗಿತ್ತು ಎಂಬುದು ಕಂಡುಬಂದಿದ್ದು, ಇವುಗಳನ್ನು ವಶಕ್ಕೆ ಪಡೆಯಲಾಗಿದೆ. ಹಿರಿಯ ಕೃಷಿ ಅಧಿಕಾರಿಗಳ ಗಮನಕ್ಕೆ ತಂದು ಅಕ್ರಮ ದಾಸ್ತಾನುದಾರರ ಮೇಲೆ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ದಾಳಿಯಲ್ಲಿ ಮೈಸೂರು ಕೃಷಿ ಜಾಗೃತ ದಳದ ಉಪ ನಿರ್ದೇಶಕರಾದ ಭಾನು ಪ್ರಕಾಶ್, ವೆಂಕಟೇಶ್, ಎಚ್.ಬಿ. ದಿವಾಕರ, ಸಹಾಯಕ ಕೃಷಿ ನಿರ್ದೇಶಕ ಎಸ್.ಕೆ. ರವಿ, ಕೃಷಿ ಅಧಿಕಾರಿಗಳಾದ ಮಧುರಾ ಮತ್ತು ತಂಡ ಭಾಗವಹಿಸಿದ್ದರು.